ಶಾಸಕ ಬಿ.ಕೆ ಸಂಗಮೇಶ್ ನಡೆಗೆ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ
ಹುಬ್ಬಳ್ಳಿ, ಮಾರ್ಚ್ 7: "ಭದ್ರಾವತಿ ಕ್ಷೇತ್ರದ ಶಾಸಕ ಬಿಕೆ ಸಂಗಮೇಶ್ ಅವರು ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಪ್ರಕರಣದಿಂದ ವೈಯಕ್ತಿಕವಾಗಿ ಬಹಳ ನೋವಾಗಿದೆ" ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಶಾಸಕರಾದವರು ಸದನದ ಒಳಗೆ ಮತ್ತು ಹೊರಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸದನದ ಗೌರವ ಹೆಚ್ಚಿಸುವ ರೀತಿಯಲ್ಲಿ ವರ್ತಿಸಬೇಕು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಇದೇ ವೇಳೆ ಅಭಿಪ್ರಾಯಪಟ್ಟರು.
ಶನಿವಾರ(ಮಾ.6) ದಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನಪ್ರತಿನಿಧಿಗಳು ಕೆಲವು ವಿಷಯಗಳಲ್ಲಿ ಸಮಾಧಾನದಿಂದ ವರ್ತಿಸಬೇಕು. ಸಭಾಪತಿ ಅಥವಾ ಸ್ಪೀಕರ್ ಬಳಿ ಹೋಗಿ ಮನವಿ ಮಾಡಬೇಕು. ಇದನ್ನು ಹೊರತುಪಡಿಸಿ ಮೈ ಮೇಲಿನ ಬಟ್ಟೆ ಬಿಚ್ಚುವುದು, ಮತ್ತಿತರ ಅಸಹ್ಯಕರ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ" ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲೇ ಸಂಪುಟದ ಅನೇಕ ಸಚಿವರು ಕೋರ್ಟ್ ಮೆಟ್ಟಿಲೇರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, "ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಪರಿಷತ್ ಕಲಾಪದಲ್ಲಿ ಮಾಧ್ಯಮವನ್ನು ಬ್ಯಾನ್ ಮಾಡುವಂತೆ ಅನೇಕರು ಹೇಳಿದ್ದಾರೆ."
"ಆದರೆ, ನಾನು ಬ್ಯಾನ್ ಮಾಡಿಲ್ಲ. ಮಾಧ್ಯಮದವರು ಎಷ್ಟು ಜನ ಇರುತ್ತಾರೋ ಅಷ್ಟು ನಮಗೆ ಒಳ್ಳೆಯದು ಎಂದು ಬಸವರಾಜ್ ಹೊರಟ್ಟಿ ಹೇಳಿದರು. ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರು ನೀಡಿರುವ ಕರ್ತವ್ಯವನ್ನು ಸರಿಯಾದ ನಿರ್ವಹಿಸಬೇಕು" ಎಂದು ಹೊರಟ್ಟಿ ಸಲಹೆ ನೀಡಿದರು.