ಉತ್ತರ ಕರ್ನಾಟಕ ಅಭಿವೃದ್ಧಿಗೆ ಬದ್ಧ, ಎಚ್ಡಿಕೆ ಮಹತ್ವದ ನಡೆ
ಹುಬ್ಬಳ್ಳಿ, ಆಗಸ್ಟ್ 13: ಜನತಾದರ್ಶನದ ಮೂಲಕ ಹಲವು ವಿಕಲಚೇತನರು ನನ್ನನ್ನು ಭೇಟಿ ಮಾಡಿ ಉದ್ಯೋಗ ಕಲ್ಪಿಸಲು ಮನವಿ ಮಾಡುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ವಿಕಲಚೇತನರಿಗೆ ಆಯಾ ಜಿಲ್ಲೆಗಳಲ್ಲಿ ಇರುವ ಕೈಗಾರಿಕೆಗಳಲ್ಲಿ ಕೆಲಸ ಕೊಡಿಸಲು ಉದ್ದೇಶಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಕುರಿತು ಜಿಲ್ಲೆಯ ಉದ್ಯಮಿಗಳ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹವಾಮಾನ ವೈಪರೀತ್ಯದಿಂದ ಆಲಮಟ್ಟಿ ಪ್ರವಾಸ ರದ್ದುಗೊಳಿಸಿದ ಅವರು ಇಂದು ಹುಬ್ಬಳ್ಳಿಯ ವೇಮನ ಬೀದಿಯಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಮಾರಸ್ವಾಮಿ ಅವರ ಆಲಮಟ್ಟಿ ಬಾಗಿನ ಕಾರ್ಯಕ್ರಮ ರದ್ದು
ಮುಂದಿನ ವಾರ ಮತ್ತೆ ಪ್ರಯಾಣ ಕೈಗೊಂಡು ಆಲಮಟ್ಟಿ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತೇನೆ. ಕೊಪ್ಪಳ ಜಿಲ್ಲೆಯ ಮುನಿರಬಾದ್ ಬಳಿಯ ತುಂಗಭದ್ರಾ ಜಲಾಶಯವು ಕೂಡ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಆಗಸ್ಟ್ 15 ರಂದು ಅಲ್ಲಿ ಬಾಗಿನ ಅರ್ಪಿಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆಯಿಂದಾಗಿ ಹಲವಾರು ಜಿಲ್ಲೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ತಿಂಗಳಿಗೊಮ್ಮೆ ಉತ್ತರ ಕರ್ನಾಟಕಕ್ಕೆ ಭೇಟಿ
ಸೆಪ್ಟಂಬರ್ 1 ರಿಂದ ತಿಂಗಳಲ್ಲಿ ಒಂದು ದಿನ ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಒಂದು ಗ್ರಾಮ ಪಂಚಾಯತಿ ಅಥವಾ ಹೋಬಳಿಯಲ್ಲಿ ರೈತರೊಂದಿಗೆ ಕಾಲ ಕಳೆದು ಅವರ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಸ್ಪಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇನೆ. ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ಶೇ96% ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಯಾವುದೇ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಜನರ ಮುಖ್ಯಮಂತ್ರಿಯಂತೆ ಕಾಣ್ತಿದ್ದಾರೆ ಕುಮಾರಸ್ವಾಮಿ, ನೀವೇನಂತೀರಿ?
ಉದ್ಯೋಗಕ್ಕೆ ಹೆಚ್ಚಿನ ಒತ್ತು
'ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಗೆ ಸಾಕಷ್ಟು ಬೇಡಿಕೆ ಇಲ್ಲ ಎಂದು ಜಿ.ಪಂ.ಸಿಇಓ ತಿಳಿಸಿದ್ದಾರೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ ಮತ್ತಿತರ ಸಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ನೀಡಲು ಸೂಚಿಸಲಾಗಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಾಸ್ಟೇಲ್ ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯ ಖಾತ್ರಿ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನಿರೀಕ್ಷಿತ ಭೇಟಿ ನೀಡಲು ಸೂಚಿಸಲಾಗಿದೆ'- ಎಚ್ ಡಿ ಕುಮಾರಸ್ವಾಮಿ
In Pics: ಭತ್ತದ ನಾಟಿ ಮಾಡಿ ಸಹಸ್ರಾರು ಅಭಿಮಾನಿಗಳ ಮನಗೆದ್ದ ಕುಮಾರಣ್ಣ
ಮಹದಾಯಿ ವಿವಾದದ ಬಗ್ಗೆ
'ಬರುವ ಒಂದು ವಾರದೊಳಗೆ ಮಹದಾಯಿ ವಿವಾದ ಕುರಿತು ತೀರ್ಪು ಪ್ರಕಟವಾಗಬಹುದು. ಆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಮುಂಬಯಿ ಹಾಗೂ ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕಲಬುರ್ಗಿಯಲ್ಲಿ ಸೌರಶಕ್ತಿ ಉತ್ಪಾದನೆ, ಬೀದರ್ನಲ್ಲಿ ಕೃಷಿ ಉಪಕರಣ, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಗೊಂಬೆಗಳು, ಬಳ್ಳಾರಿಯಲ್ಲಿ ಜವಳಿ, ಬೆಳಗಾವಿಯಲ್ಲಿ ಪೀಠೋಪಕರಣ ಉತ್ಪಾದನಾ ಕ್ಲಸ್ಟರ್ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಪ್ರತಿ ವರ್ಷ ಪ್ರತಿ ಜಿಲ್ಲೆಗೆ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು. ಯುವಕರು ಉದ್ಯೋಗ ಅರಸಿ ಗೋವಾ, ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಲು ಈ ಕ್ಲಸ್ಟರ್ಗಳು ಸಹಕಾರಿಯಾಗಲಿವೆ'ಎಚ್ ಡಿ ಕುಮಾರಸ್ವಾಮಿ
ರೈತರ ಸಾಲಮನ್ನಾ
ಕಳೆದ ಎರಡು ತಿಂಗಳ ಕಾಲ ಬೆಂಗಳೂರಿನಲ್ಲಿಯೇ ಕುಳಿತು ರೈತರ ಸಾಲ ಮನ್ನಾ ಹಣ ಕ್ರೋಢೀಕರಣಕ್ಕೆ ಯೋಜನೆ ರೂಪಿಸಲಾಯಿತು. 9448 ಕೋಟಿ ರೂಪಾಯಿಗಳ ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಹಾಗೂ ಹಿಂದನ ಮನ್ನಾದ 4000 ಕೋಟಿ ಬಾಕಿ ಹಣವನ್ನು ಸೇರಿ ಒಟ್ಟು ಸುಮಾರು 13500 ಕೋಟಿ ರೂಪಾಯಿಗಳನ್ನು ಸಹಕಾರಿ ಬ್ಯಾಂಕುಗಳಿಗೆ ಪಾವತಿಸಬೇಕಾಗಿದೆ. ಯಾವ ತಿಂಗಳಿನಲ್ಲಿ ಎಷ್ಟು ಹಣ ಪಾವತಿಸಲಾಗುವುದು ಎಂದು ಸಹಕಾರಿ ಸಂಸ್ಥೆಗಳಿಗೆ ತಿಳಿಸಲಾಗುತ್ತಿದೆ. ರೈತರಿಗೆ ಹೊಸ ಸಾಲ ನೀಡಲು ಬ್ಯಾಂಕುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಆಂಧ್ರ ಪ್ರದೇಶ ಮಾದರಿಯಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ದತಿಯನ್ನು ರೈತರಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ- ಎಚ್ ಡಿ ಕುಮಾರಸ್ವಾಮಿ
ಉತ್ತರ ಕರ್ನಾಟಕದ ಜನಮೆಚ್ಚುಗೆ ಕಾರ್ಯಕ್ರಮ
ಹುಬ್ಬಳ್ಳಿ-ಧಾರವಾಡ ಹೊರ ವರ್ತುಲ ರಸ್ತೆಯನ್ನು ನಿರ್ಮಿಸಲಾಗುವುದು. ಬೈಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಿ ವಿಸ್ತರಿಸಲಾಗುವುದು.
ಬೆಂಗಳೂರಿನಲ್ಲಿ ಇರುವ ಕಚೇರಿಗಳ ಸ್ಥಳಾಂತರ ರಾಜಧಾನಿಯಲ್ಲಿರುವ ಕೃಷ್ಣಾಭಾಗ್ಯ ಜಲ ನಿಗಮ, ಉಪ ಲೋಕಾಯುಕ್ತರು ಹಾಗೂ ಮಾಹಿತಿ ಆಯುಕ್ತರ ಕಾರ್ಯಾಲಯಗಳನ್ನು ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗಗಳಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಕೆಶಿಪ್ ಕಚೇರಿಯನ್ನು ಈಗಿರುವ ಸ್ಥಳದಲ್ಲಿ ಯಾವುದೇ ಕಾಮಗಾರಿಗಳು ಇಲ್ಲದಿರುವದರಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕಾಮಗಾರಿಗಳು ಇರುವ ಪ್ರದೇಶಕ್ಕೆ ಈ ಕಚೇರಿಯನ್ನು ವರ್ಗಾಯಿಸುವ ಪರಿಪಾಠ ಮೊದಲಿನಿಂದಲೂ ಇದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಲು ಸೂಚಿಸಲಾಗಿದೆ. ಉತ್ತರ ಕರ್ನಾಟಕದ ಜನರು ಮೆಚ್ಚುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತೇನೆ ಎಂದರು.