ಸೂರ್ಯಗ್ರಹಣ: ಧಾರವಾಡ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಪೂಜೆ-ದರ್ಶನ ಬಂದ್
ಹುಬ್ಬಳ್ಳಿ , ಅಕ್ಟೋಬರ್ 25: ಪ್ರಮುಖ ಹಬ್ಬ ದೀಪಾವಳಿ ನಡುವೆ ಮಂಗಳವಾರ ಸೂರ್ಯಗ್ರಹಣವೂ ಇದೆ. ಈ ಹಿನ್ನೆಲೆ ದೀಪಾವಳಿ ಹಬ್ಬದ ಸಾಲು ಸಾಲು ರಜೆ ಅಂತ ದೇವಾಲಯಗಳಿಗೆ ಭೇಟಿ ನೀಡಲು ಹೊರಟಿರುವ ಭಕ್ತರಿಗೆ ಸೂರ್ಯಗ್ರಹಣದಿಂದ ನಿರಾಸೆ ಕಾದಿದೆ. ಹೌದು, ಪ್ರಮುಖ ದೀಪಾವಳಿ ಹಬ್ಬ ಇರುವುದರಿಂದ ದೇವಾಲಯಕ್ಕೆ ಭೇಟಿ ಭಕ್ತರಿಗೆ ಮಂಗಳವಾರ ಸೂರ್ಯಗ್ರಹಣ ಅಡ್ಡಿ ಪಡಿಸಿದೆ.
ಸೂರ್ಯ ಗ್ರಹಣ ಇರುವುದರಿಂದ ಹುಬ್ಬಳ್ಳಿ ನಗರದಲ್ಲಿ ಹಲವು ದೇವಸ್ಥಾನಗಳು ಬಂದ್ ಮಾಡಲಾಗಿದೆ. ಇನ್ನು, ಕೆಲವು ದೇವಾಲಯಗಳಲ್ಲಿ ಸಮಯ ಬದಲಾವಣೆ ಮಾಡಿವೆ. ಖಂಡಗ್ರಾಸ ಕೇತು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ವಿರಳವಾಗಿದೆ.
ಕೆಲವು ದೇವಸ್ಥಾನಗಳಲ್ಲಿ ಮಧ್ಯಾಹ್ನ 12 ರವರೆಗೆ ದೇವರ ದರ್ಶನಕ್ಕೆ ಅವಕಾಶವನ್ನು ನೀಡಲಾಗಿದೆ. ಕೆಲ ದೇವಸ್ಥಾನ ಬೆಳಿಗ್ಗೆಯಿಂದಲೇ ಬಂದ್ ಮಾಡಲಾಗಿದೆ. ಸಂಜೆ ಗ್ರಹಣದ ಸಮಯದಿಂದ ಬುಧವಾರ ಬೆಳಿಗ್ಗೆ ಬಂದ್ ಮಾಡಲಾಗುವುದು ಎಂದು ಶ್ರೀ ಸಾಯಿಬಾಬಾ ಮಂದಿರ ಅರ್ಚಕರಾದ ಕೃಷ್ಣಾನಂದ ಅವರು ಹೇಳುತ್ತಾರೆ. ಅಲ್ಲದೆ, ಶ್ರೀ ಚಂದ್ರಮೌಳೇಶ್ವರ, ಗಣೇಶ ದೇವಸ್ಥಾನಗಳನ್ನು ಕೂಡ ಬಂದ್ ಮಾಡಲಾಗುವುದು.

ಸೋಮೇಶ್ವರ ದೇವಸ್ಥಾನ ಬಂದ್
ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಬಂದ್ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ದೇವಸ್ಥಾನ ಬಂದ್ ಮಾಡಲಾಗುತ್ತಿದ್ದು, ಪುನಃ ಸಂಜೆ ಸೂರ್ಯ ಗ್ರಹಣದ ನಂತರ ದೇವಸ್ಥಾನ ಬಾಗಿಲನ್ನು ಆಡಳಿತ ಮಂಡಳಿ ತೆರೆಯಲಿದ್ದಾರೆ. ಸೂರ್ಯ ಗ್ರಹಣದ ನಂತರ ದೇವಸ್ಥಾನ ಶುದ್ಧೀಕರಣ ಮಾಡಿ ಪುನಃ ಸೋಮೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಪೂಜೆ ನಂತ್ರ ಭಕ್ತರಿಗೆ ಅವಕಾಶ ನೀಡಲಾಗುವುದು.

ನವ ವಧುವಿನಂತೆ ಸಿಂಗಾರಗೊಂಡಿರುವ ಅಂಗಡಿಗಳು
ಇನ್ನೊಂದೆಡೆ ಸೂರ್ಯಗ್ರಹಣ ಇರುವುದರಿಂದ ವ್ಯಾಪಾರಸ್ಥರಿಗೂ ಕಿರಿಕಿರಿ ಉಂಟಾಗಿದೆ. ಇದು ವ್ಯಾಪಾರಸ್ಥರಿಗೆ ಬಹಳ ವಿಶೇಷ ಹಬ್ಬ. ದೀಪಾವಳಿ ಒಂದು ತಿಂಗಳ ಹಿಂದೆಯೇ ಪ್ರತಿಯೊಬ್ಬರೂ ತಮ್ಮ ತಮ್ಮ ಅಂಗಡಿ, ಹೋಟೆಲ್ಗಳನ್ನು ಸ್ವಚ್ಚಗೊಳಿಸಿ ಸುಣ್ಣ ಬಣ್ಣ ಬಳಿದು ನವ ವಧುವಿನಂತೆ ಸಿಂಗರಿಸಿ ಹೊಸ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ಪೂಜೆಯನ್ನು ನೇರವೇರಿಸುತ್ತಾರೆ.

ಪ್ರತಿ ಮನೆಯಲ್ಲೂ ಲಕ್ಷ್ಮೀ ಪೂಜೆ
ದೀಪಾವಳಿ ಆರಂಭವಾಗುವುದು ನರಕ ಚತುರ್ದಶಿಯಿಂದ ಎರಡನೇ ದಿನ ದೀಪಾವಳಿ ಅಮವಾಸ್ಯೆ ಮೂರನೇ ದಿನ ದೀಪಾವಳಿ ಪಾಡ್ಯ ಎಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಅಮವಾಸ್ಯೆಯ ದಿನ ಪ್ರತಿ ಮನೆಯಲ್ಲೂ ಲಕ್ಷ್ಮೀ ಪೂಜೆಯನ್ನು ಆಚರಿಸುತ್ತಾರೆ. ಇನ್ನೂ, ಅಮವಾಸ್ಯೆಯ ನಂತರ ದೀಪಾವಳಿ ಪಾಡ್ಯ ದಿನ ಎಲ್ಲ ವ್ಯಾಪಾರಸ್ಥರು, ಬೈಕ್- ಕಾರ್ ಶೋ ರೂಂ ಮಾಲೀಕರು ಎಲ್ಲರೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ.

ಸೂರ್ಯ ಗ್ರಹಣ ಇರುವುದರಿಂದ ಜನರಲ್ಲಿ ಗೊಂದಲ
ಈ ವರ್ಷ ದೀಪಾವಳಿ ಅಮವಾಸ್ಯೆ ದಿನ ಸೂರ್ಯ ಗ್ರಹಣ ಇರುವುದರಿಂದ ಗಲಿಬಲಿಗೊಂಡಿರುವ ಅವಳಿ ನಗರದ ಜನ ಯಾವ ದಿನ ಪೂಜೆ ಮಾಡಬೇಕು ಎಂದು ಪರಿತಪಿಸುತ್ತಿದ್ದಾರೆ. ಕೆಲವೊಂದಿಷ್ಟು ಜನ ನಿನ್ನೆ ಸೋಮವಾರ ನರಕ ಚತುರ್ದಶಿ ದಿನ ಅಂಗಡಿ ಶೋರೂಂಗಳ ಪೂಜೆ ಮಾಡಿದರೆ, ಕೆಲವು ಜನ ಇಂದು ದೀಪಾವಳಿ ಅಮವಾಸ್ಯೆ ದಿನ ಬೆಳ್ಳಂಬೆಳಿಗ್ಗೆ ಪೂಜೆ ನೇರವೇರಿಸಿದ್ದಾರೆ. ಇನ್ನೂ, ಕೆಲವು ವ್ಯಾಪಾರಸ್ಥರು ಬುಧವಾರ ದೀಪಾವಳಿ ಪಾಡ್ಯ ದಿನ ಪೂಜೆಯನ್ನು ಇಟ್ಟುಕೊಂಡಿದ್ದಾರೆ.
ಕೊರೊನಾದಿಂದ ತತ್ತರಿಸಿ ಎರಡು ವರ್ಷಗಳಿಂದ ಬಂದ್ ಆಗಿದ್ದ ದೀಪಾವಳಿ ಹಬ್ಬಕ್ಕೆ ಸೂರ್ಯ ಗ್ರಹಣ ಅಡ್ಡಗಾಲಾಗಿದೆ. ಈ ವರ್ಷ ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬ ಆಚರಣೆ ಮಾಡಲು ಮುಂದಾಗಿರುವ ಅವಳಿ ನಗರದ ಜನರಿಗೆ ಸೂರ್ಯ ಗ್ರಹಣ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ.












Click it and Unblock the Notifications