ಬಿಜೆಪಿ ಸರ್ಕಾರಕ್ಕೆ ನೈತಿಕತೆಯೇ ಇಲ್ಲ, ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ: ಸುರ್ಜೆವಾಲಾ ಆರೋಪ
ಹುಬ್ಬಳ್ಳಿ, ಡಿಸೆಂಬರ್, 20: ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಪಕ್ಷವು ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ಅರ್ಹತೆ ಕಳೆದುಕೊಂಡಿದೆ. ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ ಎಂದು ಬಿಜೆಪಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರದ ಸಮುದ್ರದಲ್ಲಿ ಮುಳುಗಿ ಹೋಗಿದೆ. ಪ್ರಜಾಪ್ರಭುತ್ವ ಮೌಲ್ಯವನ್ನು ಗಾಳಿಗೆ ತೂರಿದ ಬಿಜೆಪಿಯದ್ದು ಅನೈತಿಕ ಸರ್ಕಾರವಾಗಿದೆ. ಎರಡೂ ಕೈಯಲ್ಲಿ ಲಂಚ ತೆಗೆದುಕೊಳ್ಳುತ್ತಾ ಬಿಜೆಪಿ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ. ದೇಶದ ಅತ್ಯಂತ ಭ್ರಷ್ಟ ಸರ್ಕಾರ ಬೊಮ್ಮಾಯಿ ಸರ್ಕಾರವಾಗಿದೆ. ಬಿಜೆಪಿ ಶೇಕಡಾ 40 ರಿಂದ 50 ಪಸಂಟೇಜ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಆರೋಪಿಸಿದರು.
ಮಠಗಳ ಅನುದಾನದಲ್ಲಿಯೂ ಭ್ರಷ್ಟಾಚಾರ
ಮಠಗಳಿಗೆ ನೀಡುವ ಅನುದಾನದಲ್ಲಿಯೂ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಶೇಕಡಾ 5 ಪರ್ಸೆಂಟ್ ಡಿಸ್ಕೌಂಟ್ ನೀಡಿ 35 ಪರ್ಸೆಂಟ್ ಕಮಿಷನ್ ಹೊಡೆದಿದೆ. ಕರ್ನಾಟಕದಲ್ಲಿ 40% ಹೊರತಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ನೌಕರಿಗಳು ಬಿಕರಿಗೆ ಇಡಲಾಗಿದೆ. ಪಿಎಸ್ಐ ಹಗರಣ ನೇರವಾಗಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬಾಗಿಲಿಗೆ ಬಂದಿದೆ ಎಂದು ದೂರಿದರು.
ಆರೋಪಗಳನ್ನು ಮುಚ್ಚಿಹಾಕುವ ಪ್ರಯತ್ನ
ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರ ಬಂಧನ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಬಿಜೆಪಿ ಮಟ್ಟದ ಅಧಿಕಾರಿಗೆ ಮುಟ್ಟಿದೆ ಅಂದರೆ, ಮೇಲಿನ ಗೃಹ ಸಚಿವರಿಗೂ ಮುಟ್ಟಿದೆ ಎಂದರ್ಥ. ಇದರ ತನಿಖೆಯನ್ನು ಯಾರು ಮಾಡಬೇಕು. ಸರ್ಕಾರದಿಂದ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲಕ್ಕೂ ಅಂತ್ಯ ಹಾಡುವ ಸಮಯ ಬಂದಿದೆ. ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಸಹ ಈ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ. ಕೃಷ್ಣ ನೀರಿನ ಬಳಕೆ ಕುರಿತಾಗಿ ಡಿಸೆಂಬರ್ 30ರಂದು ವಿಜಯಪುರದಲ್ಲಿ ಹೋರಾಟ ಹಾಗೂ ಮಹಾದಾಯಿ ವಿಚಾರವಾಗಿ ಹುಬ್ಬಳ್ಳಿ- ಧಾರವಾಡದಲ್ಲಿ ಜನವರಿ 2ಕ್ಕೆ ಹೋರಾಟ ನಡೆಸಲಾಗುತ್ತದೆ. ಅಲ್ಲದೇ ಎಸ್ಸಿ, ಎಸ್ಟಿ. ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ರ್ಯಾಲಿ ಆಯೋಜನೆ ಮಾಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ರಣದೀಪ್ ಸುರ್ಜೆವಾಲಾ ತಿಳಿಸಿದರು.
ಭಯೋತ್ಪಾದಕನ ಪಟ್ಟ ಕೊಟ್ಟಿದ್ದೇಕೆ?
ಇನ್ನಿ ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಮುಂದಿನ ಐದಾರು ದಿನಗಳ ಬಳಿಕ ಸ್ಪಷ್ಟತೆ ತಿಳಿಯಲಿದೆ. ಅಲ್ಲಿಯವರೆಗೆ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಮಂಗಳೂರ ಡಿಸಿಪಿ ಹೇಳಿಕೆ ಕೊಟ್ಟಿದ್ದಾರೆ. ಆದರೂ ಸಹ ಡಿಜಿಪಿ ಆರೋಪಿಯನ್ನು ತನಿಖೆ ನಡೆಸದೇ ಭಯೋತ್ಪಾದಕ ಎಂದು ಯಾವ ಆಧಾರದ ಮೇಲೆ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿಯಲ್ಲಿ ಒತ್ತಾಯಿಸಿದ್ದರು.
ಬಿಜೆಪಿ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ, ಮತಕಳವು ಪ್ರಕರಣವನ್ನು ವಿಷಯಾಂತರ ಮಾಡಲು ಮಂಗಳೂರು ಕುಕ್ಕರ್ ಪ್ರಕರಣವನ್ನು ಬಳಸಿಕೊಂಡರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದರೂ ಏನಾನ್ನಾದರೂ ಪ್ರಚಾರ ಮಾಡಲಿ. ನಮ್ಮದು ಕಾಂಗ್ರೆಸ್ ಪಕ್ಷ, ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿರುವ ಪಕ್ಷವಾಗಿದೆ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆಯನ್ನು ದಮನ ಮಾಡಿದ್ದೇವೆ. ಮಂಗಳೂರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದೀವಿ ಎಂದಿದ್ದರು.