ರಾಜ್ಯದ ಅವಳಿ ನಗರದಲ್ಲಿ ಕಂದಾಯ ವ್ಯಾಜ್ಯ ಅರ್ಜಿ ವಿಲೇವಾರಿಯಲ್ಲಿ ಉತ್ತಮ ಸಾಧನೆ; ಕೃಷ್ಣ ಬೈರೇಗೌಡ ಶ್ಲಾಘನೆ
ಹುಬ್ಬಳ್ಳಿ, ಸೆಪ್ಟಂಬರ್ 14: ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ (ಮೇ- ಆಗಸ್ಟ್) ರಾಜ್ಯಾದ್ಯಂತ ಉಪ ವಿಭಾಧಿಕಾರಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 32 ಸಾವಿರ ತಕರಾರು ಅರ್ಜಿಗಳ ಪೈಕಿ 16 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲೂ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶ್ಲಾಘಿಸಿದರು.
ಗುರುವಾರ ಕಂದಾಯ ಇಲಾಖೆ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಬೆಳಗಾವಿ ವಿಭಾಗದ ಮೊದಲ ಸಭೆಯಲ್ಲೇ ತಹಶೀಲ್ದಾರ್ ಹಾಗೂ ಎಸಿ-ಡಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್ಲಾ ತಕರಾರು ಅರ್ಜಿಗಳನ್ನೂ ಶೀಘ್ರ ವಿಲೇವಾರಿಗೆ ಸೂಚಿಸಲಾಗಿತ್ತು.

ಸೂಚನೆ ಮೇರೆಗೆ ರಾಜ್ಯದಲ್ಲಿ ಶೇಕಡಾ 50 ರಷ್ಟು ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅರ್ಜಿ ವಿಲೇವಾರಿಯಲ್ಲಿ ಉತ್ತಮ ಸಾಧನೆ ಆಗಿದೆ. ಈ ಮೂಲಕ ಸಾರ್ವಜನಿಕರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯದಂತೆ ನೋಡಿಕೊಳ್ಳಲಾಗಿದೆ. ಉತ್ತಮ ಸೇವೆನೀಡುವುದು ಮೂಲಕ ಇಲಾಖೆಯಲ್ಲಿಬೆಳವಣಿಗೆ ಸಾಧಿಸಲಾಗಿದೆ. ಆದಷ್ಟು ಬೇಗ ಶೇಕಡಾ 100 ರಷ್ಟು ಪ್ರಗತಿ ಸಾಧಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ: ಬಾಕಿ ಅರ್ಜಿಗಳ ವಿವರ
ಹುಬ್ಬಳ್ಳಿ-ಧಾರವಾಡಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಹೆಚ್ಚು ಚರ್ಚೆ ನಡೆಯಿತು. ಬೇರೆಯ ಜಿಲ್ಲೆಗಳಲ್ಲಿನ ಕೆಲಸ ನೋಡಿದರೆ ತಕರಾರು ಅರ್ಜಿಗಳ ವಿಲೇವಾರಿಯಲ್ಲಿ ಹುಬ್ಬಳ್ಳಿ-ಧಾರವಾಡ ಉತ್ತಮ ಸಾಧನೆ ಆಗಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಒಟ್ಟು 24 ತಕರಾರು ಅರ್ಜಿಗಳಿವೆ. ಈ ಪೈಕಿ 17 ಅರ್ಜಿಗಳು ಮಾತ್ರ ಬಾಕಿ ಇದೆ. ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 138 ಅರ್ಜಿಗಳಿದ್ದು, ಈ ಪೈಕಿ 62 ಅರ್ಜಿಗಳು ಮಾತ್ರ ಬಾಕಿ ಇದೆ.
ಇನ್ನೂ ತಹಶೀಲ್ದಾರ್ ನ್ಯಾಯಾಲಯಗಳ ಪೈಕಿ ಹುಬ್ಬಳ್ಳಿ ನಗರದಲ್ಲಿ 2 ಅರ್ಜಿಗಳು ಮಾತ್ರ ಬಾಕಿ ಇದೆ. ಉಳಿದಂತೆ ಹುಬ್ಬಳ್ಳಿ ಗ್ರಾಮೀಣ 8, ಧಾರವಾಡ 35, ಅಳ್ನಾವರ 6, ಕಲಘಟಗಿ 4, ಕುಂದಗೋಳ 38, ನವಲಗುಂದ 06 ಹಾಗೂ ಅಣ್ಣಿಗೇರಿ 13 ಅರ್ಜಿಗಳು ಮಾತ್ರ ಬಾಕಿ ಇವೆ.

ಅತಿಕ್ರಮಣದ ತೆರವಿಗೆ ಸಚಿವರ ಸೂಚನೆ
ಅಧಿಕಾರಿಗಳು ಸಚಿವರ ಮುಂದೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿನ ಅತಿಕ್ರಮಣವಾದ ಪ್ರದೇಶಗಳ ಮಾಹಿತಿ ನೀಡಿದರು. ಧಾರವಾಡ ತಾಲ್ಲೂಕಿನಲ್ಲಿ ಒಟ್ಟು 10.05 ಎಕರೆ ಕೆರೆ ಪ್ರದೇಶ ಒತ್ತುವರಿ ಆಗಿದೆ. ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ 48.09 ಎಕರೆ , ಕುಂದಗೋಳ ತಾಲ್ಲೂಕಿನಲ್ಲಿ 17.30 ಎಕರೆ, ಅಣ್ಣಿಗೇರಿಯಲ್ಲಿ 2.24 ಎಕರೆ ಹಾಗೂ ಕಲಘಟಗಿಯಲ್ಲಿ 02.20 ಎಕರೆ ಸರ್ಕಾರಿ ಜಮೀನು ಹಾಗೂ ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶೀಘ್ರವೇ ತೆರವು ಮಾಡುವಂತೆ ಸೂಚನೆ ನೀಡಿದರು.
ಆಗಸ್ಟ್ 22 ರಿಂದ 15 ದಿನಗಳ ಕಾಲ ನವಿಲು ತೀರ್ಥ ಜಲಾಶಯದಿಂದ MRBC ಕಾಲುವೆ ಮುಖಾಂತರ ಕುಡಿಯುವ ನೀರನ್ನು ಬಿಡಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನವಲಗುಂದ ತಾಲೂಕಿನ ವಿವಿಧ ಕೆರೆಗಳು ಈಗಾಗಲೇ ತುಂಬಿಸಲಾಗಿವೆ.
ಅಕ್ಟೋಬರ್ 01 ರೊಳಗೆ ಇ-ಆಫೀಸ್ ಗೆ ಸೂಚನೆ:
ಅವಳಿನಗರದಲ್ಲಿ ಇದುವರೆಗೂ ಇ-ಆಫೀಸ್ ಜಾರಿ ಆಗದಿರುವ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಜನರ ಶೀಘ್ರ ಮತ್ತು ಸರಳ ಆಡಳಿತ ನೀಡಲು ಇ-ಆಫೀಸ್ ಸಹಕಾರಿಯಾಗಿದ್ದು, ಎಲ್ಲಾ ಕಡತಗಳನ್ನೂ ಇ-ಆಫೀಸ್ ಮೂಲಕವೇ ವಿಲೇವಾರಿ ಮಾಡಬೇಕು ಎಂಬುದು ಪ್ರಮುಖ ಯೋಜನೆ ಆಗಿದೆ. ಆದರೆ ಒಂದು ಇ ಕಚೇರಿ ಇಲ್ಲಿ ತೆರೆಯಲಾಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಸೆಪ್ಟೆಂಬರ್ 01 ರಿಂದ ಇ-ಆಫೀಸ್ ಆಡಳಿತಕ್ಕೆ ಮುಂದಾಗಬೇಕು ಎಂದು ಸಚಿವರು ನಿರ್ದೇಶಿಸಿದರು. ನಂತರ ಕಲಘಟಗಿ ತಾಲೂಕಿನ ವಿವಿಧ ಗ್ರಾಮ ಆಡಳಿತ ಅಧಿಕಾರಿ-ನಾಡ ಕಚೇರಿಗಳಿಗೆ ಸಚಿವರು ದಿಢೀರ್ ಬೇಟಿ ನೀಡಿ ಪರಿಶೀಲಿಸಿದರು.












Click it and Unblock the Notifications