ಹುಬ್ಬಳ್ಳಿ ಗಣೇಶೋತ್ಸವಕ್ಕೆ ಪೊಲೀಸ್ ಕಮೀಷನರೇಟ್ ಹೈ ಅಲರ್ಟ್
ಹುಬ್ಬಳ್ಳಿ, ಆಗಸ್ಟ್ 27: ಕೊರೊನಾದಿಂದಾಗಿ ಎರಡು ವರ್ಷ ಕಳೆಗುಂದಿದ್ದ ಗಣೇಶೋತ್ಸವ ಈ ವರ್ಷ ಮರುಗು ಪಡೆಯಲಿದೆ. ರಾಜ್ಯದ ಜನತೆಯ ಕುತೂಹಲಕ್ಕೆ ಕಾರಣವಾಗಿರುವ ಹುಬ್ಬಳ್ಳಿ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಕೂಡ ಅವಳಿನಗರದಲ್ಲಿ ಸಾಕಷ್ಟು ಬಂದೋಬಸ್ತ್ಗೆ ಮುಂದಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಾಣಿಜ್ಯ ನಗರಿಯಲ್ಲಿ ಠಿಕಾಣಿ ಹೂಡಲಿದ್ದಾರೆ.
ಈಗಾಗಲೇ ಸಾಕಷ್ಟು ಚರ್ಚೆಗೆ ಬಂದಿರುವ ಈದ್ಗಾ ಮೈದಾನದ ವಿಷಯವನ್ನು ಹತ್ತಿಕ್ಕಲು ಹಾಗೂ ವ್ಯವಸ್ಥಿತ ರೀತಿಯಲ್ಲಿ ಆಚರಣೆ ಮಾಡಲು ಪೊಲೀಸ್ ಕಮೀಷನರೇಟ್ ನಿರ್ಧಾರ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧ ಹೇರಿದ್ದು, ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸೂಕ್ತ ನಿರ್ಧಾರಕ್ಕೆ ಮುಂದಾಗಿದೆ. ಇನ್ನೂ ಗಣೇಶೋತ್ಸವಕ್ಕೆ 700 ಕ್ಕೂ ಹೆಚ್ಚು ಮಹಾಮಂಡಳಗಳು ಸಿದ್ಧವಾಗಿವೆ. ಇದರ ಜೊತೆಯಲ್ಲಿ ಮನೆ ಮನೆಯಲ್ಲಿಯೂ ಗಣೇಶನನ್ನು ಸಂಭ್ರಮದಿಂದ ಸ್ವಾಗತಿಸಲು ಸಾರ್ವಜನಿಕರು ಮುಂದಾಗಿದ್ದಾರೆ.
ಗಣೇಶ ಚತುರ್ಥಿ 2022: ಗಣಪತಿಯ ಆ ಒಂದು ಮಂತ್ರದ ಪ್ರಭಾವದಿಂದ ಇಂದ್ರನಿಗೆ ಸಾವಿರ ಕಣ್ಣುಗಳು
ಗಣೇಶೋತ್ಸವ ಎಂದರೆ ನೆನಪಾಗುವುದೇ ಹುಬ್ಬಳ್ಳಿ. ಹೀಗಾಗಿ ಹುಬ್ಬಳ್ಳಿ ಗಣೇಶೋತ್ಸವ ನೋಡಲು ಸುತ್ತಮುತ್ತಲಿನ ಊರುಗಳಿಂದ ಸೇರಿ ಗದಗ, ಕೊಪ್ಪಳ, ಹಾವೇರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಕಡೆಯಿಂದ ಜನರು ನಗರಕ್ಕೆ ಬರುತ್ತಾರೆ. ಇಲ್ಲಿನ ಗಣೇಶೋತ್ಸವದ ಮಂಟಪ, ಅಲಂಕಾರ ನೋಡಲೆಂದೆ ಹೆಚ್ಚು ಜನರು ಬರುತ್ತಾರೆ. ಹೀಗಾಗಿ ಮಂಟಪ ಸುರಕ್ಷತೆ, ಪಟಾಕಿ ಹೊಡೆಯುವುದು, ಧ್ವನಿವರ್ಧಕ ಬಳಕೆ, ಮೆರವಣಿಗೆ ಸೇರಿದಂತೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಕಮೀಷನರೇಟ್ ಗಜಾನನ ಮಂಡಳಗಳಿಂದ ಸ್ವಯಂಸೇವಕರ ನೇಮಕ ಸೇರಿ ಶಾಂತಿ-ಸುವವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಭದ್ರತೆ ಹೆಚ್ಚಿಸಿದೆ.
ಆಗಸ್ಟ್ 31 ರಿಂದ ಸೆಪ್ಟೆಂಬರ್ 11 ರವರೆಗೆ ಗಣೇಶೋತ್ಸವ
ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟಾರೆ 700 ಕ್ಕೂ ಹೆಚ್ಚು ಗಣೇಶೋತ್ಸವ ಮಹಾಮಂಡಳಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿವೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 11 ರವರೆಗೆ ಗಣೇಶೋತ್ಸವ ಆಚರಣೆಯಾಗಲಿದೆ. ಆಗಸ್ಟ್ 31 ರ ಮೆರವಣಿಗೆ ದಿನ ಹಾಗೂ 3,5,7,9 ಮತ್ತು 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಸೇರಿ ನಗರದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
3000ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ
ಅವಳಿನಗರದ ವ್ಯಾಪ್ತಿಯಲ್ಲಿ ಒಟ್ಟಾರೆ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಇದರ ಜೊತೆಗೆ ಈ ವರ್ಷ 1 ಸಾವಿರಕ್ಕೂ ಹೆಚ್ಚು ಹೊರಗಿನಿಂದ ಪೊಲೀಸ್ ಸಿಬ್ಬಂದಿ ಕರೆಸಲಾಗುತ್ತಿದೆ. 1 ಆರ್ಎಎಫ್ ಪಡೆ, 410 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 400 ಹೋಮ್ ಗಾರ್ಡ್ ಕರೆಸಲಾಗುತ್ತಿದೆ. ಅವಳಿನಗರದಲ್ಲಿ 2 ಕೆಎಸ್ಆರ್ಪಿ ಪಡೆ ಇದ್ದು, ಒಟ್ಟಾರೆ 9 ಕೆಎಸ್ಆರ್ಪಿ ಪಡೆ, 6 ಸಿಎಆರ್ ಪಡೆ ಕಾರ್ಯ ನಿರ್ವಹಿಸಲಿವೆ. ಸದ್ಯ 3 ಡಿಸಿಪಿ, 4 ಎಸಿಪಿ ಹಾಗೂ 25 ಇನ್ಸಪೆಕ್ಟರ್ ಸೇರಿ ಹೊರಗಿನಿಂದ ಅಧಿಕಾರಿಗಳು, ಡಿಸಿಪಿ, ಎಸಿಪಿ, ಪಿಎಸ್ಐಗಳು ಈ ತಂಡ ಸೇರಲಿದ್ದಾರೆ.
ಇಂದಿರಾ ಗ್ಲಾಸ್ ಹೌಸ್ ಹೆಚ್ಚಿನ ಭದ್ರತೆ
ಅವಳಿನಗರದಲ್ಲಿ ಗಣೇಶೋತ್ಸವ ವಿಸರ್ಜನೆಗೆ ಸಂಬಂಧಪಟ್ಟಂತೆ ಇಂದಿರಾ ಗ್ಲಾಸ್ ಹೌಸ್ ಹತ್ತಿರದ ಭಾವಿ, ಹೊಸೂರು ಭಾವಿ, ಉಣಕಲ್ ಕೆರೆ, ಸಂತೋಷನಗರ ಕೆರೆ, ಸೋನಿಗಾಂಧಿನಗರ, ರೇಣಾಕಾದೇವಿ ಮಂದಿರ, ಜಂಗ್ಲಿಪೇಟೆ, ಈಶ್ವರನಗರ, ಆನಂದನಗರ, ರಾಯನಾಳ, ಉದಯನಗರ ಭಾವಿ ಹಾಗೂ ಧಾರವಾಡದ ಮುಚ್ಚಳಂಬಿ ಭಾವಿ ಸುತ್ತಮುತ್ತ ವಿಸರ್ಜನೆ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗುತ್ತಿದೆ. ವಿಶೇಷವಾಗಿ ಭಾವಿ ಸುತ್ತಮುತ್ತ ಲೈಟ್ ವ್ಯವಸ್ಥೆ, ಸಿಸಿಟಿವಿ, ಅಗ್ನಿಶಾಮಕ ದಳ, ಈಜು ಸಿಬ್ಬಂದಿ ನೇಮಿಸಲಾಗುತ್ತಿದೆ. ವಿಶೇಷವಾಗಿ ಸಾರ್ವಜನಿಕ ಗಣೇಶ ಮೂರ್ತಿಗಳು ಇಂದಿರಾ ಗ್ಲಾಸ್ ಹೌಸ್ ಬಳಿ ಬರುವುದರಿಂದ ಅಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಡಿಜೆ ಬಳಕೆ ನಿಷೇಧಿಸಿ ಸುತ್ತೋಲೆ
ಮತ್ತೊಂದೆಡೆ ವಿವಿಧ ಸಂಘ-ಸಂಸ್ಥೆಗಳು ಸಹ ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯಲ್ಲಿದ್ದಾರೆ. ಇನ್ನೊಂದೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಹ ಫುಲ್ ಅಲರ್ಟ್ ಆಗಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಒಂದು ಸುತ್ತೋಲೆ ಹೊರಡಿಸಿದ್ದು, ಗಣೇಶ ಹಬ್ಬಕ್ಕೆ ಡಿಜೆ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಇನ್ನು ಡಿಜೆಗಳನ್ನು ಬಾಡಿಗೆಗೂ ಕೊಡಂಗಿಲ್ಲ ಎಂದು ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.