NWKRTC: ವಿವಿಧ ಜಿಲ್ಲೆಗಳಿಗೆ ನಾನ್ಸ್ಟಾಪ್ ಬಸ್ ಕಾರ್ಯಾಚರಣೆ, ಭರ್ಜರಿ ಸ್ಪಂದನೆ, ಮಾರ್ಗಗಳು
ಹುಬ್ಬಳ್ಳಿ, ಮೇ 19: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಪಾಯಿಂಟ್ ಟು ಪಾಯಿಂಟ್, ತಡೆ ರಹಿತ ಬಸ್ ಗಳನ್ನು ಆರಂಭಿಸಲಾಗಿದೆ. ಈ ಬಸ್ಗಲಿಗೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ, ಸ್ಪಂದನೆ ವ್ಯಕ್ತವಾಗಿದೆ.
ಸಾರ್ವಜನಿಕ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಿಗೆ ಪಾಯಿಂಟ್ ಟು ಪಾಯಿಂಟ್, ತಡೆ ರಹಿತ ಬಸ್ ಕಾರ್ಯಾಚರಣೆ ಆರಂಭಿಸಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಹರ್ಷದಾಯಕ ಎಂದು ಸಾರಿಗೆ ನಿಗಮದ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತೊಂದರೆ ಮುಕ್ತ ಹಾಗೂ ಮತ್ತಷ್ಟು ಆರಾಮದಾಯಕವಾಗಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅದರ ಭಾಗವಾಗಿ ಹುಬ್ಬಳ್ಳಿಯಿಂದ ನೆರೆಯ ಜಿಲ್ಲಾ ಕೇಂದ್ರಗಳಾದ ಬೆಳಗಾವಿ, ಗದಗ ಹಾಗೂ ಹಾವೇರಿ ನಡುವೆ ಹಲವಾರು ವರ್ಷಗಳಿಂದ ತಡೆ ರಹಿತ ಬಸ್ ಗಳು ಸಂಚರಿಸುತ್ತಿವೆ.
ತ್ವರಿತ ಪ್ರಯಾಣ, ಸಮಯ ಉಳಿತಾಯ
ಮಾರ್ಗ ಮಧ್ಯದ ಊರುಗಳ ಬಸ್ ನಿಲ್ದಾಣಗಳಿಗೆ ಹೋಗದೆ, ನೇರವಾಗಿ ಸಂಚರಿಸುವುದಿಂದ ತ್ವರಿತ ಪ್ರಯಾಣ, ಸಮಯದ ಉಳಿತಾಯದೊಂದಿಗೆ ಹೆಚ್ಚು ಅನುಕೂಲಕರವಾಗಿರುವುದರಿಂದ ಈ ಬಸ್ ಗಳು ಜನಪ್ರಿಯತೆ ಗಳಿಸಿವೆ ಎಂದು ಅವರು ಮಾಹಿತಿ ನೀಡಿದರು.

ಪ್ರಯಾಣಿಕ ಸ್ನೇಹಿಯಾಗಿರುವುದರಿಂದ ಪಾಯಿಂಟ್ ಟು ಬಸ್ ಗಳ ವ್ಯವಸ್ಥೆಯನ್ನು ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಂತಹ ಪ್ರಮುಖ ಸ್ಥಳಗಳಿಗೆ ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು. ಅದಕ್ಕೆ ಪೂರಕವಾಗಿ ಹುಬ್ಬಳ್ಳಿ-ಕಲಘಟಗಿ, ಹುಬ್ಬಳ್ಳಿ-ಲಕ್ಷ್ಮೇಶ್ವರ, ಹುಬ್ಬಳ್ಳಿ-ಶಿರಹಟ್ಟಿ, ಹುಬ್ಬಳ್ಳಿ-ಶಿರ್ಸಿ, ನವಲಗುಂದ-ಧಾರವಾಡ, ನವಲಗುಂದ - ಗದಗ, ಕಲಘಟಗಿ-ಧಾರವಾಡ ಮತ್ತಿತರ ಸ್ಥಳಗಳ ನಡುವೆ ಪಾಯಿಂಟ್ ಟು ಪಾಯಿಂಟ್, ತಡೆರಹಿತ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ.
ಈ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇತರೆ ಮಾರ್ಗಗಳಿಗೂ ಸಹ ವಿಸ್ತರಿಸುವಂತೆ ಬೇಡಿಕೆ ಬರುತ್ತಿದೆ. ಮಾರ್ಗವಾರು ಪ್ರಯಾಣಿಕರ ಸಂಖ್ಯೆಯ ಸಮೀಕ್ಷೆ ನಡೆಸಿ ಬಸ್ ಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಮನಗೌಡರ ಹೇಳಿದ್ದಾರೆ.












Click it and Unblock the Notifications