NWKRTC: ಚಾಲಕ ಸಿಬ್ಬಂದಿಗಳಿಗೆ ಸಂಸ್ಥೆಯ ಖಡಕ್ ಎಚ್ಚರಿಕೆ
ಹುಬ್ಬಳ್ಳಿ, ಮೇ 25: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಾಲಕ ಚಾಲಕ ಕೊಡೆಯನ್ನು ಹಿಡಿದುಕೊಂಡು ವಾಹನ ಚಾಲನೆ ಮಾಡುವ ವಿಡಿಯೋ ಶುಕ್ರವಾರ ವೈರಲ್ ಆಗಿತ್ತು. ಸಿಬ್ಬಂದಿಗಳನ್ನು ಅಮಾನತು ಮಾಡಿ, ಸಂಸ್ಥೆ ಸ್ಪಷ್ಟೀಕರಣವನ್ನು ನೀಡಿತ್ತು.
ಈಗ ಪ್ರಕಟಣೆಯೊಂದರಲ್ಲಿ ಪ್ರಿಯಾಂಗ ಎಂ., ವ್ಯವಸ್ಥಾಪಕ ನಿರ್ದೇಶಕರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗಳ ಗಮನಕ್ಕೆ ಎಂದು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

ಪ್ರಕಟಣೆಯ ವಿವರ: ವಾಕರಸಾ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ತಮ್ಮ ಶ್ರಮದಿಂದ ಉತ್ತಮ ಸಾರಿಗೆ ಸೌಲಭ್ಯವನ್ನು ನೀಡುತ್ತಿದೆ. ಸಂಸ್ಥೆಯ ಸಮಸ್ತ ನೌಕರರು ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಲಾಭದತ್ತ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುತ್ತದೆ.
ಆದರೆ ಕೆಲವು ಸಿಬ್ಬಂದಿಗಳು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವ ಪ್ರವೃತ್ತಿವುಳ್ಳವರಾಗಿದ್ದು, ಗೈರು ಹಾಜರಿಯಿಂದ ಸಂಸ್ಥೆಯ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವುದಲ್ಲದೇ ಸಾರಿಗೆ ಆದಾಯದಲ್ಲಿ ಕೊರತೆಯುಂಟಾಗುವುದರ ಜೊತೆಗೆ ಸಂಸ್ಥೆಯ ಸಾರಿಗೆ ಸೇವೆಯನ್ನೆ ಅವಲಂಬಿಸಿರುವ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.
ಈ ರೀತಿಯಲ್ಲಿ ಅನಧಿಕೃತ ಗೈರು ಹಾಜರಾಗುವುದರಿಂದ ಉದ್ಯೋಗಿಗೂ ಸಹ ವೈಯಕ್ತಿಕವಾಗಿ ಸೇವಾ ನಿವೃತ್ತಿ ಸಂದರ್ಭದಲ್ಲಿ ಉಪದಾನ ಲೆಕ್ಕಾಚಾರದಲ್ಲಿ ಕೂಡಾ ಆರ್ಥಿಕ ನಷ್ಟವುಂಟಾಗುತ್ತದೆ ಹಾಗೂ ಕುಟುಂಬದವರಿಗೂ ಸಂಸಾರ ನಿಭಾಯಿಸುವುದು ಬಹಳ ಕಷ್ಟಕರವಾಗುತ್ತದೆ. ನಿಮ್ಮ ಮಕ್ಕಳಗೆ ಗುಣಮಟ್ಟದ ಉತ್ತಮ ಶಿಕ್ಷಣ ನೀಡಲು ಆಗುವುದಿಲ್ಲ.
ಸಂಸ್ಥೆಯು ನೌಕರನ ಏಳಗೆಯ ಜೊತೆಗೆ ಅವರ ಕುಟುಂಬದ ಏಳಗೆಯನ್ನು ಬಯಸುತ್ತದೆ. ಶಿಸ್ತಿನ ಕ್ರಮದಿಂದ ನೌಕರರು ಉದ್ಯೋಗ ಕಳೆದುಕೊಂಡು ಅವರು ಅವರ ಕುಟುಂಬ ವರ್ಗದವರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಳ್ಳವುದನ್ನು ಸಂಸ್ಥೆಯು ಬಯಸುವುದಿಲ್ಲ.
ಆದ್ದರಿಂದ ತಾವು ಅನಧೀಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗದೇ ತಮ್ಮ ಸಹೊದ್ಯೋಗಿಗಳಗೆ ಕೂಡ ಈ ಕುರಿತು ತಿಳುವಳಿಕೆ ನೀಡುವುದು. ಈಗಾಗಲೇ ವಿಭಾಗಗಳಿಂದ ಪದೇ ಪದೇ ಗೈರು ಹಾಜರಾರಿ ಪ್ರವೃತ್ತಿವುಳ್ಳ ನೌಕರರ ಪಟ್ಟ ಪಡೆಯಲಾಗಿದ್ದು, ಈ ನೌಕರರು ಸರಿಯಾಗಿ ಕರ್ತವ್ಯವನ್ನು ನಿರ್ವಹಿಸದೇ ಅನಧಿಕೃತವಾಗಿ ಗೈರು ಹಾಜರಿ ಆಗುವುದನ್ನು ಮುಂದುವರೆಸಿದಲ್ಲಿ ಅವರ ಮೇಲೆ ಕಠಿಣ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗುವುದಲ್ಲದೆ ಅವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲು ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಮನವರಿಕೆ ಮಾಡಿಕೊಂಡು ಸಹಕಾರ ಮತ್ತು ಸಮರ್ಪಣಾ ಮನೋಭಾವದ ಕಾರ್ಯನಿರ್ವಹಣೆಯಿಂದ ಸಂಸ್ಥೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೀರಿ ಎಂದು ಆಶಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಸಲಾಗಿದೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷ ಉತ್ತಮ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಮಿತವ್ಯಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶದಿಂದ : 01-11-1997 ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸ್ಥಾಪನೆಗೊಂಡಿತು. ಸಂಸ್ಥೆಯ ವ್ಯಾಪ್ತಿಗೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳು ಸೇರುತ್ತವೆ.
ಕೇಂದ್ರ ಕಛೇರಿಯು ಹುಬ್ಬಳ್ಳಿಯಲ್ಲಿದ್ದು, ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿರಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ನಗರಸಾರಿಗೆ ವಿಭಾಗ ಹೀಗೆ ಒಟ್ಟು 9 ವಿಭಾಗೀಯ ಕಛೇರಿಗಳನ್ನು, 55 ಘಟಕಗಳನ್ನು, ಹುಬ್ಬಳ್ಳಿಯಲ್ಲಿ ಒಂದು ಪ್ರಾದೇಶಿಕ ಕಾರ್ಯಾಗಾರ ಮತ್ತು ಒಂದು ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಿದೆ.












Click it and Unblock the Notifications