Hubli Violence : ಹುಬ್ಬಳ್ಳಿ ಗಲಭೆ; ಸ್ಟೇಟಸ್ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ
ಹುಬ್ಬಳ್ಳಿ, ಏಪ್ರಿಲ್ 18; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುವಕನ ಪೋಷಕರನ್ನು ಸಹ ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.
ಸೋಮವಾರ ಹುಬ್ಬಳ್ಳಿಯ ನ್ಯಾಯಾಲಯಕ್ಕೆ ಪೊಲೀಸರು ಯುವಕ ಅಭಿಷೇಕ್ ಹಿರೇಮಠ ಹಾಜರುಪಡಿಸಿದ್ದರು. ಕೋರ್ಟ್ ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.
ಅಭಿಷೇಕ್ ಹಿರೇಮಠ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದರು. ಸರ್ಕಾರಿ ವಕೀಲರು ಇಂದು ಆಕ್ಷೇಪಣೆ ಸಲ್ಲಿಕೆ ಮಾಡಲಿಲ್ಲ. ಮಂಗಳವಾರ ಆಕ್ಷೇಪಣೆ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಆಕ್ಷೇಪಣೆ ಸಲ್ಲಿಕೆ ಬಳಿಕ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

ಆರೋಪಿ ಅಭಿಷೇಕ್ ಹಿರೇಮಠ ವಾಟ್ಸಪ್ನಲ್ಲಿ ಎಡಿಟ್ ಮಾಡಿದ ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆಸ್ಪತ್ರೆ, ಆಂಜನೇಯ ದೇವಾಲಯದ ಮೇಲೆ ಕಲ್ಲು ತೂರಲಾಗಿತ್ತು.
ಅಭಿಷೇಕ್ ಹಿರೇಮಠ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ. ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ.
ಈ ಪೋಸ್ಟರ್ ಕುರಿತು ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಮಾಹಿತಿ ಬಂದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಒಂದು ಸಮುದಾಯದವರು ಜಮಾವಣೆಗೊಂಡರು. ಆರೋಪಿ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ಆರೋಪಿಯ ವಿರುದ್ಧ ದೂರು ನೀಡಿದರು.
ಹೆಚ್ಚು ಜನರು ಜಮಾವಣೆಗೊಳ್ಳುತ್ತಿದ್ದಂತೆ ಪೊಲೀಸರ ಜೊತೆ ವಾಗ್ವಾದ ನಡೆದಿತ್ತು. ಬಳಿಕ ಆಸ್ಪತ್ರೆ, ಆಂಜನೇಯ ದೇಗುಲದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಪೊಲೀಸರ ಮೇಲೆ ಸಹ ಕಲ್ಲು ತೂರಾಟ ನಡೆಸಿದ್ದು, 10ಕ್ಕೂ ಅಧಿಕ ಸಿಬ್ಬಂದಿ ಗಾಯಗೊಂಡರು.
ಶನಿವಾರ ರಾತ್ರಿಯೇ ಸ್ಟೇಟಸ್ ಹಾಕಿದ್ದ ಆರೋಪಿ ಅಭಿಷೇಕ್ ಹಿರೇಮಠ ಬಂಧಿಸಿದ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದರು. ಸೋಮವಾರ ಆರೋಪಿಯನ್ನು ನ್ಯಾಯಾಲಯದ ಮುಂದೆ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.
ಪೋಷಕರಿಗೆ ಭದ್ರತೆ; ಅಭಿಷೇಕ್ ಹಿರೇಮಠ ಪೋಷಕರಿಗೆ ಸಹ ಪೊಲೀಸ್ ಭದ್ರತೆ ನೀಡಲಾಗಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಪೊಲೀಸರು ಕಳುಹಿಸಿದ್ದಾರೆ. ಹುಬ್ಬಳ್ಳಿಯ ಬ್ಯಾಹಟ್ಟಿಯಲ್ಲಿ ಅಭಿಷೇಕ್ ವಾಸವಾಗಿದ್ದ.
ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಸಂಬಂಧ ಆರೋಪಿಗಳನ್ನು ಬಂಧಿಸಲು 8 ತಂಡಗಳನ್ನು ಪೊಲೀಸರು ರಚನೆ ಮಾಡಿದ್ದಾರೆ. ಆದರೆ ಸಿಸಿಟಿವಿ ಕ್ಯಾಮರಾಗಳು ಕೈ ಕೊಟ್ಟಿವೆ. 48 ಸಿಸಿಟಿವಿ ಕ್ಯಾಮರಾಗಳ ಪೈಕಿ 21 ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಇದರಿಂದಾಗಿ ಆರೋಪಿಗಳನ್ನು ಹುಡುಕುವುದು ಸವಾಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶೋಧ; ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳನ್ನು ಸಹ ಹುಡುಕಾಟ ನಡೆಸುತ್ತಿದ್ದಾರೆ. ಗಲಭೆ ಬಗ್ಗೆ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಮೇಲೆ ಸಹ ಕಣ್ಣಿಟ್ಟಿದ್ದಾರೆ. ಗಲಭೆಯ ಫೋಟೋ, ವಿಡಿಯೋ ಹಾಕಿ ಪ್ರಚೋದನಾಕಾರಿ ಬರಹ ಬರೆಯುತ್ತಿರುವವರ ಮೇಲೆ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ.
89 ಆರೋಪಿಗಳ ಪೈಕಿ ನಾಲ್ವರು ಅಪ್ರಾಪ್ತರಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನ ಜಖಂ, ಆಸ್ಪತ್ರೆ ಮೇಲೆ ಕಲ್ಲು ತೂರಾಟ, ಆಂಜನೇಯ ಸ್ವಾಮಿ ದೇವಾಲಯದ ಮೇಲೆ ಕಲ್ಲು ತೂರಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಂಧಿತರಾದ ಆರೋಪಿಗಳು ಇವರು.












Click it and Unblock the Notifications