ಧಾರವಾಡದ ನವವಿವಾಹಿತರಿಗೆ ಪಾಲಕರಿಂದಲೇ ಬೆದರಿಕೆ
ಧಾರವಾಡ, ಜುಲೈ 6: ಅವರು ಯುವ ಪ್ರೇಮಿಗಳು. ಜಾತಿಯ ಹಂಗನ್ನು ಮರೆತು 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಆದರೆ ಈಗ ಅದೇ ಜಾತಿ ಅವರ ಪ್ರೀತಿಗೆ ಅಡ್ಡ ಬಂದಿದೆ. ಯುವತಿಯ ಮನೆಯವರು ಆಕೆಯನ್ನು ಗಂಡನಿಂದ ಬೇರೆ ಮಾಡಲು ಹರಸಾಹಸ ಪಡುತಿದ್ದಾರೆ. ಇದರಿಂದ ಆತಂಕಗೊಂಡ ಈ ಜೋಡಿ ರಕ್ಷಣೆಗಾಗಿ ಈಗ ಕೋರ್ಟ್ ಮೆಟ್ಟಿಲೇರಿದೆ.
ಧಾರವಾಡ ಹೊರವಲಯದ ಎತ್ತಿನಗುಡ್ಡ ಗ್ರಾಮದ ಪವಿತ್ರ ಹಾಗೂ ದೇವೆಂದ್ರ ಗೌಡ ಇದೀಗ ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿರುವ ನವದಂಪತಿ. ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಯುವತಿಯ ಮನೆಯವರು ಕೊಲೆ ಬೆದರಿಕೆ ಹಾಕಿದ್ದಾರೆ.

ಕಳೆದ ಜೂನ್ 29 ರಂದು ಧಾರವಾಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿರುವ ಈ ಜೋಡಿ ನಂತರ ಹನಿಮೂನ್ಗೆ ಬೇರೆ ಜಿಲ್ಲೆಗೆ ಹೋದಾಗ, ಪವಿತ್ರ ಮನೆಯವರು ಉಪನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯ ತಿಳಿದ ದಂಪತಿ ಧಾರವಾಡಕ್ಕೆ ಬಂದಾಗ ಇವರ ಮೇಲೆ ಹಲ್ಲೆಗೂ ಯತ್ನ ನಡೆದಿದೆ.
'ಜಾತಿ ಬೇರೆ ಇರುವ ಕಾರಣ ನಮ್ಮಿಬ್ಬರನ್ನು ಬೇರೆ ಮಾಡಲು ನಮ್ಮ ತಂದೆ ಈ ರೀತಿ ಹಲ್ಲೆ ನಡೆಸುತಿದ್ದಾರೆ,' ಎಂದು ಆರೋಪಿಸಿರುವ ಪವಿತ್ರ ತನ್ನ ಪತಿಯ ಜೊತೆ ಧಾರವಾಡ ಜಿಲ್ಲಾ ನ್ಯಾಯಾಲಯದ ಮೇಟ್ಟಿಲೇರಿದ್ದು, ಕುಟುಂಬದವರಿಂದ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ.
ಈ ಯುವತಿ ಇಂಜಿನಿಯರಿಂಗ್ ಪದವೀಧರೆ, ಯುವಕ ಸ್ವಂತ ಕಾರುಗಳನ್ನ ಇಟ್ಟುಕೊಂಡು ಟ್ರಾವೆಲ್ಸ್ ನಡೆಸುತ್ತಿದ್ದಾರೆ. ಯುವತಿ ಮೇಲ್ಜಾತಿಯವಳು, ಆದರೆ ಯುವಕ ಕೆಳ ಜಾತಿಯಾವನಾಗಿದ್ದರಿಂದ ಈ ರೀತಿ ಮದುವೆಗೆ ಅಡ್ಡಿಪಡಿಸಿ, ಕೊಲೆಗೆ ಯತ್ನ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.












Click it and Unblock the Notifications