ನಕಲಿ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಅಧಿಕಾರಿ ಬಂಧನ
ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವಾರು ಜನರಿಗೆ ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ನಕಲಿ ಕಸ್ಟಮ್ಸ್ ಹಾಗೂ ಎಕ್ಸೈಜ್ ಅಧಿಕಾರಿ ಸೇರಿದಂತೆ ಮೂವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಬಂಧನ.
ಹುಬ್ಬಳ್ಳಿ, ಜುಲೈ 08 : ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಲವಾರು ಜನರಿಗೆ ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ನಕಲಿ ಕಸ್ಟಮ್ಸ್ ಹಾಗೂ ಸೆಂಟ್ರಲ್ ಎಕ್ಸೈಸ್ ಸೂಪರಿಟೆಂಡೆಂಟ್ ಅಧಿಕಾರಿ ಸೇರಿದಂತೆ ಮೂವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಹಾರಾಷ್ಟ್ರ ರಾಜ್ಯದ ಸೊಲ್ಹಾಪುರ ಜಿಲ್ಲೆಯ ಹುಟಗಿ ಗ್ರಾಮದ ಸಿದ್ದಪ್ಪ ಪಾಟೀಲ. ನಕಲಿ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ಸೂಪರಿಟೆಂಡೆಂಟ್ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ. ಈತನೊಂದಿಗೆ ನಗರದ ಶ್ಯಾಮ್ ಕಬಾಡೆ ಹಾಗೂ ರಮೇಶ್ ಮಾಳಗಿ ಎಂಬುವರನ್ನು ಬಂಧಿಸಲಾಗಿದ್ದು, ಇವರು ಮುಖ್ಯ ಆರೋಪಿಗೆ ಸಹಾಯಕರಾಗಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ, ಬಂಧಿತ ಆರೋಪಿ ಸಿದ್ದಪ್ಪ ಪಾಟೀಲ ನಗರದ ಮೊಬೈಲ್ ವ್ಯಾಪಾರಿಗೆ ಕಸ್ಟಮ್ಸ್ ಮತ್ತು ಎಕ್ಸೈಸ್ ಇಲಾಖೆಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಅನಧಿಕೃತವಾಗಿ ಇಲಾಖೆಯ ಪರವಾನಗಿಯೊಂದಿಗೆ ಕೊಡಿಸುವುದಾಗಿ ಹೇಳಿ ದೀಪಾರಾಮ್ ಎಂಬುವರಿಗೆ 9.26 ಲಕ್ಷ ಹಣ ಪಡೆದು ವಂಚಿಸಿದ್ದ.
ಇದಕ್ಕಾಗಿ ನಕಲಿ ಪತ್ರ ಸಿದ್ದಪಡಿಸಿ ದೀಪಾರಾಮ್ ಅವರಿಗೆ ಮೋಸ ಮಾಡಿದ್ದ. ಅವರು ನೀಡಿದ ದೂರಿನನ್ವಯ ಆರೋಪಿಯನ್ನು ಶಹರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 8 ಲಕ್ಷ ರೂಪಾಯಿ ಮೌಲ್ಯದ ಕಾರು, 1 ಲಕ್ಷ ರೂಪಾಯಿ ನಗದು, ಒಂದು ಜೊತೆ ಖಾಕಿ ಯೂನಿಫಾರ್ಮ್, ಒಂದು ಜೊತೆ ಶೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಕ್ಕೂ ಮೊದಲು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಅಂದಾಜು 60 ಜನರಿಂದ ಅಂದಾಜು 1.5 ಕೋಟಿಗೂ ಅಧಿಕ ಹಣ ಪಡೆದುಕೊಂಡು ವಂಚಿಸಿರುವ ಆರೋಪವೂ ಈತನ ಮೇಲಿದೆ. ತನಿಖೆ ಪೂರ್ಣಗೊಂಡ ನಂತರ ವಂಚನೆ ಪ್ರಮಾಣ ಎಷ್ಟು ಎಂದು ತಿಳಿಯಲಿದೆ ಎಂದು ರಾಣೆ ಸ್ಪಷ್ಟಪಡಿಸಿದರು.

ಕಚೇರಿ ಉದ್ಘಾಟನೆ ನಕಲಿ ಆಮಂತ್ರಣ ಪತ್ರಿಕೆ ಮುದ್ರಣ
ಬಂಧಿತ ಅಧಿಕಾರಿ ಇದೇ ಜುಲೈ 15ರಂದು ನಗರದ ಕೋರ್ಟ್ ಸರ್ಕಲ್ ನಲ್ಲಿ ಕಸ್ಟಮ್ಸ್ ಗೂಡ್ಸ್ ಮತ್ತು ಇಂಡಿಯನ್ ಗೋಲ್ಡ್ ಡಿಲರ್ಸ್ ಎಂಬ ಹೊಸ ಕಚೇರಿಯನ್ನು ಆರಂಭಿಸುತ್ತಿರುವುದಾಗಿ ಹೇಳಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿದ್ದ. ಈ ನೂತನ ಕಚೇರಿಯ ಉದ್ಘಾಟನೆಗೆ ಗಣ್ಯರನ್ನು ಆಹ್ವಾನಿಸಿರುವುದಾಗಿ ಪತ್ರಿಕೆಯಲ್ಲಿ ಮುದ್ರಿಸಿದ್ದ.
ಉದ್ಘಾಟನೆ ವಿಆರ್ಎಲ್ ಲಾಜಿಸ್ಟಿಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಲೋಕಾಯುಕ್ತದ ಡಿವೈಎಸ್ಪಿ ಬಿ.ಎ.ದೊಡ್ಡಮನಿ ಮಾಡಲಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ, ಮುಂಬೈನ್ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ನ ಡಿಐಜಿ ಎಲ್ ಎಂ ಗವಾಡೆ, ಆಯುಕ್ತ ಜಿ.ಇ.ಇನಾಮದಾರ್ ಅವರು ಪಾಲ್ಗೊಳ್ಳಲಿದ್ದಾರೆ ಎಂದೂ ಪತ್ರಿಕೆಯಲ್ಲಿ ಆರೋಪಿಗಳು ನಮೂದಿಸಿದ್ದರು.












Click it and Unblock the Notifications