ಗುರುವಾರ ಹುಬ್ಬಳ್ಳಿಗೆ ಅಮಿತ್ ಶಾ, ಕಾರ್ಯಕ್ರಮಗಳು
ಹುಬ್ಬಳ್ಳಿ, ಏಪ್ರಿಲ್ 11 : ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಬುಧವಾರ ರಾತ್ರಿ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಹುಬ್ಬಳ್ಳಿಗೆ ಇಂದು ರಾತ್ರಿ ಆಗಮಿಸುವ ಅಮಿತ್ ಶಾ ಎರಡು ದಿನಗಳ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಠ, ದೇವಾಲಯಗಳಿಗೆ ಭೇಟಿಯನ್ನು ನೀಡಲಿದ್ದಾರೆ. ಧಾರವಾಡದಲ್ಲಿ ಗುರುವಾರ ಒಂದು ಗಂಟೆಗಳ ಕಾಲ ಅವರುಸತ್ಯಾಗ್ರಹದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ತಪ್ಪಿದ ಅಮಿತ್ ಶಾ-ನಿರಂಜನಾನಂದ ಪುರಿ ಶ್ರೀ ಭೇಟಿ, ಈಶ್ವರಪ್ಪಗೆ ಕ್ಲಾಸ್
ಅಮಿತ್ ಶಾ ಏಪ್ರಿಲ್ 12ರ ಕಾರ್ಯಕ್ರಮ : ಅಮಿತ್ ಶಾ ಅವರು ಬೆಳಗ್ಗೆ 9.40ಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಮತ್ತು 10.30ಕ್ಕೆ ಧಾರವಾಡದಲ್ಲಿ ಕವಿ ದ.ರಾ. ಬೇಂದ್ರೆ ಸ್ಮಾರಕಕ್ಕೆ ಭೇಟಿ ನೀಡುವರು.
ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯಲಿರುವ ಉಪವಾಸ ಸತ್ಯಾಗ್ರಹದಲ್ಲಿ ಒಂದು ತಾಸು ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಆಂದೋಲನದ ಪ್ರಮುಖರಲ್ಲಿ ಒಬ್ಬರಾದ ಸಚಿವ ವಿನಯ ಕುಲಕರ್ಣಿ ಅವರ ತವರು ಕ್ಷೇತ್ರದಲ್ಲಿಯೇ ಪ್ರತಿಭಟನೆ ನಡೆಸುತ್ತಿರುವುದು ವಿಶೇಷ.
ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಅಮಿತ್ ಶಾ ಭೇಟಿ
ಧಾರವಾಡದಿಂದ ಗದಗ ಜಿಲ್ಲೆಯ ರೋಣಕ್ಕೆ ತೆರಳಲಿರುವ ಅಮಿತ್ ಶಾ, ಅಲ್ಲಿ ಮುಷ್ಟಿಧಾನ್ಯ ಸಂಗ್ರಹ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗದಗ ಪುಟ್ಟರಾಜ ಗವಾಯಿ ಆಶ್ರಮ, ವೀರನಾರಾಯಣಸ್ವಾಮಿ ದೇವಸ್ಥಾನ, ಕುಮಾರವ್ಯಾಸನ ಸನ್ನಿಧಿಗೆ ನಮನ ಸಲ್ಲಿಸಿ, ಮೋಹನ ಮಾಳಶೆಟ್ಟಿ ಯವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಸಂಜೆ 4.50ಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ, 5.15ಕ್ಕೆ ರೋಡ್ ಶೋ ನಡೆಸಲಿದ್ದಾರೆ. ಸಂಜೆ ಧಾರವಾಡ ತಾಲೂಕು ಹೆಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ಹಾಗೂ ರಾತ್ರಿ ಹುಬ್ಬಳ್ಳಿಯಲ್ಲಿ ಉದ್ಯಮಿಗಳು, ವ್ಯಾಪಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಏ. 13ರ ಕಾರ್ಯಕ್ರಮ : ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.