ಜಾಹೀರಾತು ನೋಡಿ ಬಂದ, ಲಕ್ಷ ಲಕ್ಷ ದೋಚಿ ಕೊನೆಗೆ ಪೊಲೀಸರ ಅತಿಥಿಯಾದ
ಹುಬ್ಬಳ್ಳಿ, ನವೆಂಬರ್ 30: ಜಾಹೀರಾತಿನಿಂದ ಸಂಪರ್ಕ ಸಾಧಿಸಿ ಮದುವೆಯಾಗುವುದಾಗಿ ನಂಬಿಸಿ ವಧುವಿನ ಮನೆಯವರಿಂದ 19 ಲಕ್ಷ ರೂಪಾಯಿ ದೋಚಿದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಮೈಸೂರು ಮೂಲದ ಪುಟ್ಟಯ್ಯ ಅಲಿಯಾಸ್ ರಮೇಶ ಸಿದ್ದಮಾಧು ಬಂಧಿತ ಆರೋಪಿ. ಹುಬ್ಬಳ್ಳಿ ನಿವಾಸಿಯೊಬ್ಬರು ತಮ್ಮ ಮಗಳಿಗೆ ವರ ಹುಡುಕಲು 2016ರಲ್ಲಿ ಮಾಸಪತ್ರಿಕಯೊಂದರಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತಿನಲ್ಲಿ ಮಗಳ ಮಾಹಿತಿ ಹಾಗೂ ಮೊಬೈಲ್ ನಂಬರ್ ಅನ್ನೂ ನೀಡಿದ್ದರು. ಇದನ್ನ ಅಸ್ತ್ರವಾಗಿ ಮಾಡಿಕೊಂಡ ಆರೋಪಿ ಜಾಹೀರಾತು ನೋಡಿ ವಧುವಿನ ತಂದೆಯನ್ನು ಸಂಪರ್ಕಿಸಿದ್ದ ವರ ತಾನೂ ಕೆಪಿಟಿಸಿಎಲ್ ಗುಂಡ್ಲುಪೇಟೆಯಲ್ಲಿ ಎಇಇ ಎಂದು ಪರಿಚಯ ಮಾಡಿಕೊಂಡಿದ್ದ. ತನಗೆ ಶೀಘ್ರದಲ್ಲೆ ಪ್ರಮೋಷನ್ ಆಗಲಿದೆ. ಗುಂಡ್ಲುಪೇಟೆಯಿಂದ ಹುಣಸೂರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಹಣ ನೀಡಬೇಕು ಎಂದು ಹುಡುಗಿಯ ಮನೆಯವರನ್ನು ನಂಬಿಸಿದ್ದ. ಅಲ್ಲದೇ 2016ರಿಂದ 2018ರವರೆಗೆ ಬ್ಯಾಂಕ್ ಅಕೌಂಟ್ ಮೂಲಕ ಬರೋಬ್ಬರಿ 19 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ.

ಆದರೆ ವರ್ಷಗಳು ಕಳೆಯುತ್ತಿದ್ದರೂ ಹಣವನ್ನು ಮರಳಿ ನೀಡದೇ ಮಗಳನ್ನೂ ಮದುವೆಯಾಗದೇ ವಂಚಿಸಿದ ಆರೋಪಿ ವಿರುದ್ಧ ಹುಡುಗಿಯ ಮನೆಯವರು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದಲ್ಲದೇ ಆರೋಪಿಯಿಂದ 19 ಲಕ್ಣ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ.












Click it and Unblock the Notifications