NWKRTC; ಹುಬ್ಬಳ್ಳಿಗೆ ಬರಲಿದೆ 10 'ಪಲ್ಲಕ್ಕಿ' ಬಸ್, ವಿವರ
ಹುಬ್ಬಳ್ಳಿ, ನವೆಂಬರ್ 22: ಕೆಎಸ್ಆರ್ಟಿಸಿ ಅಕ್ಟೋಬರ್ ತಿಂಗಳಿನಲ್ಲಿ 'ಪಲ್ಲಕ್ಕಿ' ಹೆಸರಿನ ನೂತನ ಸ್ಲೀಪರ್ ಮಾದರಿಯ ನಾನ್ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಈಗ ಬಸ್ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ವಿವಿಧ ಮಾರ್ಗದಲ್ಲಿ ಬಸ್ಗಳ ಸಂಚಾರ ಆರಂಭವಾಗಿದೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗೆ ಸಹ 'ಪಲ್ಲಕ್ಕಿ' ಬಸ್ಗಳು ಡಿಸೆಂಬರ್ ತಿಂಗಳಿನಲ್ಲಿ ಆಗಮಿಸಲಿವೆ. ಬಸ್ಗಳ ಆಗಮಿಸಿದ ಬಳಿಕ ಯಾವ-ಯಾವ ಮಾರ್ಗದಲ್ಲಿ ಅವುಗಳನ್ನು ಓಡಿಸಲಾಗುತ್ತದೆ ಎಂದು ತೀರ್ಮಾನಿಸಲಾಗುತ್ತದೆ.

ಟ್ವಿಟರ್ನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಸೆಲ್ವಂ ಈ ಕುರಿತು ಮಾಹಿತಿ ನೀಡಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ NWKRTCಗೆ 10 ಪಲ್ಲಕ್ಕಿ ಮಾದರಿಯ ಐಷಾರಾಮಿ ಸ್ಲೀಪರ್ ಬಸ್ಗಳು ಸಿಗಲಿವೆ ಎಂದು ಹೇಳಿದ್ದಾರೆ.
40 ಬಸ್ಗಳು ಆಗಮನ; ಕೆಎಸ್ಆರ್ಟಿಸಿಯ 'ಪಲ್ಲಕ್ಕಿ' ಹೆಸರಿನ ನೂತನ ಬಸ್ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ ತೋರಿಸಿದ್ದರು. ಒಟ್ಟು 40 ಈ ಮಾದರಿ ಬಸ್ಗಳು ರಾಜ್ಯಕ್ಕೆ ಆಗಮಿಸಲಿವೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಒಟ್ಟು ಬಸ್ಗಳು 4,866 ಮತ್ತು ಕಾರ್ಯಾಚರಣೆಯಲ್ಲಿರುವ ಬಸ್ಗಳು 4,579 ಆಗಿವೆ. ಈಗ ಹೊಸ ಮಾದರಿಯ 'ಪಲ್ಲಕ್ಕಿ' 10 ಬಸ್ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ.
ಈಗಾಗಲೇ ಕೆಎಸ್ಆರ್ಟಿಸಿ ಸಾಗರ-ಸೊರಬ-ಬೆಂಗಳೂರು (ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ಮಾರ್ಗ, ಸಾಗರ-ಶಿವಮೊಗ್ಗ-ವಿಜಯಪುರ ಮಾರ್ಗ, ಮಂಗಳೂರು-ಗಂಗಾವತಿ ಮಾರ್ಗ, ಬೆಳ್ತಂಗಡಿ-ಬೆಂಗಳೂರು, ಬೆಳಗಾವಿ-ಬೆಂಗಳೂರು ಸೇರಿ ವಿವಿಧ ಮಾರ್ಗದಲ್ಲಿ 'ಪಲ್ಲಕ್ಕಿ' ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿವೆ, ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಒಟ್ಟು 375 ಬಸ್ಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದರ ಭಾಗವಾಗಿಯೇ 'ಪಲ್ಲಕ್ಕಿ' ಮಾದರಿ ಬಸ್ಗಳನ್ನು ಹಂಚಿಕ ಮಾಡಲಾಗುತ್ತದೆ. ಈ ಬಸ್ಗಳನ್ನು ಯಾವ ಮಾರ್ಗದಲ್ಲಿ ಓಡಿಸಬೇಕು? ಎಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ಸಾರಿಗೆ ಸಚಿವರೇ ಕೊಟ್ಟ ಹೆಸರು; ಅಕ್ಟೋಬರ್ನಲ್ಲಿ ಸಂಚಾರ ಆರಂಭಿಸಿದ ಈ ಮಾದರಿ ಬಸ್ಗಳಿಗೆ 'ಪಲ್ಲಕ್ಕಿ' ಎಂಬ ಹೆಸರನ್ನು ಸೂಚಿಸಿರುವುದು ಸ್ವತಃ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ. ಅದೇ ಹೆಸರನ್ನು ಅಂತಿಮಗೊಳಿಸಿ ಬಸ್ಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
'ಪಲ್ಲಕ್ಕಿ' ಹೆಸರಿನ ನೂತನ ಬಸ್ 11.3 ಮೀಟರ್ ಉದ್ದವಿದೆ. ಬಿಎಸ್-6 ತಂತ್ರಜ್ಞಾನ ಮಾದರಿ ಹೆಚ್ಪಿ ಇಂಜಿನ್ ಹೊಂದಿದೆ. 30 ಸೀಟುಗಳನ್ನು ಹೊಂದಿದ್ದು, ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ. ಬಸ್ನಲ್ಲಿ ಆಡಿಯೋ ಸ್ಪೀಕರ್ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಚಾಲಕರಿಗೆ ಸಹಾಯಕವಾಗಲು ಬಸ್ ಹಿಂಭಾಗದಲ್ಲಿ ಸಹ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇದು ಸ್ಲೀಪರ್ ಮಾದರಿಯ ಬಸ್ಗಳು. ಆದರೆ ಹವಾನಿಯಂತ್ರಣ ರಹಿತ ವ್ಯವಸ್ಥೆಯನ್ನು ಹೊಂದಿವೆ. ಅತ್ಯಾಧುನಿಕ ವ್ಯವಸ್ಥೆಗಳು ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಅನುಭವ ನೀಡಲಿವೆ. ಆದ್ದರಿಂದ ಈ ಬಸ್ಗಳಿಗೆ 'ಸಂತೋಷವು ಪ್ರಯಾಣಿಸುತ್ತದೆ' ಎಂಬ ಶೀರ್ಷಿಕೆ ನೀಡಲಾಗಿದೆ.
ಈ ಮಾದರಿ ಬಸ್ಸುಗಳು ಕರ್ನಾಟಕದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಸಹ ಸಂಚಾರ ನಡೆಸುತ್ತಿವೆ. ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಹಾಗೂ ಹೊರ ರಾಜ್ಯದಲ್ಲಿ ಪಾಂಡಿಚೇರಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯಕ್ಕೆ ಸಂಚರಿಸುತ್ತಿವೆ.












Click it and Unblock the Notifications