ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಗೌನ್ ಧರಿಸದ ಹುಬ್ಬಳ್ಳಿ-ಧಾರವಾಡ ಮೇಯರ್: ವಿವಾದ
ಹುಬ್ಬಳ್ಳಿ, ಸೆ.30: ತಲತಲಾಂತರದಿಂದ ಬಂದಿದ್ದ ಪದ್ಧತಿಗೆ ತಿಲಾಂಜಲಿ ಹೇಳಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮುಖ್ಯಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿ ಹೀಗೆ ಅವಳಿ ನಗರಕ್ಕೆ ಯಾರೇ ಗಣ್ಯಾತಿಗಣ್ಯರು ಆಗಮಿಸಿದರೂ ಮೇಯರ್ ಆದವರು ಗೌನ್ ಧರಿಸಿಕೊಂಡೇ ಸ್ವಾಗತಿಸುವುದು ಮೊದಲಿನಿಂದಲೂ ಬಂದ ಪದ್ಧತಿ. ಆದರೆ, ಹಾಲಿ ಮೇಯರ್ ಆಗಿರುವ ಈರೇಶ್ ಅಂಚಟಗೇರಿ ಗೌನ್ಗೆ ಗುಡ್ ಬಾಯ್ ಹೇಳಿದ್ದು ಹೊಸ ವಿವಾದಕ್ಕೆ ನಾಂದಿಯಾಗಿದೆ.
ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗ ಯೋಜನೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ರಾಷ್ಟ್ರಪತಿ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಗೌನ್ ಧರಿಸದೇ ಹಾಗೆ ಸ್ವಾಗತಿಸಿದ್ದ ಮೇಯರ್ ಈರೇಶ ಅಂಚಟಗೇರಿ ಇದೀಗ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್ ಧರಿಸದೇ ಭಾಗವಹಿಸಿದ್ದಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುಂದಡಿ ಇಟ್ಟಿರುವ ಮೇಯರ್ ಅವರಿಗೆ ಗೌನ್ ತಿರಸ್ಕರಿಸುವ ಮೂಲಕ ಇಡೀ ರಾಜ್ಯದಲ್ಲಿ ಗೌನ್ ತಿರಸ್ಕರಿಸಿದ ಮೊದಲ ಮೇಯರ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌನ್ ಧರಿಸುವುದು ಬ್ರಿಟಿಷ್ ಆಡಳಿತದ ಪ್ರತೀಕ ಎಂದ ಮೇಯರ್!
ಈ ಹಿಂದೆ ಆಡಳಿತ ನಡೆಸಿರುವ 39 ಮೇಯರ್ಗಳು ಗೌನ್ ಧರಿಸಿಕೊಂಡೆ ಸಾಮಾನ್ಯ ಸಭೆ ನಡೆಸಿದ್ದರು. ಆದರೆ, ಇದೀಗ ಈರೇಶ ಅಂಚಟಗೇರಿ ಈ ಗೌನ್ ಧರಿಸುವುದಕ್ಕೆ ಇತಿಶ್ರೀ ಹಾಡಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ವೇಳೆ ಗೌನ್ ಧರಿಸಿರಲಿಲ್ಲ. ಜತೆಗೆ ಗೌನ್ ಧರಿಸುವುದು ಬ್ರಿಟಿಷ್ ಆಡಳಿತದ ಪ್ರತೀಕ ಎನಿಸುತ್ತಿದೆ. ಹೀಗಾಗಿ ಇನ್ನು ಮುಂದೆ ತಾವು ಗೌನ್ ಧರಿಸುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮದಲ್ಲೂ ಕಾಣೆಯಾಗಿತ್ತು ಗೌನ್
ಕಳೆದ ಎರಡು ದಿನಗಳ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮೇಯರ್ ಈರೇಶ ಅಂಚಟಗೇರಿ ಗೌನ್ ಧರಿಸದೇ ಸ್ವಾಗತ ಮಾಡಿದ್ದರು. ಜತೆಗೆ ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮದಲ್ಲೂ ಮೇಯರ್ ಗೌನ್ ಧರಿಸಿರಲಿಲ್ಲ. ಇದೀಗ ಸಾಮಾನ್ಯಸಭೆಯಲ್ಲೂ ಗೌನ್ ಧರಿಸದೇ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಗುರುವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯುತ್ತಿತ್ತು . ಆದರೆ ಸಭೆ ಆರಂಭದಲ್ಲೇ ಮೇಯರ್ 'ಗೌನ್' ಗದ್ದಲ ಸೃಷ್ಟಿಯಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯ ಮಧ್ಯೆ ಜಟಾಪಟಿ ನಡೆಯಿತು.
ಸಾಮಾನ್ಯ ಸಭೆಗೂ ಗೌನ್ ಧರಿಸದೆ ಬಂದ ಮೇಯರ್!
ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಿದ್ದರು. ಈ ವೇಳೆ ಮೇಯರ್ ಈರೇಶ ಅಂಚಟಗೇರಿ ಅವರು ರಾಷ್ಟ್ರಪತಿ ಅವರಿಗೆ ತಮ್ಮ ಗೌನ್ ಇಲ್ಲದೆ ಪೌರ ಸನ್ಮಾನ ಮಾಡಿದ್ದಾರೆಂದು ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು. ಗೌನ್ ಧರಿಸದ ಶಿಷ್ಟಾಚಾರಕ್ಕೆ ತಿಲಾಂಜಲಿ ಹಾಡಿರುವ ಮೇಯರ್ ಈರೇಶ ಅಂಚಟಗೇರಿ, ಸಭೆಗೆ ಆಗಮಿಸುತ್ತಿದ್ದಂತೆಯೇ ಮೇಯರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಹರಿಹಾಯ್ದರು . ಅಷ್ಟೇ ಅಲ್ಲದೆ ಇಂದಿನ ಸಾಮಾನ್ಯ ಸಭೆಗೂ ಕೂಡ ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸದೆ ಬಂದಿದ್ದರು. ಸಭೆಯಲ್ಲಿಯೇ ಪ್ರತಿಭಟನೆಗೆ ಮುಂದಾದ ಕೈ ಸದಸ್ಯರು, ಸಭಾಂಗಣದಲ್ಲಿಯೇ ಧರಣಿಗೆ ನಡೆಸಿದ್ದಾರೆ.
ಗೌನ್ ಧರಿಸಿ, ಇಲ್ಲ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿ
ಗೌನ್ ಧರಿಸಿಯೇ ಸಭೆ ನಡೆಸಬೇಕೆಂದು ಪಟ್ಟು ಹಿಡಿದು ಕುಳಿತ ಸದಸ್ಯರು. ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸುವುದನ್ನ ಕೈಬಿಟ್ಟು ಅಗೌರವ ತೋರುತ್ತಿದ್ದಾರೆ. ಮೇಯರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಗೌನ್ ಧರಿಸಬೇಕು ಇಲ್ಲವೇ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಮೇಯರ್ ವಿರುದ್ಧ ಘೋಷಣೆ ಕೂಗಿ ಸಭೆಯಲ್ಲಿಯೇ ಪ್ರತಿಭಟನೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.