ರಾಯಚೂರಿಗೆ ಏಮ್ಸ್ ಬರಲಿದೆ ಎಂದ ಸಿಎಂ: ಹುಬ್ಬಳ್ಳಿ-ಧಾರವಾಡ ಜನರಲ್ಲಿ ಅಸಮಾಧಾನ!
ಧಾರವಾಡ, ನವೆಂಬರ್ 18: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಕೇಂದ್ರ ಸರ್ಕಾರ ನಿಶಾನೆ ತೋರಿದ ಬಳಿಕ ಧಾರವಾಡ ಜಿಲ್ಲೆಯಲ್ಲಿ 200 ಎಕರೆ ಪ್ರದೇಶ ಜಾಗ ನಿಗದಿಗೊಳಿಸಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ರಾಯಚೂರಿಗೆ ಏಮ್ಸ್ ಬರಲಿದೆ ಎಂಬ ಹೇಳಿಕೆ ಬಾರಿ ಸಂಚಲನ ಸೃಷ್ಟಿಸಿದೆ.
ಹುಬ್ಬಳ್ಳಿ-ಧಾರವಾಡದಿಂದ ಏಮ್ಸ್ ಸ್ಥಳ ಬದಲಾವಣೆ ತೆರೆಮರೆಯಲ್ಲಿ ನಡೆಯುತ್ತಿವೆ ಎಂಬ ಸಂಶಯ ಎಲ್ಲರಲ್ಲೂ ಮೂಡಿದೆ. ಇದರಿಂದ ಅವಳಿ ನಗರದ ಜನರಲ್ಲಿ ಅಸಮಾಧಾನ ಉಂಟಾಗಿದ್ದು, ಏಮ್ಸ್ಗಾಗಿ ಉಗ್ರ ಹೋರಾಟಕ್ಕೆ ಹುಬ್ಬಳ್ಳಿ ಧಾರವಾಡ ಜನರು ಸಜ್ಜಾಗುತ್ತಿದ್ದಾರೆ.
ಕೊರೊನಾದಿಂದ ಗ್ರಾ.ಪಂ ಸಿಬ್ಬಂದಿ ಸಾವು: ಪರಿಹಾರಕ್ಕಾಗಿ 1.5 ವರ್ಷದಿಂದ ಪತ್ನಿ ಅಲೆದಾಟ
ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ಪ್ರತ್ಯೇಕ ಕಲ್ಯಾಣ ರಾಜ್ಯದ ಕೂಗು ಕೇಳಿಬಂದಿತ್ತು. ಈಗಾಗಲೇ ಧಾರವಾಡದಲ್ಲಿ ಜಾಗ ನಿಗದಿ ಮಾಡಲಾಗಿದ್ದರೂ ಏಮ್ಸ್ ಸ್ಥಾಪನೆಗೆ ಏಕೆ ಮೀನಮೇಷ ಎಣಿಸಲಾಗುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ಧ ಹುಬ್ಬಳ್ಳಿ-ಧಾರವಾಡ ಜನರು ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಸಂತ ಲದ್ವಾ ಆಕ್ರೋಶ ವ್ಯಕ್ತಪಡಿಸಿದರು.
ಏಮ್ಸ್ ಸ್ಥಳಾಂತರಗೊಂಡರೆ ರಾಜಕೀಯ ಇಚ್ಛಾಶಕ್ತಿ ಕೊರತೆ
ಹುಬ್ಬಳ್ಳಿ-ಧಾರವಾಡದಲ್ಲಿ ಒಬ್ಬರು ಕೇಂದ್ರ ಸಚಿವರು, ಒಬ್ಬರು ಮಾಜಿ ಮುಖ್ಯಮಂತ್ರಿ, ಸದ್ಯ ರಾಜ್ಯದ ಮುಖ್ಯಮಂತ್ರಿಯಾಗಿರುವವರು ಸಹ ಧಾರವಾಡದ ಪಕ್ಕದ ಜಿಲ್ಲೆಯವರಾಗಿದ್ದಾರೆ. ಆದರೆ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗಾಗಿ ರಾಜಕಾರಣಿಗಳು ಒಂದಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಏಮ್ಸ್ ಹುಬ್ಬಳ್ಳಿ- ಧಾರವಾಡದಿಂದ ಎತ್ತಂಗಡಿಯಾದರೆ ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.
ಏಮ್ಸ್ಗಾಗಿ ಹುಬ್ಬಳ್ಳಿ-ಧಾರವಾಡ ಜನರ ಒತ್ತಾಯ
ಕಿಮ್ಸ್, ಡಿಮಾನ್ಸ್ ಮಂಜೂರಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆ, ಏಮ್ಸ್ಗೆ ನೆರವಾಗಲಿವೆ. ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಏಮ್ಸ್ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ನೀಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟೆ, ಹಾವೇರಿ, ಧಾರವಾಡ ಜಿಲ್ಲೆಗಳ ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ರೀತಿಯ ಚಿಕಿತ್ಸೆ ಸರ್ಕಾರದಿಂದಲೇ ದೊರೆಯುವಂತಾಗಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿಯೇ ಏಮ್ಸ್ ಸ್ಥಾಪಿಸಬೇಕು
ಈಗಾಗಲೇ ಗುರುತಿಸಿರುವ ಜಾಗದಲ್ಲಿಯೇ ಏಮ್ಸ್ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿಯೇ ಏಮ್ಸ್ ಸ್ಥಾಪಿಸಬೇಕು. ಈ ಹಿಂದೆ ಇಲ್ಲಿಯೇ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಕೊಟ್ಟಿದ್ದರು. ಅದರಂತೆ ಅವರು ನಡೆಯಬೇಕು. ಇಲ್ಲದಿದ್ದರೆ ನಮ್ಮ ಭಾಗದವರು ಮುಖ್ಯ ಮಂತ್ರಿಯಾಗಿದ್ದರೂ ಏನು ಪ್ರಯೋಜನ ಎಂದು ಉದ್ಯಮಿ ವಸಂತ ಲದ್ವಾ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿಗೆ ಏಮ್ಸ್ ಕೊಡಿಸುವಲ್ಲಿ ಯಶ್ವಸಿಯಾಗುತ್ತೇನೆ ಎಂದ ಸಿಎಂ
ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆಯಾಗಿ, ಅಕ್ಟೋಬರ್ 11ರಿಂದ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆ ಆರಂಭಗೊಂಡಿತ್ತು. ಈ ವೇಳೆ ರಾಯಚೂರು ಜನರನ್ನುದ್ದೇಶಿಸಿ ಮಾತನಾಡಿದ್ದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ವಿಚಾರಕ್ಕೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ಈ ಬಗ್ಗೆ ಪುನಃ ಮಾತನಾಡಿ, ಈ ಭಾಗಕ್ಕೆ ಏಮ್ಸ್ ಕೊಡಿಸುವಲ್ಲಿ ಯಶ್ವಸಿಯಾಗುತ್ತೇನೆ ಎಂದು ಭರವಸೆ ನೀಡಿದ್ದರು.