ನಮಗೆ ಹೆಣ್ಣು ಕೊಡುತ್ತಿಲ್ಲ: ಜಾಗೃತಿ ಕಾರ್ಯಕ್ರಮಕ್ಕಾಗಿ ತಹಶೀಲ್ದಾರ್ಗೆ ಯುವ ರೈತರ ಮನವಿ
ಹುಬ್ಬಳ್ಳಿ, ನವೆಂಬರ್23: ರೈತ ದೇಶದ ಬೆನ್ನುಲುಬು ಎನ್ನುವ ನಮ್ಮ ದೇಶದಲ್ಲಿ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ. ರೈತರಾದ ನಮಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಮನನೊಂದ ಯುವಕರು ತಹಶೀಲ್ದಾರ್ ಬಳಿ ತೆರಳಿ ನೋವು ತೋಡಿಕೊಂಡ ಘಟನೆ ನಡೆದಿದೆ.
ನಮಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಸ್ವಾಮಿ ಎಂದು ಕುಂದಗೋಳ ತಾಲೂಕಿನ ಮನನೊಂದ ಯುವ ರೈತರು ನೇರವಾಗಿ ತಹಶೀಲ್ದಾರ್ ಬಳಿಗೆ ತೆರಳಿ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈತ ಎನ್ನುವ ಕಾರಣಕ್ಕೆ ಯಾರು ಹೆಣ್ಣು ಕೊಡುತ್ತಿಲ್ಲ ಎಂದು ಅಸಮಾಧಾನಗೊಂಡ ಯುವ ರೈತರ ತಂಡವೊಂದು ಕುಂದಗೋಳ ತಹಶೀಲ್ದಾರ್ ಬಳಿ ಹೋಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೊಸಳ್ಳಿ ಗ್ರಾಮದಲ್ಲಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಬಂದ ಯುವ ರೈತರ ತಂಡ, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ತಹಶೀಲ್ದಾರ್ಗೆ ಪತ್ರವೊಂದನ್ನು ಕೊಟ್ಟಿರುವ ಯುವಕರು, ಪತ್ರದಲ್ಲಿ, "ನಾವು ರೈತ ಕುಟುಂಬದ ಮಕ್ಕಳಾಗಿದ್ದು, ನಾವು ನಮ್ಮ ಬೆಳವಣಿಗೆಗೆ ಕೃಷಿಯನ್ನೇ ಅವಲಂಬಿಸಿದ್ದೇವೆ. ಏಕೆಂದರೆ ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ದೇಶ ಕಾಯಲು ಸೈನಿಕ ಬೇಕು. ಅನ್ನ ನೀಡಲು ರೈತ ಬೇಕು. ರೈತರ ಮಕ್ಕಳಿಗಾಗಿ ನಾವು ಸಹ ಕೃಷಿಯನ್ನು ಅವಲಂಬಿಸುತ್ತೇವೆ. ಇಂದಿನ ದಿನದಲ್ಲಿ ರೈತರ ಮಕ್ಕಳಿಗೆ ಕನ್ಯೆಯನ್ನು ನೀಡಲು ನಿರಾಕರಿಸುತ್ತಿದ್ದಾರೆ. ಇತರ ನೌಕರಿ ಇದ್ದರೆ ಮಾತ್ರ ಹೆಣ್ಣು ಕೊಡುತ್ತಾರೆ. ಈ ಕುರಿತು ಸರ್ಕಾರ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಬೇಕು," ಎಂದು ಮನವಿ ಮಾಡಿದ್ದಾರೆ.
ಇನ್ನು "ದೇಶಕ್ಕೆ ಅನ್ನ ನೀಡಲು ರೈತ ಬೇಕು. ಆದರೆ ಅವರಿಗೆ ಕನ್ಯೆ ನೀಡಲು ಜನ ಹಿಂದೇಟು ಹಾಕುತ್ತಿದ್ದಾರೆ. ರೈತರ ಮಕ್ಕಳು ರೈತರು ಆಗಬಾರದೇ?. ಈ ಬಗ್ಗೆ ಸರ್ಕಾರ ಗಮನ ಹರಿಸಿ, ರೈತರಿಗೆ ಕನ್ಯೆ ನೀಡುವಂತೆ ಜನಜಾಗೃತಿ ಕಾರ್ಯಕ್ರಮ ಮಾಡಿ ಅರಿವು ಮೂಡಿಸಬೇಕು ಎಂದು ಕುಂದಗೋಳ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಿದ್ದಾರೆ.