ನವಲಗುಂದದಲ್ಲಿ ರೈತರು - ಜೆಡಿಎಸ್ ಮುಖಂಡರ ಮಧ್ಯೆ ಜಟಾಪಟಿ
ಹುಬ್ಬಳ್ಳಿ, ಜುಲೈ 21: ನವಲಗುಂದದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿರುವ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಪಕ್ಷಾತೀತ ರೈತ ಹೋರಾಟ ಸಮಿತಿ ರಾಜಕಾರಣಿಗಳಿಗೆ ಅಡ್ಡಿಪಡಿಸಿದ ಘಟನೆ ಇಂದು ನಡೆಯಿತು.
ಪಕ್ಷಾತೀತ ರೈತ ಹೋರಾಟ ಸಮಿತಿಯ ನೂರಾರು ರೈತರು ವೀರಗಲ್ಲಿನ ಸುತ್ತ ರಕ್ಷಣಾ ಕವಚದಂತೆ ನಿಂತು ರಾಜಕಾರಣಿಗಳು ಹತ್ತಿರವೂ ಸುಳಿಯದಂತೆ ನೋಡಿಕೊಂಡರು.
ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಹುತಾತ್ಮ ದಿನಾಚರಣೆಗೂ ಮುನ್ನ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಬಂದ ಜೆಡಿಎಸ್ ಮುಖಂಡರೊಂದಿಗೆ ವಾಗ್ವಾದ ನಡೆಸಿದ ಪಕ್ಷಾತೀತ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಯಡಿಯೂರಪ್ಪ ಕಚಡಾ ಮುಖ್ಯಮಂತ್ರಿ: ಮಧು ಬಂಗಾರಪ್ಪ ಕಿಡಿ
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಮಧು ಬಂಗಾರಪ್ಪ, ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಹಾಗೂ ಸಮಿತಿ ಸದಸ್ಯರ ಮಧ್ಯೆ ಜಟಾಪಟಿ ನಡೆಯಿತು. ಅಲ್ಲದೆ ವೀರಗಲ್ಲಿನ ಸಮೀಪ ಪರಸ್ಪರ ನೂಕುನುಗ್ಗಲು ನಡೆಯಿತು.
ಆದರೆ, ಸಮಿತಿ ಸದಸ್ಯರು ಜೆಡಿಎಸ್ ಮುಖಂಡರಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡಲಿಲ್ಲ. ಕೊನೆಗೆ ಪೊಲೀಸರ ಮಧ್ಯೆಸ್ಥಿಕೆಯಿಂದ ಮಾಲೆ ಹಿಡಿದುಕೊಂಡು ಬಂದಿದ್ದ ಜೆಡಿಎಸ್ ಮುಖಂಡರು ಹಾಗೆ ವಾಪಾಸ್ ಹೋದರು.
ಬಿಎಸ್ವೈ ಕಚಡಾ ಮುಖ್ಯಮಂತ್ರಿ - ಮಧು ಬಂಗಾರಪ್ಪ
"ಯಡಿಯೂರಪ್ಪ ಒಬ್ಬ ಕಚಡಾ ಮುಖ್ಯಮಂತ್ರಿಯಾಗಿದ್ದರು. ಅವರ ರಕ್ತ ಸರಿಯಿಲ್ಲ; ಅವರದ್ದು ರೈತ ವಿರೋಧಿ ರಕ್ತ," ಎಂದು ಜೆಡಿಎಸ್ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಮಧು ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಕ್ಷದ ವತಿಯಿಂದ ನವಲಗುಂದ ಪಟ್ಟಣದಲ್ಲಿ ಆಯೋಜಿಸಿದ್ದ ರೈತ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಧು ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣದುದ್ದಕ್ಕೂ ಕಿಡಿಕಾರಿದರು.
"ಕಣ್ಣೀರು ಸುರಿಸಿ ಬಂದಿರುವ ನಿಮಗೆ ರೈತರ ಕಣ್ಣೀರು ಕಾಣಿಸುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಬೆಂಕಿ ಹಚ್ಚುವ ಮಾತುಗಳನ್ನಾಡುವ ಬಿಎಸ್ವೈ ಧೈರ್ಯವಿದ್ದರೆ ರೈತರ ಎದುರು ಬಂದು ನಿಲ್ಲಲಿ," ಎಂದು ಮಧು ಬಂಗಾರಪ್ಪ ಸವಾಲೆಸೆದರು.
"ಸಾಲಮನ್ನಾ ಕುರಿತಂತೆ ಸಿಎಂ ಸಿದ್ದರಾಮಯ್ಯ ಮೂಗು ಹಿಡಿಯುವ ಬದಲು ಪ್ರಧಾನಿ ನರೇಂದ್ರ ಮೋದಿ ಮೂಗು ಹಿಡಿದು ರೈತರ ಸಾಲಮನ್ನಾ ಮಾಡಿಸಲಿ," ಎಂದು ಮಧು ಬಂಗಾರಪ್ಪ ಯಡಿಯೂರಪ್ಪನವರಿಗೆ ಚಾಲೆಂಜ್ ಮಾಡಿದರು.