ಕಲಘಟಗಿ: ಹಣ ದ್ವಿಗುಣಗೊಳಿಸುವುದಾಗಿ 8 ಲಕ್ಷ ವಂಚನೆ
ಹುಬ್ಬಳ್ಳಿ, ಜೂನ್ 14 : ಖಾನ್ನಿಸನ್ ಸಹೋದರರ ವಂಚನೆ ಪ್ರಕರಣ ಹರಿಸಿರುವಾಗಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದು ಅಚ್ಚರಿ ಮೂಡಿಸಿದೆ.
ಸ್ನೇಹಾ ಕಮ್ಯುನಿಕೇಶನ್ ಹೆಸರಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದ್ವಿಗುಣಗೊಳಿಸುವುದಾಗಿ ಜಗದೀಶ್ ಎನ್ನುವಾತನಿಂಧ 8.25 ಲಕ್ಷ ರು. ಹಣ ಪಡೆದು ವಂಚಿಸಿರುವ ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ.
ಹಣ ಕಳೆದುಕೊಂಡಿರುವ ಜಗದೀಶ್ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿಯ ಮಂಜುನಾಥ ಉಳ್ಳಾಗಡ್ಡಿ, ರಾಜು ಪಟ್ಟಣಶೆಟ್ಟಿ, ಶಿವಶಂಕರ್ ಬನವಣ್ಣನವರ ಹಾಗೂ ಮಾಚಾಪುರ ತಾಂಡಾದ ಶ್ರೀನಿವಾಸ್ ಲಮಾಣಿ ವಿರುದ್ಧ ಜಗದೀಶ್, ವಂಚನೆ ಪ್ರಕರಣ ದೂರು ದಾಖಲಿಸಿದ್ದಾರೆ.
ಸ್ನೇಹಾ ಕಮ್ಯುನಿಕೇಶನ್ ಹೆಸರಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದ್ವಿಗುಣಗೊಳಿಸುವುದಾಗಿ ಈ ನಾಲ್ವರು ನನ್ನ ಬಳಿ ಫೆಬ್ರುವರಿ 7ರಂದು 8.25 ಲಕ್ಷ ರು. ಹಣ ಪಡೆದಿದ್ದಾರೆ.
ಈಗ ಮರಳಿ ಕೊಡುವಂತೆ ಕೇಳಿದರೆ ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಜಗದೀಶ್ ತಿಳಿಸಿದ್ದಾರೆ.
ಇವರಿಂದ ನನಗೂ ಸೇರಿದಂತೆ ಇನ್ನೂ ಹಲವರಿಗೆ ಕೋಟ್ಯಾಂತರ ರೂಪಾಯಿ ವಂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.