ಜ.25ರ ಕರ್ನಾಟಕ ಬಂದ್ ವಾಪಸ್ ಪಡೆಯಲು ಒತ್ತಾಯ
ಹುಬ್ಬಳ್ಳಿ, ಜನವರಿ 21 : ಜನವರಿ 25ರಂದು ಕರೆ ನೀಡಿರುವ ಕರ್ನಾಟಕ ಬಂದ್ ವಾಪಸ್ ಪಡೆಯಿರಿ ಎಂದು ರೈತರು ವಾಟಾಳ್ ನಾಗರಾಜ್ ಅವರಿಗೆ ತಾಕೀತು ಮಾಡಿದ್ದಾರೆ. ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಸ್ಪಷ್ಟಪಡಿಸಿದೆ.
ಭಾನುವಾರ ಬಂದ್ ಕುರಿತು ಹುಬ್ಬಳ್ಳಿಯಲ್ಲಿ ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ರೈತ ಹೋರಾಟಗಾರರು, ಜ.25ರಂದು (ಗುರುವಾರ) ಕರೆ ನೀಡಿರುವ ಬಂದ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಪದೇ-ಪದೇ ಬಂದ್ ಮಾಡುವುದರಿಂದ ಜನರಿಗೆ ತೊಂದರೆ ಆಗುತ್ತದೆ. ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ?. ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ ಎಂದರು.

ರೈತ ಹೋರಾಟಗಾರರು ವಾಟಾಳ್ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ವಾಟಾಳ್ ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆದರು. ಮಹದಾಯಿ ವಿವಾದ ಬಗೆಹರಿಸಬೇಕು ಎಂದು ಒತ್ತಾಯಿಸಿ ಜನವರಿ 25ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ.
ಪ್ರಧಾನ ಮಂತ್ರಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಬಂದ್ ಮಾಡಿ, ಬೇರೆ ದಿನ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದು ಹೋರಾಟಗಾರರು ಹೇಳಿದರು. 'ಬಂದ್ನಿಂದೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ' ಎಂದು ವಾಟಾಳ್ ಹೇಳಿದರು.
ಜನವರಿ 25ರ ಗುರುವಾರ ಕರ್ನಾಟಕ ಬಂದ್ ನಡೆಯಲಿದೆಯೇ?, ಇಲ್ಲವೇ? ಎಂಬುದು ಇನ್ನೂ ಖಚಿತವಾಗಿಲ್ಲ.












Click it and Unblock the Notifications