ಕನ್ನಡ ರಾಜ್ಯೋತ್ಸವ: ವಾಣಿಜ್ಯ ನಗರಿಯಲ್ಲಿ ಕಂಗೊಳಿಸಿದ ಕನ್ನಡದ ತೇರು
ಹುಬ್ಬಳ್ಳಿ, ನವೆಂಬರ್, 01: ರಾಜ್ಯಾದ್ಯಂತ ಕರ್ನಾಟಕ ರಾಜ್ಯೋತ್ಸವದ ಮೆರಗು ಜೋರಾಗಿದೆ. ಎಲ್ಲೆಲ್ಲೂ ಕನ್ನಡದ ಘೋಷಣೆ ಮೊಳಗುತ್ತಿವೆ. ಹಾಗೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಸಾರಿಗೆ ಇಲಾಖೆಯ ಬಸ್ಸನ್ನು ಸಂಪೂರ್ಣಾವಾಗಿ ಕನ್ನಡಮಯ ಮಾಡಿರುವುದು ಗಮನ ಸೆಳೆದಿದೆ.
ಇಡಿ ಕನ್ನಡದ ಕೋಶವನ್ನೇ ಹೊತ್ತು ಸಾಗುತ್ತಿರುವ ಬಸ್ ಸಂಪೂರ್ಣ ಕನ್ನಡದ ರಸದೌತಣವನ್ನು ನೀಡುತ್ತಿದೆ. ಬಸ್ನಲ್ಲಿ ಕನ್ನಡದ ಪರಿಚಯ, ಸಾಹಿತಿಗಳು, ಗಂಧದಗುಡಿಯ ಪೋಸ್ಟರ್ಗಳನ್ನು ದರ್ಶನ ಮಾಡಲಾಗುತ್ತಿದೆ. ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ಘಟಕ 1 ಬಸ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕನ್ನಡದ ಕಲರವ ಎದ್ದುಕಾಣುತ್ತದೆ. ಬಸ್ ನಿಲ್ದಾಣದಲ್ಲಿ ಜೈ ಕನ್ನಡಾಂಬೆ, ಕನ್ನಡ ಮಾತೆಗೆ ಜೈ ಎನ್ನುವ ಘೋಷಣೆಗಳು ಮೊಳಗಿದವು. ಸಾರಿಗೆ ಇಲಾಖೆಯ ನಿರ್ವಾಹಕರು ಮತ್ತು ಚಾಲಕರು ಸೇರಿ ಸ್ವಂತ ಖರ್ಚಿನಿಂದ ಬಸ್ ಅನ್ನು ಸಂಪೂರ್ಣವಾಗಿ 'ಕನ್ನಡಮಯ' ಮಾಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ, ಸಾವಿತ್ರಿ ಪೂಜಾರ್ಗೆ ಸನ್ಮಾನ
ಕನ್ನಡಮಯವಾದ ಸಾರಿಗೆ ಬಸ್
ಬಸ್ ಮುಂಭಾಗದಲ್ಲಿ ಭುವನೇಶ್ವರಿಯ ಭಾವಚಿತ್ರ ಅಂಟಿಸಿ ಪೂಜೆ ಮಾಡಲಾಗಿದೆ. ಬಣ್ಣಬಣ್ಣದ ಬಲೂನ್ಗಳಿಂದ ಬಸ್ ಅನ್ನು ಅಲಂಕರಿಸಲಾಗಿದ್ದು, ಬಸ್ ಒಳಗಡೆ ಎಲ್ಲಿ ನೋಡಿದರೂ ಕನ್ನಡಮಯವೇ ಗಮನ ಸೆಳೆದಿದೆ. ಕನ್ನಡ ನಾಡು, ನುಡಿ ಮತ್ತು ಭಾಷೆಗಾಗಿ ದುಡಿದ ಕವಿಗಳು, ಕಲಾವಿದರು, ವೀರಯೋಧರು, ಕನ್ನಡದ ಮೇರು ನಟರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರ ಭಾವಚಿತ್ರಗಳನ್ನು ಹಾಕಲಾಗಿತ್ತು. ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ವಿಜಯನಗರದ ಅರಸರು, ಕನ್ನಡದ ಸಂತರು ಹೀಗೆ ಪ್ರಮುಖ ಎಲ್ಲ ಮಹನೀಯರ ಚಿತ್ರಗಳನ್ನು ಅಂಟಿಸಲಾಗಿತ್ತು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ದ.ರಾ. ಬೇಂದ್ರೆ, ಕುವೆಂಪು, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರ ಅವರ ಮಾಹಿತಿ ಹೊಂದಿದ್ದ ಪೋಸ್ಟರ್ಗಳು ಬಸ್ಸಿನೊಳಗೆ ರಾರಾಜಿಸುತ್ತಿದ್ದವು.
ಸಾರಿಗೆ ಸಿಬ್ಬಂದಿಯಿಂದ ಹಬ್ಬಕ್ಕೆ ಮೆರಗು
ಬಸ್ ಚಾಲಕ ನಾಗರಾಜ ಬೊಮ್ಮಣ್ಣವರ, ನಿರ್ವಾಹಕ ಕಲ್ಲಣ್ಣನವರ, ರಿಯಾಜ್, ಪೂಜಾರ ಹೀಗೆ ಹಲವಾರು ಸಿಬ್ಬಂದಿ ಶೃಂಗಾರಗೊಂಡ ಬಸ್ ಮುಂದೆ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹುಬ್ಬಳ್ಳಿ ಸಾರಿಗೆ ಸಿಬ್ಬಂದಿ ನಾಗರಾಜ ಬೊಮ್ಮಣ್ಣನವರ ಪ್ರತಿಕ್ರಿಯಿಸಿ, 'ಪ್ರತಿವರ್ಷ ರಾಜ್ಯೋತ್ಸವ ಸಮಯದಲ್ಲಿ ಇದಕ್ಕಿಂತಲೂ ವಿಜೃಂಭಣೆಯಿಂದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದೆವು. ಕಳೆದ ಎರಡು ವರ್ಷಗಳಿಂದ ಕೋವಿಡ್ ಇದ್ದ ಕಾರಣ ಈ ವರ್ಷ ಹೆಚ್ಚು ಜನರು ಸೇರಿಲ್ಲ. ದೊಡ್ಡ ಬಸ್ ಅಲಂಕಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿರಲಿಲ್ಲ. ಎಲ್ಲ ಸಿಬ್ಬಂದಿ ಹಣ ಹಾಕಿದ್ದು, ನಾವೆಲ್ಲರೂ ಅವರ ಜೊತೆ ಕೈ ಜೋಡಿಸಿದ್ದೇವೆ' ಎಂದರು. ಬಸ್ಗಳಲ್ಲಿ ಅಲಂಕಾರ ಮಾಡಿರುವರಲ್ಲಿ ವಿನಾಯಕ ಕಲ್ಲಣ್ಣವರ, ಮಂಜುನಾಥ ಮಡಿವಾಳರ, ಬಸವರಾಜ ಪೂಜಾರ, ವಿರೇಶ್ ಪೂಜಾರ, ರಮೇಶ್ ಮಾವಿನಕಾಯಿ ಹಾಗೂ ತಾಂತ್ರಿಕ ಸಿಬ್ಎ ಮಾರುತಿ, ವಿನಾಯಕ, ಸಂಗಮೇಶ್ ಹಾಗೂ ಸಿಬ್ಬಂದಿ ವರ್ಗದ ಶ್ರಮ ಅಪಾರವಾಗಿದೆ.
ಭುವನಗಿರಿಯಲ್ಲಿ ರಾಜ್ಯದ ಏಕೈಕ ಕನ್ನಡಾಂಬೆ ದೇಗುಲ: ಹೋಗುವ ಮಾರ್ಗ, ಇಲ್ಲಿದೆ ವಿವರ