ಮಂಗಳೂರು ಆಟೋ ಸ್ಫೋಟ: ಹುಬ್ಬಳ್ಳಿಯಲ್ಲಿ 'ಪ್ರೇಮರಾಜ್' ಪೋಷಕರು ಹೇಳಿದ್ದೇನು?
ಹುಬ್ಬಳ್ಳಿ, ನವೆಂಬರ್ 20: ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ಆಟೋದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಫೋಟ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ನಲ್ಲಿದ್ದ ಪ್ರೇಮರಾಜ್ ಹೆಸರಿನ ವ್ಯಕ್ತಿಯ ಪೋಷಕರನ್ನು ಹುಬ್ಬಳ್ಳಿಯಲ್ಲಿ ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆ ಸ್ಥಳದಲ್ಲಿ ಸಿಕ್ಕಂತಹ ಆಧಾರ್ ಕಾರ್ಡ್ನಲ್ಲಿದ್ದ ವಿಳಾಸ ಹುಡುಕಿ ಹೊರಟ ಪೊಲೀಸರಿಗೆ ಪ್ರೇಮರಾಜ್ ಮನೆ ಸಿಕ್ಕಿದೆ. ಆದರೆ ಆಧಾರ್ ಕಾರ್ಡ್ನಲ್ಲಿ ಪ್ರೇಮರಾಜ್ ಮತ್ತು ಮಂಗಳೂರು ಆಟೋ ಬ್ಲಾಸ್ಟ್ನಲ್ಲಿ ಗಾಯಗೊಂಡಿರುವ ವ್ಯಕ್ತಿ ಬೇರೆ ಬೇರೆ ಎಂಬುದು ತಿಳಿದುಬಂದಿದೆ. ಆಧಾರ್ ಕಾರ್ಡ್ನಲ್ಲಿರುವ ಪ್ರೇಮರಾಜ್ ತುಮಕೂರಿನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದಾರೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆತನ ಪೋಷಕರು ಹುಬ್ಬಳ್ಳಿ ಮಧುರಾ ಕಾಲೊನಿ ನಿವಾಸಿಯಾಗಿದ್ದಾರೆ. ಪ್ರೇಮರಾಜ ಅವರ ತಂದೆ ಮಾರುತಿ ಹುಟಗಿ, ತಾಯಿ ರೇಖಾ ಹಾಗೂ ಸಹೋದರ ಲವರಾಜರನ್ನು ಶನಿವಾರ ರಾತ್ರಿಯೇ ಪೊಲೀಸರು ವಿಚಾರಣೆ ನಡೆಸಿ ಹಲವು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಕುರಿತು ಪ್ರೇಮರಾಜ್ ತಂದೆ ಮಾರುತಿ ಹುಟಗಿ, "ಪ್ರೇಮರಾಜ್ ನನ್ನ ಮಗನಾಗಿದ್ದು, ಆರು ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಆದರೆ ಸ್ಫೋಟದ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಆಧಾರ್ ಕಾರ್ಡ್ನಲ್ಲಿರುವ ವಿಳಾಸ ನಮ್ಮ ಮನೆಯದ್ದೆ. ಆದರೆ, ಅದರಲ್ಲಿರುವ ಭಾವಚಿತ್ರ ನನ್ನ ಮಗನದ್ದಲ್ಲ. ಶನಿವಾರ ರಾತ್ರಿ 8.45ರ ವೇಳೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಪೊಲೀಸರು ನನ್ನ ಎದುರಿಗೆ ಮಗನ ಜೊತೆಯೂ ಮಾತನಾಡಿದ್ದಾರೆ. ಸ್ಫೋಟ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಪ್ರೇಮರಾಜ ತಂದೆ ತಿಳಿಸಿದ್ದಾರೆ.

ಪ್ರೇಮರಾಜ ತಾಯಿ ರೇಖಾ ಮಾತನಾಡಿ, "ನನ್ನ ಮಗ ಯಾವ ತಪ್ಪೂ ಮಾಡಿಲ್ಲ. ವಿಚಾರಣೆಗೆ ಎಲ್ಲಿಗೆ ಬೇಕಾದರೂ ಬರುತ್ತೇವೆ. ಆಧಾರ್ ಕಾರ್ಡ್ ಕಳೆದುಕೊಂಡರೆ ಹೀಗೆಲ್ಲಾ ಆಗುತ್ತದೆ ಎಂದು ತಿಳಿದಿರಲಿಲ್ಲ. ಗೊತ್ತಿದ್ದರೆ ಮೊದಲೇ ದೂರು ನೀಡುತ್ತಿದ್ದೆವು. ನಾವು ತಪ್ಪೇ ಮಾಡದಿರುವಾಗ, ಏಕೆ ಹೆದರಬೇಕು, ಏನೇ ಆದರೂ ಭಯಪಡುವುದಿಲ್ಲ, ಎಲ್ಲಿಗೆ ಕರೆದರೂ ಬಂದು ಹೇಳಿಕೆ ನೀಡುತ್ತೇವೆ'' ಎಂದು ಹೇಳಿದರು.
ನನ್ನ ಸಹೋದರ ಪ್ರೇಮರಾಜ್ ಮೂರು ವರ್ಷಗಳಿಂದ ತುಮಕೂರಿನಲ್ಲಿಯೇ ಇದ್ದಾರೆ. ಇವಾಗ ಟಿಇಟಿ ಪರೀಕ್ಷೆ ಬರೆದ ಅದರಲ್ಲೂ ಆಯ್ಕೆಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರ ತಪ್ಪಿಲ್ಲ, ಇದೆಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇವೆ. ಅವರೂ ಕೂಡ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನ ಠಾಣೆಗೆ ತೆರಳಿ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾನೆ.

ಒಂದು ವರ್ಷದ ಹಿಂದ ಸಹೋದರನ ಆಧಾರ್ ಕಾರ್ಡ್ ಕಳೆದು ಹೋಗಿತ್ತು. ನಮ್ಮ ವಿಳಾಸಕ್ಕೆ ಅಣ್ಣನ ಫೋಟೋ ಬದಲಿಗೆ ಬೇರೆ ಭಾವಚಿತ್ರ ಅಂಟಿಸಿ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಇದರಲ್ಲಿ ನಮ್ಮ ಸಹೋದರನ ತಪ್ಪೇನಿಲ್ಲ, ನಮಗೆ ಭಯಪಡುವ ಅಗತ್ಯವಿಲ್ಲ ಎಂದು ಪ್ರೇಮರಾಜ್ ಸಹೋದರ ಲವರಾಜ್ ತಿಳಿಸಿದರು.
ಮಂಗಳೂರಲ್ಲಿ ಸ್ಫೋಟಗೊಂಡ ಆಟೊದಲ್ಲಿ ಪತ್ತೆಯಾದ ಆಧಾರ್ಕಾರ್ಡ್ ಬಗ್ಗೆ ಕಮಿಷನರ್ ಲಾಬೂರಾಮ್, ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರೇಮರಾಜ ಅವರ ಪೋಷಕರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತಿದ್ದಾರೆ.












Click it and Unblock the Notifications