ಹುಬ್ಬಳ್ಳಿಯಲ್ಲಿ ಗೋಣಿಚೀಲದಲ್ಲಿ ಸಾಗಿಸುತ್ತಿದ್ದ 29 ಲಕ್ಷ, ಮೂವರು ವಶ
ಹುಬ್ಬಳ್ಳಿ, ಡಿಸೆಂಬರ್ 22: 29 ಲಕ್ಷ ರುಪಾಯಿ ಸಾಗಿಸುತ್ತಿದ್ದ ಮೂವರನ್ನು ಹುಬ್ಬಳ್ಳಿ ಅಪರಾಧ ವಿಭಾಗದ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಗೋಣಿಚೀಲದಲ್ಲಿ ಹೊಸ ಎರಡು ಸಾವಿರ ರುಪಾಯಿ ನೋಟುಗಳನ್ನು ತುಂಬಿ, ಅದನ್ನು ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ರಿಜ್ವನ್, ಮುಕ್ತಿಯಾರ್ ಮತ್ತು ಶಮೀ ಅಹ್ಮದ್ ನನ್ನು ಕಮರೀಪೇಟೆ ಬಳಿ ಹಿಡಿದು, ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಮೂವರು ಹಣ ಬದಲಿಸಿದ ನಂತರ ನೂರಾನಿ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದರು. ಈ ಬಗ್ಗೆ ದೂರು ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.[ಹುಬ್ಬಳ್ಳಿ, ನಕಲಿ ಐಟಿ ಅಧಿಕಾರಿಗಳು ಸಿಕ್ಕಿ ಬಿದ್ದದ್ದು ಹೀಗೆ?]

ಈಗ ವಶಪಡಿಸಿಕೊಂಡ ಹಣ ಈ ಮೂವರಿಗೆ ಸೇರಿದ್ದೋ ಅಥವಾ ಬದಲಾವಣೆಗಾಗಿ ಯಾರಾದರೂ ಕಳಿಸಿದ್ದರಾ ಎಂಬುದು ಇನ್ನೂ ಖಚಿತವಾಗಬೇಕಿದೆ. ಈ ಮೂವರು ಸದ್ಯ ಪೊಲೀಸ್ ವಶದಲ್ಲಿದ್ದಾರೆ. ನೂರಾನಿ ಮಾರುಕಟ್ಟೆಯಲ್ಲಿ ಹಣ ಬದಲಾವಣೆ ಆಗುವ ಬಗ್ಗೆ ಮಾಹಿತಿ ನೀಡಿರುವುದರಿಂದ ಪೊಲೀಸರು ಸದ್ಯದಲ್ಲೇ ಅಲ್ಲಿಗೆ ಭೇಟಿ ನೀಡಿ, ವಿಚಾರಣೆ ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿ ವೇಳೆ ಲಕ್ಷಾಂತರ ರುಪಾಯಿ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications