Anjali: ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿ ಕೊಲೆ: ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಜೀವ ತೆಗೆದ ಪಾಪಿ
ಹುಬ್ಬಳ್ಳಿ, ಮೇ 15: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಂತದ್ಧೆ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಹತ್ಯೆ ಮಾಡಿದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಲ್ಲಿ ವೀರಾಪುರ ಓಣಿಯ ನಿವಾಸಿ ಅಂಜಲಿ ಮೋಹನ ಅಂಬಿಗೇರ (21) ಕೊಲೆಯಾದ ದುರ್ದೈವಿ ಯುವತಿ. ಯಲ್ಲಾಪುರ ಓಣಿಯ ಗಿರೀಶ (ವಿಶ್ವ) ಎಸ್. ಸಾವಂತ ಎಂಬಾತ ಕೊಲೆ ಮಾಡಿದ ಪಾಗಲ್ ಪ್ರೇಮಿ.

ಯುವತಿ ಅಂಜಲಿಯು ಪ್ರೀತಿ ನಿರಾಕರಿಸಿದ್ದಕ್ಕೆ ಹುಚ್ಚು ಪ್ರೇಮಿಯಾದ ಗಿರೀಶ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಇರುವ ಯುವತಿಯ ಮನೆಗೆ ಬುಧವಾರ ಬಂದಿದ್ದಾರೆ. ಗಿರೀಶ್ ಜೋರಾಗಿ ಬಾಗಿಲು ಬಡಿದಿದ್ದಾನೆ ಯಾರೆಂದು ನೋಡಲು ಅಂಜಲಿಯೇ ಬಾಗಿಲು ತೆರೆದಿದ್ದಾಳೆ. ಒಳನುಗ್ಗಿದ ಪಾಪಿ ಗಿರೀಶ್ ಆಕೆಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹತ್ಯೆ ಬಳಿಕ ಆರೋಪಿ ಪರಾರಿ
ಯುವತಿಯನ್ನು ಹತ್ಯೆ ಮಾಡುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆತನ ತಾಯಿ ಮನೆ ಮನೆಯ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಂತಕನ ಪತ್ತೆ ನಡೆಸುತ್ತಿದ್ದಾರೆ. ಇನ್ ಚಾರ್ಜ್ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ.

ಹಂತಕನಿಗಾಗಿ ಪೊಲೀಸ್ ಶೋಧ
ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಯುವತಿಯ ಕೊಲೆಯಾಗಿದ್ದು. ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಈಗಾಗಲೇ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂದು ಗೊತ್ತಾಗಲಿದೆ. ಈಗಾಗಲೇ ತನಿಖೆ ಆರಂಭಿಸಿದ್ದೇವೆ. ತನಿಖೆಯ ನಂತರ ಎಲ್ಲ ವಿಷಯ ತಿಳಿಸಲಾಗುವುದು ಎಂದು ಅವರು ಹೇಳಿದರು.
ಕೆಲವೇ ವಾರಗಳ ಹಿಂದೆ ಹುಬ್ಬಳ್ಳಿಯ ವಿಬಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ವಿದ್ಯಾರ್ಥಿನಿಯ ಕೊಲೆ ಯಾಗಿದೆ. ಅಕೆಯ ಸಹಪಾಠಿ ಪಯಾಜ್ ಎಂಬಾತ ಕೊಲೆ ಮಾಡಿದ್ದ. ಇದು ಲವ್ ಜಿಹಾದ್ ಕಾರಣದಿಂದ ಆಗಿದೆ ಎಂದು ಅನುಮಾನಿಸಲಾಗಿತ್ತು. ರಾಜ್ಯವ್ಯಾಪಿ ಭಾರೀ ಖಂಡನೆ, ಪ್ರತಿಭಟನೆ ನಡೆಯಿತು. ಇದೀಗ ನೇಹಾ ರೀತಿಯಲ್ಲೇ ಕೊಲೆ ನಡೆದಿದೆ. ಇದಕ್ಕೂ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.












Click it and Unblock the Notifications