ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಹುಬ್ಬಳ್ಳಿಯಲ್ಲಿ ಸ್ವಾಗತ
ಹುಬ್ಬಳ್ಳಿ, ಡಿಸೆಂಬರ್ 12: ಗೋವಾದಿಂದ ಖಾಸಗಿ ವಿಮಾನದ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಧಾರವಾಡ ಜಿಲ್ಲಾಡಾಳಿತದಿಂದ ಸ್ವಾಗತ ಕೋರಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಕ್ಕೆ ಬೀಳ್ಕೊಡಲಾಯಿತು.
ಇಂದಿನಿಂದ ಡಿ.24 ರವರೆಗೆ ಮಂಡಗೋಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಲೈಲಾಮಾ ತಮ್ಮ 12 ಜನ ಧಾರ್ಮಿಕ ಅನುಚರರೊಂದಿಗೆ ಭಾಗವಹಿಸಲಿದ್ದಾರೆ.
ಭಾರತದಿಂದಲೇ ನನ್ನ ಉತ್ತರಾಧಿಕಾರಿ ಎಂದು ಚೀನಾಕ್ಕೆ ಟಾಂಗ್ ಕೊಟ್ಟ ದಲೈಲಾಮ
ಮುಂಡಗೋಡ ತಾಲೂಕಿನ ಟಿಬೇಟಿಯನ್ ಬಡಾವಣೆಯಲ್ಲಿ ಅವರು ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಎರಡು ವರ್ಷದ ಹಿಂದೆ ದಲೈಲಾಮಾ ಇಲ್ಲಿಗೆ ಬಂದಿದ್ದರು. ಈಗ ಮತ್ತೆ ಭೇಟಿ ನೀಡುತ್ತಿರುವ ಕಾರಣ ಟಿಬೇಟಿಯನ್ನರ ಸಂತೋಷ ಇಮ್ಮಡಿಗೊಂಡಿದೆ. ವ್ಯಾಪಾರ ನಿಮಿತ್ತ ದೇಶ, ವಿದೇಶದಲ್ಲಿರುವ ಟಿಬೇಟಿಯನ್ನರು ಪ್ರತಿ ವರ್ಷ ಜನವರಿ 15ರ ನಂತರ ಮರಳಿ ಬರುತ್ತಿದ್ದರು. ಆದರೆ ಈಗ ತಮ್ಮ ಧರ್ಮ ಗುರುವಿನ ದರ್ಶನಕ್ಕಾಗಿ ಹಿಮಾಚಲ ಪ್ರದೇಶ, ಲಡಾಕ್, ಬೈಲಕುಪ್ಪೆ ಭಾಗಗಳಿಂದ ಇಲ್ಲಿಗೆ ಬರಲಿದ್ದಾರೆ.
ಹುಬ್ಬಳ್ಳಿಯಲ್ಲಿ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ದಲೈಲಾಮಾ ಅವರನ್ನು ಸ್ವಾಗತ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್, ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ಡಿಸಿಪಿ ನಾಗೇಶ್.ಡಿ.ಎಲ್, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.