ಭೂಸ್ವಾಧೀನವಾಗದ ಒಂದೇ ಕಾಮಗಾರಿಗೆ ಎರೆಡೆರಡು ಬಾರಿ ಭೂಮಿಪೂಜೆ
ಹುಬ್ಬಳ್ಳಿ, ಜುಲೈ 25 : 'ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲೆಸಿದರು' ಎಂಬಂತೆ ಇಲ್ಲಿನ ಜನಪ್ರತಿನಿಧಿಗಳು ಭೂಸ್ವಾಧೀನವಾಗದ ಕಾಮಗಾರಿಯ ಭೂಮಿಪೂಜೆಗೆ ಪೈಪೋಟಿಗಿಳಿದು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.
ಇಲ್ಲಿನ ಕಿತ್ತೂರ ಚನ್ನಮ್ಮ ವೃತ್ತದಿಂದ ಗಬ್ಬೂರು ಸಂಪರ್ಕಿಸುವ ಹಳೇ ಪುಣೆ-ಬೆಂಗಳೂರು ರಸ್ತೆಯನ್ನು ಚತುಷ್ಪಥವನ್ನಾಗಿ ಮಾಡುವ ಮಹತ್ವದ ಕಾಮಗಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗಿಳಿದು ಎರಡು ಬಾರಿ ಪ್ರತ್ಯೇಕ ಭೂಮಿಪೂಜೆ ಮಾಡಿವೆ. ಆದರೆ, ಆ ಕಾಮಗಾರಿಯನ್ನು ಆರಂಭಿಸಲು ಎರಡೂ ಪಕ್ಷಗಳ ಮುಖಂಡರು ಪೈಪೋಟಿಗೆ ಇಳಿಯದಿರುವುದು ವಿಪರ್ಯಾಸ.

ಕಾಮಗಾರಿಗೆ ಭೂಮಿಪೂಜೆ ಮಾಡಲು ಪೈಪೋಟಿಗೆ ಇಳಿದವರು. ಅಲ್ಲದೆ ತಾವು ಬರುವುದರೂಳಗೆ ಭೂಮಿಪೂಜೆ ಮಾಡಿ ಮುಗಿಸಿದ್ದಾರೆ ಎಂದು ಬೊಬ್ಬಿರಿದು ಮತ್ತೊಮ್ಮೆ ಭೂಮಿಪೂಜೆ ನಡೆಸಿದವರು ಕಾಮಗಾರಿ ಆರಂಭಕ್ಕೆ ಅಗತ್ಯ ಅನುವು ಮಾಡಿಕೊಡುವಲ್ಲಿ ಆಸಕ್ತ ತೋರುತ್ತಿಲ್ಲ.
ಭೂಸ್ವಾಧೀನವೇ ಆಗಿಲ್ಲ: ನಗರದ ನ್ಯೂ ಇಂಗ್ಲೀಷ್ ಸ್ಕೂಲಿನಿಂದ ಚನ್ನಮ್ಮ ವೃತ್ತದವರೆಗೆ ಚತುಷ್ಪತಕ್ಕಾಗಿ ಕೆಲವು ಕಡೆ ಭೂಸ್ವಾಧೀನ ಮಾಡಿಕೊಳ್ಳವ ಅನಿವಾರ್ಯತೆ ಇದೆ. ಇದು ರಾಜ್ಯ ಸರ್ಕಾರದ ಜವಾಬ್ದಾರಿ.

ಈ ಕಾಮಗಾರಿಗೆ ಎರಡನೇ ಬಾರಿ ಭೂಮಿಪೂಜೆ ನೆರವೇರಿಸಿದ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ಕಾಂಗ್ರೆಸ್ನವರೇ ಆಗಿರುವುದರಿಂದ ಪ್ರಕ್ರಿಯೆಗಳು ಬೇಗ ಮುಗಿಯಬೇಕಿತ್ತು. ಆದರೆ, ಈವರೆಗೂ ಭೂಸ್ವಾಧೀನ ಪ್ರಕ್ರಿಯೆಯೇ ಆರಂಭವಾಗಿಲ್ಲ.
ಈ ಮಾರ್ಗದಲ್ಲಿ ಎಷ್ಟು ಜಾಗೆಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು? ಎಷ್ಟು ಕುಟುಂಬಗಳು ಸಂತ್ರಸ್ಥರಾಗುತ್ತವೆ? ಅವರಿಗೆ ಪರ್ಯಾಯ ವ್ಯವಸ್ಥೆ ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಎರಡನೇ ಬಾರಿ ಪೂಜೆ ನೆರವೇರಿಸಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಈ ಕಾಮಗಾರಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಇನ್ನು ಈಗಾಗಲೇ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸಿರುವ ಬಿಜೆಪಿ ನಾಯಕರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕೈತೊಳೆದುಕೊಂಡಿದ್ದಾರೆ.












Click it and Unblock the Notifications