ಗುಂಡಿಬಿದ್ದ ರಸ್ತೆಯಲ್ಲಿ ತುಳಸಿ ಪೂಜೆ ಮಾಡಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ
ಹುಬ್ಬಳ್ಳಿ, ನವೆಂಬರ್ 5 : ದೀಪಾವಳಿ ನಂತರ ಬರುವ ತುಳಸಿ ಪೂಜೆ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಆದರೆ, ಹುಬ್ಬಳ್ಳಿಯ ಜನ ಈ ವರ್ಷ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲೇ ತುಳಸಿ ಪೂಜೆ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸಂಪೂರ್ಣವಾಗಿ ರಸ್ತೆಗಳು ಹದಗೆಟ್ಟಿದ್ದು, ಯಾವೊಬ್ಬ ಜನ ಪ್ರತಿನಿಧಿಯು ಕಣ್ಣೆತ್ತಿ ಈ ಕಡೆ ನೋಡುತ್ತಿಲ್ಲ. ರಸ್ತೆಗಳೆಲ್ಲಾ ತಗ್ಗು-ಗುಂಡಿಗಳಿಂದ ಕೂಡಿದ್ದು ನಿತ್ಯ ಒಂದಿಲ್ಲೊಂದು ಅನಾಹುತಕ್ಕೆ ದಾರಿ ಮಾಡಿ ಕೊಡುತ್ತಿವೆ. ರಸ್ತೆ ಅಪಘಾತಗಳು ಹೆಚ್ಚಾಗಿವೆ. ಅಲ್ಲದೇ ವಯೋವೃದ್ದರು ಕೆಟ್ಟ ರಸ್ತೆಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇದರಿಂದಾಗಿ ರೋಸಿ ಹೋಗಿರುವ ಹುಬ್ಬಳ್ಳಿ- ಧಾರವಾಡದ ಜನತೆ ಮಹಾನಗರ ಪಾಲಿಕೆ, ಧಾರವಾಡ ಶಾಸಕ, ಸಂಸದ ಹಾಗೂ ಜನ ಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು.
Tulsi Vivah 2022 : ತುಳಸಿ ವಿವಾಹ ಶುಭ ಮುಹೂರ್ತ, ಮಂತ್ರ ಹಾಗೂ ಪೂಜಾ ವಿಧಾನದ ಬಗ್ಗೆ ತಿಳಿಯಿರಿ
ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ವಿಭಿನ್ನ ಪ್ರತಿಭಟನೆಯ ಮೂಲಕ ಕಿಡಿಕಾರಿದ ಜನ ಗುಂಡಿ ಬಿದ್ದ ರಸ್ತೆಯಲ್ಲಿಯೇ ತುಳಸಿ ಪೂಜೆ ಮಾಡಿದರು. ನಗರದ ಗೋಪನಕೊಪ್ಪ ಗ್ರಾಮದ ಸ್ವಾಗತ ಕಾಲೋನಿಯ ರಸ್ತೆಯಲ್ಲಿಯೇ ಗುಂಡಿಯ ಮುಂದೆ ತುಳಸಿ ಪೂಜೆಯನ್ನು ನೆರವೇರಿಸಿ, ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಕ್ಕೆ ಪರದಾಡುತ್ತಿರುವ ಜನರು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ರಸ್ತೆ ಅವ್ಯವಸ್ಥೆ ಹಬ್ಬದ ಖುಷಿ ಕಸಿದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಬಂದಪಟ್ಟವರು ಯಾರಾದರೂ ಇದ್ರೆ ಬನ್ನಿ ನೋಡಿ ನಮ್ಮ ಅವಸ್ಥೆ. ನಿಮ್ಮ ಮನೆಯವರೆಗೂ ಬಂದರೂ ನಮಗೆ ಏನು ಪ್ರಯೋಜನವಾಗಿಲ್ಲ. ಇಂತಹ ರಸ್ತೆಗಳಲ್ಲಿ ನಾವು ಹೇಗೆ ಜೀವನ ಮಾಡಬೇಕು ಎಂದು ಪ್ರತಿಭಟನಾಕಾರರು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.
ತುಳಸಿ ವಿವಾಹದ ಮಹತ್ವ
ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಭಗವಾನ್ ವಿಷ್ಣುವು ತನ್ನ 4 ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಅದರ ನಂತರ ದ್ವಾದಶಿ ತಿಥಿಯಂದು ತುಳಸಿ ವಿವಾಹ ನಡೆಯುತ್ತದೆ. ಈ ದಿನದಂದು ತುಳಸಿ ಮಾತೆಯನ್ನು ಭಗವಾನ್ ವಿಷ್ಣುವಿನ ರೂಪವಾದ ಸಾಲಿಗ್ರಾಮದೊಂದಿಗೆ ವಿವಾಹವಾಗುತ್ತದೆ. ಈ ವರ್ಷ ತುಳಸಿ ವಿವಾಹವನ್ನು ನವೆಂಬರ್ 5 ರಂದು ಶನಿವಾರ ಆಚರಿಸಲಾಗುತ್ತಿದೆ.
ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಸಾಲಿಗ್ರಾಮ ದೇವರಿಗೆ ವಿವಾಹ ಮಾಡಿಸುವ ಭಕ್ತರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಮಹಿಳೆಯರು ಸಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ನೆರವೇರಿಸುತ್ತಾರೆ. ತುಳಸಿಯನ್ನು ವಿಷ್ಣುಪ್ರಿಯ ಎಂದೂ ಕರೆಯುತ್ತಾರೆ. ಕಾರ್ತಿಕ ಮಾಸದ ನವಮಿ, ದಶಮಿ ಮತ್ತು ಏಕಾದಶಿಯಂದು ಉಪವಾಸ ಮತ್ತು ಪೂಜೆಯ ಮೂಲಕ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಮರುದಿನ ಬ್ರಾಹ್ಮಣರಿಗೆ ತುಳಸಿ ಗಿಡವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ ಎಂದು ಹೇಳಲಾಗುತ್ತದೆ.