ಬಸ್ ನಿಲ್ದಾಣಕ್ಕೆ ನಂಬರ್ ಇಲ್ಲದ ಬುಲೆಟ್ ಏರಿಬಂದ ಶೆಟ್ಟರ್!
ಹುಬ್ಬಳ್ಳಿ, ಜುಲೈ, 25: ಸಾರಿಗೆ ನೌಕರರ ಮುಷ್ಕರದಿಂದ ಹುಬ್ಬಳ್ಳಿ ನಗರದಲ್ಲಿ ಸೋಮವಾರ ಬೆಳಗ್ಗಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ಮತ್ತು ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪುರ ಚೌಕ್, ಗದಗ ಗೇಟ್, ಕೇಶ್ವಾಪುರ ಸರ್ಕಲ್ ಮುಂತಾದೆಡೆ ಸಾವಿರಾರು ಪ್ರಯಾಣಿಕರು ಖಾಸಗಿ ಬಸ್ ಗಳ ಮೊರೆ ಹೋಗಿದ್ದಾರೆ. ದುಪ್ಪಟ್ಟು ಹಣ ನೀಡಿಯಾದರೂ ಸರಿ ತಮ್ಮೂರಿಗೆ ತಲುಪಿದರೆ ಸಾಕು ಎನ್ನುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಎಲ್ಲ ಶಾಲೆಗಳ ಬಾಗಿಲು ಮುಚ್ಚಿವೆ.[ಸಾರಿಗೆ ನೌಕರರ ಮುಷ್ಕರ ಯಾರು, ಏನು ಹೇಳಿದರು?]
ಖಾಸಗಿ ವಾಹನ ಚಾಲಕರು ಎಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆಯೋ ಆ ಪ್ರದೇಶಗಳಿಗೆ ತಮ್ಮ ವಾಹನಗಳನ್ನು ಬಿಡುತ್ತಿದ್ದಾರೆ. ಹೆಚ್ಚಿನ ಜನ ಬೇರೆ ರಾಜ್ಯದ ಬಸ್ ಗಳಿಗೆ ಅಂದರೆ ಆಂಧ್ರ, ಮಹಾರಾಷ್ಟ್ರ, ಗೋವಾ ರಾಜ್ಯದ ಬಸ್ ಗಳಿಗೆ ಮೊರೆ ಹೋಗುತ್ತಿದ್ದಾರೆ. [ಕರ್ನಾಟಕ ಸರ್ಕಾರಕ್ಕೆ ಕೊಡಗಿನ ಬೆಳ್ಳಿಯಪ್ಪನ ಪ್ರಶ್ನೆಗಳು]
ರೈಲ್ವೆ ನಿಲ್ದಾಣದಲ್ಲಿ ಎಂದಿಗಿಂತ ಹೆಚ್ಚಿನ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಟಿಕೆಟ್ ಗಾಗಿ ವಿಶೇಷ ನಾಲ್ಕೈದು ಕೌಂಟರ್ ಗಳನ್ನು ತೆರೆಯಲಾಗಿದೆ. ಇದ್ದ ಟ್ರೈನ್ ನಲ್ಲಿಯೇ ಪ್ರಯಾಣಿಸಿದರೆ ಸಾಕು ಎನ್ನುವ ಸ್ಥಿತಿ ಪ್ರಯಾಣಿಕರದಾಗಿದೆ. ಹುಬ್ಬಳ್ಳಿಯಲ್ಲಿ ಸಾರಿಗೆ ಮುಷ್ಕರದ ಬಿಸಿ ಹೇಗಿತ್ತು? ನೋಡಿಕೊಂಡು ಬನ್ನಿ..

ಶೆಟ್ಟರ್ ಬೆಂಬಲ
ಹಳೇ ಬಸ್ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮಿಸಿ, ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳಿಗೆ ಬೆಂಬಲ ಸೂಚಿಸಿದರು

ಬೈಕ್ ಏರಿದ ಶೆಟ್ಟರ್
ಬಸ್ ನಿಲ್ದಾಣಕ್ಕೆ ಶೆಟ್ಟರ್ ಬೈಕ್ ಏರಿ ಬಂದಿದ್ದರು. ಸಾರಿಗೆ ಮುಷ್ಕರಕ್ಕೆ ಬೆಂಬಲವಿದೆ ಎಂದ ಶೆಟ್ಟರ್ ಸಿಬ್ಬಂದಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಆಗ್ರಹಿಸಿದರು.

ಚೆನ್ನಮ್ಮ ಸರ್ಕಲ್ ಖಾಲಿ
ಹುಬ್ಬಳ್ಳಿಯ ಆಕರ್ಷಣೆಯ ಕೇಂದ್ರ, ಸದಾ ವಾಹನಗಳಿಂದ ತುಂಬಿರುತ್ತಿದ್ದ ರಾಣಿ ಚೆನ್ನಮ್ಮ ವೃತ್ತ ಸೋಮವಾರ ಖಾಲಿ ಹೊಡೆಯುತ್ತಿತ್ತು.

ರೈತರ ಬೆಂಬಲ
ಸಾರಿಗೆ ನೌಕರರ ಮುಷ್ಕರಕ್ಕೆ ಕೆಲ ರೈತ ಮುಖಂಡರು ಬೆಂಬಲ ಸೂಚಿಸಿದ್ದರು. ಬಸ್ ನಿಲ್ದಾಣಕ್ಕೆ ಆಗಮಿಸಿ ಸಾರಿಗೆ ಸಿಬ್ಬಂದಿ ಜತೆ ಮಾತನಾಡಿದರು.

ತೀವ್ರ ತಪಾಸಣೆ
ರೈಲ್ವೆ ನಿಲ್ದಾಣದಲ್ಲಿ ಜನ ಜಂಗುಳಿ ಹೆಚ್ಚಿದ್ದರ ಪರಿಣಾಮ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ವಿಧ್ವಂಸಕ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಕ್ರಿಕೆಟ್ ಆಡಿದರು
ಮುಷ್ಕರದ ಪರಿಣಾಮ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿತ್ತು. ಸ್ಥಳೀಯ ಅಂಗಡಿಯ ಯುವಕರು ಇದೇ ಗ್ಯಾಪಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

ಮಾರುಕಟ್ಟೆ ಖಾಲಿ
ಬಸ್ ಬಂದ್ ಹಿನ್ನೆಲೆಯಲ್ಲಿ ನಗರ ಮಾರುಕಟ್ಟೆಗಳಲ್ಲಿ ಜನರಿಗೆ ಬಿಕೋ ಎನ್ನುತ್ತಿದೆ. ಮಾರಾಟ ವಹಿವಾಟು ಸಂಪೂರ್ಣ ಬಂದ್ ಆಗಿದೆ.

ಅಸ್ವಸ್ಥಗೊಂಡ ಪ್ರಯಾಣಿಕ
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಬಾಗಲಕೋಟೆಯ ಪ್ರಯಾಣಿಕ ರಮಜಾನ್ (42) ಎಂಬಾತನೋರ್ವ ನಗರದ ಹಳೇ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡಿದ್ದನು. ಆತನನ್ನು ಸಾರಿಗೆ ಸಿಬ್ಬಂದಿಯೇ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಲಾಟರಿ ಹೊಡೆದ ಬೇಂದ್ರೆ ಬಸ್
ಸಾರಿಗೆ ಸಿಬ್ಬಂದಿಗಳ ಮುಷ್ಕರದ ಲಾಭ ಖಾಸಗಿ ವಾಹನಗಳು ಪಡೆದುಕೊಳ್ಳುತ್ತಿರುವುದು ಹುಬ್ಬಳ್ಳಿಯಲ್ಲಿ ಸೋಮವಾರ ಸಾಮಾನ್ಯ ದೃಶ್ಯವಾಗಿತ್ತು. ಹುಬ್ಬಳ್ಳಿ ರೈಲು ನಿಲ್ದಾಣದಿಂದ ಧಾರವಾಡಕ್ಕೆ ಸಂಚರಿಸುವ ಬೇಂದ್ರೆ ಬಸ್ ತುಂಬಿ ತುಳುಕುತ್ತಿತ್ತು.

ಶೇರಿಂಗ್ ಆಟೋ
ಇನ್ನು ಕೆಲ ಆಟೋ ಚಾಲಕರು ಒಂದೇ ಪ್ರದೇಶಕ್ಕೆ ಹೋಗುವವರಿಗೆ ಸೀಟ್ ಶೇರಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಆಟೋ ಹತ್ತಬೇಕಾಗಿತ್ತು.












Click it and Unblock the Notifications