Heavy Rains ಹುಬ್ಬಳ್ಳಿ - ಧಾರವಾಡದಲ್ಲಿ ಧಾರಾಕಾರ ಮಳೆ: ಈ ರಸ್ತೆಗಳಲ್ಲಿ ಕೆರೆಯಂತೆ ನಿಂತ ನೀರು
ಹುಬ್ಬಳ್ಳಿ - ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರವಾಡದಲ್ಲಿ ಭಾನುವಾರ ಮಿಂಚು - ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು. ಇಲ್ಲಿನ ಎನ್ಟಿಟಿಎಫ್ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಮೊಣಕಾಲಿನ ವರೆಗೆ ನೀರು ತುಂಬಿ ಕೊಂಡಿತ್ತು.
ಕೇಶ್ವಾಪುರದ ಸುತ್ತಮುತ್ತ ಸಹ ಮಳೆ ಅವಾಂತರ ಸೃಷ್ಟಿಯಾಗಿದೆ. ಧಾರವಾಡದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ ಹಾಗೂ ಕಾಳು ಕಡಿಗೆ ಹಾಳಾಗಿವೆ. ಕಳೆದ ಒಂದು ವಾರದಿಂದ ಹುಬ್ಬಳ್ಳಿ - ಧಾರವಾಡದಲ್ಲಿ ಮಳೆ ತುಸು ಬಿಡುವು ನೀಡಿತ್ತು. ಶನಿವಾರದಿಂದ ಚುರುಕು ಪಡೆದುಕೊಂಡಿದ್ದು, ಅವಳಿ ಜಿಲ್ಲೆ ಹುಬ್ಬಳ್ಳಿ - ಧಾರವಾಡದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಚಿಗರಿ ಬಸ್ ಮಾರ್ಗದಲ್ಲಿ ನಿಂತ ನೀರು
ಹುಬ್ಬಳ್ಳಿ - ಧಾರವಾಡದ ಚಿಗರಿ ಬಸ್ ನಿಲ್ಲುವ ಮಾರ್ಗದಲ್ಲಿ ಮಳೆ ನೀರು ನಿಂತಿದ್ದು ಜನ ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಕೊಚ್ಚೆ, ಗಲೀಜು ನೀರು ಅಂಗಡಿಗಳಿಗೂ ನುಗ್ಗಿದೆ. ರಸ್ತೆ ಬದಿಯಲ್ಲಿ ಓಡಾಡಲಾಗದೆ. ಪಾದಚಾರಿಗಳು ಸಾಹಸವನ್ನೇ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಭಾರೀ ಮಳೆ ಬಂದಾಗೆಲ್ಲ ಚಿಗರಿ ಬಸ್ ಸಾಗುವ ಮಾರ್ಗದಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗುತ್ತದೆ. ಆದರೆ, ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ - ಧಾರವಾಡ ಪಾಲಿಕೆ ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನ ದೂರಿದ್ದಾರೆ.
ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದ ನಗರದ ಬಹುತೇಕ ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ನಗರದ ಒಳಭಾಗದ ರಸ್ತೆಗಳಲ್ಲಿ ಡಾಂಬರೀಕರಣ ಸಮರ್ಪಕವಾಗಿ ಆಗಿಲ್ಲ. ಒಳ ಭಾಗದ ಕಚ್ಚಾ ರಸ್ತೆಗಳು ಕೆಸರು ಗದ್ದೆಯಂತೆ ಬದಲಾಗಿದ್ದು, ವಾಹನ ಸವಾರರು ಕೆಳೆಗೆ ಬೀಳುತ್ತಿದ್ದಾರೆ. ಇಲ್ಲಿನ ಎನ್ಟಿಟಿಎಫ್ ರಸ್ತೆಯ ತುಂಬಾ ಮಳೆ ನೀರು ನಿಂತಿದೆ. ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರು ಮಳೆ ನೀರಿನಲ್ಲಿ ಸಾಗಲಾಗದೆ ಪರದಾಡಿದ್ದಾರೆ. ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ಹಲವು ರಸ್ತೆಗಳಲ್ಲಿ ನೀರು ನಿಂತಿದೆ. ಗುಡುಗು ಸಹಿತ ಸುಮಾರ ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.
ಸಿಡಿಲು ಬಡಿದು ರೈತ ಸಾವು
ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ - ಧಾರವಾಡದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಭಾನುವಾರ ಸುರಿದ ಧಾರಾಕಾರ ಮಳೆ ವೇಳೆ ಸಿಡಿಲು ಬಡಿದು ರೈತರೊಬ್ಬರು ಮೃತಪಪಟ್ಟಿದ್ದಾರೆ. ಧಾರವಾಡದ ಹನುಮನಹಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎನ್ನುವವರು ಸಿಡಿಲಾಘಾತಕ್ಕೆ ಬಲಿಯಾಗಿದ್ದಾರೆ.
ರೈತ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ. ನಂತರ ಭೀಮನಗೌಡ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications