ಕಳಸಾ-ಬಂಡೂರಿ ವೆಚ್ಚ 798 ಕೋಟಿ ರು.ಗೆ ಏರಿಕೆ, ಆದ್ರೆ ತೊಟ್ಟು ನೀರಿಲ್ಲ
ಹುಬ್ಬಳ್ಳಿ, ಜುಲೈ 06 : ಉತ್ತರ ಕರ್ನಾಟಕದ ನಿರೀಕ್ಷಿತ ಮಹದಾಯಿ ನದಿ ತಿರುವು ಯೋಜನೆಯ ಯೋಜನಾ ವೆಚ್ಚ 16 ವರ್ಷಗಳಲ್ಲಿ ಬರೋಬ್ಬರಿ ಒಂಬತ್ತುಪಟ್ಟು ಹೆಚ್ಚಳವಾಗಿದೆ. ಆದರೆ, ಈವರೆಗೆ ಈ ಭಾಗದ ಜನರಿಗೆ ತೊಟ್ಟು ನೀರು ಸಹ ಸಿಕ್ಕಿಲ್ಲ.
ಹೌದು, ಯೋಜನೆಗೆ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಿರೋಧ ಹಾಗೂ ಇನ್ನಿತರೆ ಕಾರಣಗಳಿಂದ 17 ವರ್ಷಗಳು ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲದಿರುವುದು ದುರದೃಷ್ಟಕರ ಸಂಗತಿ. ಈ ಮಧ್ಯೆ ಮೂಲ ಯೋಜನೆಯ ಯೋಜನಾ ವೆಚ್ಚ ಶೇ 900ರಷ್ಟು ಏರಿಕೆಯಾಗಿದ್ದು, 2000ರಲ್ಲಿ ನೀಡಿದ 93 ಕೋಟಿ ರು. ಇದೀಗ 798 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಯ ವಿಳಂಬದಿಂದ ಮೂರು ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾರದಷ್ಟು ಬಿಗುಡಾಯಿಸುವುದರೊಂದಿಗೆ ರಾಜ್ಯದ ಜನರ ತೆರಿಗೆ ಹಣ ಅನಗತ್ಯವಾಗಿ ಮಹದಾಯಿ ನೀರಿನಲ್ಲಿ ಕೊಚ್ಚಿ ಹೋಗುವಂತಾಗಿದೆ.
ಎಷ್ಟೇಷ್ಟು ಹೆಚ್ಚಳ: ಕಳಸಾ ನಾಲಾ: ಮಲಪ್ರಭಾ ಜಲಾಶಯಕ್ಕೆ ನೀರು ತರಲು ಕಳಸಾ ಮತ್ತು ಹರತಾಳ ಹಳ್ಳ ಸೇರಿ ಎರಡು ಕಡೆಗಳಲ್ಲಿ ಅಣೆಕಟ್ಟು ನಿರ್ಮಾಣ ಹಾಗೂ ಎರಡೂ ಕಡೆಯಿಂದ ಮಲಪ್ರಭಾ ಜಲಾಶಯದ ವರೆಗೆ 10.3ಕಿ.ಮೀ ವರೆಗೆ ನಾಲಾ ನಿರ್ಮಾಣ ಮಾಡುವ 'ಕಳಸಾ ನಾಲಾ' ಇದರ ಮೊದಲ ಯೋಜನೆಯಾಗಿದೆ.
ಈ ನಾಲಾ ಯೋಜನೆಯಿಂದ 3.56 ಟಿಎಂಸಿ ಅಡಿ ನೀರು ಲಭ್ಯವಾಗಲಿದ್ದು, ಇದಕ್ಕೆ 2000ರಲ್ಲಿ ತಯಾರಿಸಿದ ಯೋಜನೆಯಂತೆ 44 ಕೋಟಿ ರೂಪಾಯಿ ಯೋಜನಾ ವೆಚ್ಚ. ಆದರೆ, 16 ವರ್ಷಗಳ ಬಳಿಕ 428 ಕೋಟಿ ರೂಪಾಯಿಗೆ ಹೆಚ್ಚಳವಾಗಿದ್ದು, ಅಂದಾಜು ಶೇ 1000 ಪಟ್ಟು ಹೆಚ್ಚಳವಾಗಿದೆ.

ಬಂಡೂರಿ ನಾಲಾ: ಎರಡನೇಯದಾಗಿ ಬಂಡೂರಿ ನಾಲಾ ಜೋಡಣೆ ಯೋಜನೆಯಾಗಿದ್ದು, ಸಿಂಗಾರ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ನಿರ್ಮಿಸಿ ಇಲ್ಲಿ ಸಂಗ್ರಹವಾಗುವ ನೀರನ್ನು ಬಂಡೂರಿ ಜಲಾಶಯಕ್ಕೆ ತಿರುಗಿಸುವುದಾಗಿದೆ.
ಇಲ್ಲಿ ಸಂಗ್ರಹವಾಗುವ 4 ಟಿಎಂಸಿ ಅಡಿ ನೀರನ್ನು 5.15ಕಿ.ಮೀ ನಾಲಾ ಮೂಲಕ ಮಲಪ್ರಭಾ ಜಲಾಶಯಕ್ಕೆ ತರುವುದು ಈ ಯೋಜನೆಯ ಉದ್ದೇಶವಾಗಿದೆ. ಇದರ ಆರಂಭಿಕ ಯೋಜನಾ ವೆಚ್ಚ 49 ಕೋಟಿ ರೂಪಾಯಿ ಆಗಿದ್ದು, ಈಗ 370 ಕೋಟಿ ರು.ಗೆ ಏರಿಕೆಯಾಗಿದೆ.












Click it and Unblock the Notifications