ಹಲ್ಲು, ಉಗುರಿನ ಆಸೆಗೆ ಚಿರತೆಯ ರುಂಡ ಕತ್ತರಿಸಿದ ದುಷ್ಕರ್ಮಿಗಳು
ಹಾವೇರಿ, ಅಕ್ಟೋಬರ್ 07 : ಬೆಲೆ ಬಾಳುವ ಹಲ್ಲು ಮತ್ತು ಉಗುರಿನ ಆಸೆಗಾಗಿ ಚಿರತೆಯ ರುಂಡ, ಕಾಲಿನ ಮುಂಭಾಗ ಮತ್ತು ಬಾಲ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ರುಂಡ, ಕಾಲಿನ ಮುಂಭಾಗ ಮತ್ತು ಬಾಲವನ್ನ ಕತ್ತರಿಸಿಕೊಂಡು ಉಳಿದ ಚಿರತೆಯ ಮೃತದೇಹವನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಶುಕ್ರವಾರ ಮಧ್ಯಾಹ್ನವೇ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ.

ಇಂಥದೊಂದು ವಿಕೃತ ಘಟನೆ ನಡೆದದ್ದು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಬಳಿ. ಕಾಟೇನಹಳ್ಳಿ ಗ್ರಾಮದ ಬಳಿ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು, ಹಣದ ಆಸೆಗಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡುವ ಘಟನೆಗಳು ಆಗಾಗ ಜರುಗುತ್ತಿವೆ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬುದು ಗ್ರಾಮಸ್ಥರ ದೂರು.
ದನ ಮೇಯಿಸಲು ಹೋದ ಗ್ರಾಮಸ್ಥರು ಸಂಜೆ ಮರಳಿ ಮನೆಯತ್ತ ಬರೋವಾಗ ಮೂರು ವರ್ಷದ ಗಂಡು ಚಿರತೆ ಹತ್ಯೆಯಾಗಿರೋದನ್ನ ಕಂಡು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಈ ಭಾಗದಲ್ಲಿ ಆಗಾಗ ಕೆಲ ಪ್ರಾಣಿಗಳನ್ನು ಬೇಟೆ ಆಡುವುದನ್ನು ಇಲ್ಲಿನ ಜನ ಕಂಡಿರುವುದಾಗಿ ಹೇಳುತ್ತಾರೆ. ಆದರೆ ಯಾವುದೇ ಪ್ರಾಣಿಗಳು ಈ ರೀತಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಈವರೆಗೂ ಗ್ರಾಮಸ್ಥರು ಕಂಡಿರಲಿಲ್ವಂತೆ.
ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ದುಷ್ಕರ್ಮಿಗಳ ಬೇಟೆಗೆ ಜಾಲ ಬೀಸಿದ್ದಾರೆ.












Click it and Unblock the Notifications