ಚುನಾವಣೆಗೆ ಸ್ಪರ್ಧಿಸುವುದು ಖಚಿತ : ಗೋಪಾಲ ಕುಲಕರ್ಣಿ
ಹುಬ್ಬಳ್ಳಿ, ಏಪ್ರಿಲ್ 15 : 'ರಾಷ್ಟ್ರೀಯ ಪಕ್ಷಗಳು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜನ ಸಾಮಾನ್ಯರಿಗೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿ ನೀತಿಸಂಹಿತಿ ಉಲ್ಲಂಘನೆ ಮಾಡುತ್ತಿದ್ದಾರೆ' ಎಂದು ಗೋಪಾಲ ಕುಲಕರ್ಣಿ ಆರೋಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ಅವರು, 'ಜನರು ಮುಂಬರುವ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು' ಸ್ಪಷ್ಟಪಡಿಸಿದರು.
'ಚುನಾವಣೆಯಲ್ಲಿ ಸ್ಪರ್ಧಿಸಲು ಪೇಜಾವರ ಶ್ರೀಗಳು ಸಮ್ಮತಿ ಸೂಚಿಸದೆ ಇದ್ದ ಪಕ್ಷದಲ್ಲಿ ಶಿಕ್ಷಣ ಸಂಸ್ಥೆಗೆ ರಾಜೀನಾಮೆ ನೀಡಿದ್ದೇನೆ ವಿನಃ ಚುನಾವಣೆಯಿಂದ ಹಿಂದೇಟು ಹಾಕಿಲ್ಲ. ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ಮತ್ತು ಹೇಳಿಕೆಗಳಿಗೆ ಕಿವಿಗೊಡಬೇಡಿ. ಈ ಭಾರಿ ಸ್ಪರ್ಧಿಸುವುದು ಶತಸಿದ್ಧ' ಎಂದರು.

'ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪೇಜಾವರ ಶ್ರೀಗಳ ಒತ್ತಾಯದ ಮೇರೆಗೆ ನಾಮಪತ್ರವನ್ನು ಹಿಂಪಡೆದಿದ್ದೇ ಹೊರತು ಬೇರೆ ಯಾವುದೇ ಕಾರಣದಿಂದಲ್ಲ. ನಗರದ ಜನತೆಯೂ ರಾಜೀನಾಮೆಯ ಕುರಿತಾಗಿ ತಪ್ಪಾಗಿ ಅರ್ಥೈಸಿಕೊಂಡು ದೂರವಾಣಿ ಕರೆ ಮಾಡುತ್ತಿದ್ದಾರೆ' ಎಂದರು.
'ಯಾರು ಒತ್ತಡ ಹಾಕಿದರೂ, ಯಾವುದೇ ಪರಿಸ್ಥಿತಿ ನಿರ್ಮಾಣವಾದರೂ ಕೂಡ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಅಲ್ಲದೇ ನನ್ನ ರಾಜೀನಾಮೆಯನ್ನು ಸ್ವೀಕರಿಸಿ ಸಹಮತ ಸೂಚಿಸಿ ಪೇಜಾವರ ಶ್ರಿಗಳು ಆಶೀರ್ವಾದ ಮಾಡಿದ್ದಾರೆ' ಎಂದು ಹೇಳಿದರು.












Click it and Unblock the Notifications