ಕರ್ನಾಟಕ ಬಂದ್ : ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಯತ್ನ
Recommended Video
ಹುಬ್ಬಳ್ಳಿ/ಧಾರವಾಡ, ಜನವರಿ 25: ಮಹಾದಾಯಿ ನದಿ ನೀರಿನ ಹೋರಾಟ ತೀವ್ರವಾಗಿದ್ದು ಅವಳಿನಗರಗಳಾದ ಹುಬ್ಬಳ್ಳಿ, ಧಾರವಾಡದಲ್ಲೂ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದರ ಮಧ್ಯೆಯೇ ಕನ್ನಡಪರ ಸಂಘಟನೆಗಳಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದರು.
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
ನಿಲ್ದಾಣದಲ್ಲಿ ರೈಲು ತಡೆಯಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇನ್ನು ಧಾರವಾಡದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಧಾರವಾಡ-ಗೋವಾ ರಸ್ತೆ ಬಂದ್ ಮಾಡಿಸಲಾಗಿದೆ. ಹೊರವಲಯದ ಅಳ್ನಾವರ್ ಟೋಲ್ ಬಳಿ ರಸ್ತೆ ಬಂದ್ ಮಾಡಿದ ಕಾರ್ಯಕರ್ತರು ಗೋವಾಗೆ ತೆರಳುವ ವಾಹನಗಳಿಗೆ ತಡೆ ನಡೆಸಿದ್ದಾರೆ. ಬಂದ್ ವೇಳೆಯಲ್ಲಿ ಆರಂಭಗೊಂಡ ಅಂಗಡಿಗಳನ್ನ ಮುಚ್ಚಿಸಿದ ಹೋರಾಟಗಾರರು.
ಕರ್ನಾಟಕ ಬಂದ್: ಬೆಂಬಲಕ್ಕಿಂತ ಬೈಗುಳವೇ ಜಾಸ್ತಿ?!
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ್ ನೇತೃತ್ವದಲ್ಲಿ, ಡಿಸಿಪಿ ರೇಣುಕಾ ಸುಕುಮಾರ್ ಸೇರಿದಂತೆ ಎರಡು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ 8 ಕೆ.ಎಸ್.ಆರ್.ಪಿ, 18 ಸಿ.ಆರ್, ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
350 ಜನ ಸಿಬ್ಬಂದಿಗಳನ್ನು ಹೊರ ಜಿಲ್ಲೆಯಿಂದ ನಿಯೋಜನೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಧಾರವಾಡ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ದಿನದ ಬೋಧನೆ ಸರಿದೂಗಿಸಲು ಭಾನುವಾರ ಜ.25 ರಂದು ಪೂರ್ಣ ದಿನ ಶಾಲೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಧಾರವಾಡ ಡಿಡಿಐಪು ಎನ್.ಎಚ್. ನಾಗೂರ ಆದೇಶ ಹೊರಡಿಸಿದ್ದಾರೆ.