ನಾನು 24 ಕ್ಯಾರೆಟ್ ಗೋಲ್ಡ್: ಸಚಿವ ಜಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ, ಅಕ್ಟೋಬರ್ 30: ನಾನು ಒಂದು ಸಮುದಾಯದ ಪರವಾಗಿ ರಾಜಕಾರಣ ಮಾಡಲ್ಲ. ನನಗೆ ಎಲ್ಲರೂ ಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ರೀತಿ ಒಲೈಕೆ ರಾಜಕಾರಣ ಮಾಡಲ್ಲ. ಮೊದಲು ನಾನೊಬ್ಬ ಭಾರತೀಯ. ನಂತರ ರಾಜಕಾರಣಿ. ನನಗೆ ಎಲ್ಲಾ ಜನಾಂಗದವರು ಬೇಕು. ಯಾವುದೇ ಕಾರಣಕ್ಕೂ ಜಾತಿ ರಾಜಕಾರಣ ಮಾಡುತ್ತಿಲ್ಲ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಬಂದ ಮೇಲೆ ಜಾತಿ ರಾಜಕಾರಣ ಅದನ್ನೆಲ್ಲಾ ಬಿಡಬೇಕು. ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಬೇಕು. ನಾನು ಶುದ್ಧ ಹಿಂದೂಸ್ತಾನಿ ಇಂಡಿಯನ್, 24 ಕ್ಯಾರೆಟ್ ಗೋಲ್ಡ್ ಎಂದು ಹೇಳಿದರು.

ಸಚಿವ ಜಮೀರ್ ಅಹ್ಮದ್ ಖಾನ್ ಕೋಮು ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎನ್ನುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೋಶಿ ಅವರು ಹಿಂದೂ ಮುಸ್ಲಿಂ ಬಿಟ್ಟರೆ ಏನು ಮಾತನಾಡಲ್ಲ. ಮುಸಲ್ಮಾನರು ಮತ ನೀಡಲ್ಲ ಅಂತ ಬಿಜೆಪಿಯವರು ಅವರನ್ನು ದ್ವೇಷ ಮಾಡುತ್ತಿದ್ದಾರೆ. ಒಂದು ವೇಳೆ ಮತ ಕೊಟ್ಟರೆ ಮಾತ್ರ ಮುಸಲ್ಮಾನರು ಒಳ್ಳೆಯವರು. ನಾನು ಯಾವತ್ತು ಕೋಮು ದ್ವೇಷ ಹರಡಿಸುವಂತಹ ಕೆಲಸ ಮಾಡಿಲ್ಲ ಎಂದು ಹೇಳಿದರು.

ವಿಜಯಪುರದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರು ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ನಾನು ವಕ್ಫ ಸಚಿವನಾಗಿ ಹೇಳುತ್ತೇನೆ ಯಾವ ರೈತರಿಗೂ ತೊಂದರೆ ಆಗಲ್ಲ. ಮಹಾರಾಷ್ಟ್ರ ಇತರೆಡೆ ಚುನಾವಣೆ ಇರುವುದಕ್ಕಾಗಿ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications