ಕೆಣಕಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ: ಜಗದೀಶ್ ಶೆಟ್ಟರ್ ವಾರ್ನ್, ವಿಡಿಯೋ ವೈರಲ್
ಹುಬ್ಬಳ್ಳಿ, ಡಿಸೆಂಬರ್, 18: ನಾನು ಯಾರ ಉಸಾಬರಿಗೂ ಹೋಗುವುದಿಲ್ಲ. ನನ್ನ ಬಗ್ಗೆ ಯಾರಾದರೂ ಕೆಣಕಿದರೆ ಸುಮ್ಮನೆ ಬಿಡುವದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವಾರ್ನಿಂಗ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬದ ನಿಮಿತ್ತ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಗದೀಶ್ ತಮ್ಮ ವಿರೋಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಶೆಟ್ಟರ್ ಹೇಳಿಕೆಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜಗದೀಶ್ ಶೆಟ್ಟರ್ಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎಂದು ಗುಸುಗಸು ಮಾತುಗಳು ಕೇಳಿಬರುತ್ತಿದ್ದವು. ಇದರ ಮಧ್ಯೆಯೇ ಶೆಟ್ಟರ್ ಗುಡುಗಿದ್ದು ಯಾರ ವಿರುದ್ಧ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ನನ್ನ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ
ಜಗದೀಶ್ ಶೆಟ್ಟರ್ ಸರಳ ಸಜ್ಜನ ರಾಜಕಾರಣಿ ಆಗಿದ್ದಾರೆ. ತಾನು ಆಯಿತು ತನ್ನ ಕೆಲಸ ಅಷ್ಟೇ ಎನ್ನುವ ಹಾಗೆ ಇದ್ದರು. ಆದರೆ ಇದೀಗ ನಾನು ಯಾರ ವಿಚಾರಕ್ಕೂ ಹೋಗುವುದಿಲ್ಲ. ನನ್ನ ವಿಚಾರಕ್ಕೆ ಯಾರೇ ಬಂದರೂ ಸುಮ್ಮನೆ ಬಿಡುವುದಿಲ್ಲ ಹೇಳಿಕೆ ನೀಡಿರುವುದು ಭಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಈಗಿರುವಾಗ ಶೆಟ್ಟರ್ ಹೇಳಿಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ತುಂಬಿದ ಸಭೆಯಲ್ಲಿ ನನ್ನ ವಿಚಾರಕ್ಕೆ ಯಾರೇ ಬಂದರೂ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದು ಯಾರ ವಿರುದ್ದ ಎನ್ನುವ ಚರ್ಚೆಗಳು ಶುರುವಾಗಿವೆ.

ಡಿ.ಕೆ. ಶಿವಕುಮಾರ್ಗೆ ಪ್ರಬುದ್ಧತೆ ಇಲ್ಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಬುದ್ದತೆ ಇಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಬ್ಲಾಸ್ಟ್ಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರು ಬಹಳ ಹಗುರವಾಗಿ ಪರಿಗಣಿಸುತ್ತಾರೆ. ಅವರ ಕಾಂಗ್ರೆಸ್ನ ನೀತಿ ಅಲ್ಪ ಸಂಖ್ಯಾತರ ಮತವನ್ನು ಓಲೈಸುವುದು ಅಷ್ಟೇ ಇದೇಯೋ? ಅಥವಾ ದೇಶದ ಹಿತವನ್ನು ನೋಡುತ್ತಾರೆಯೋ? ಎಂಬುದು ಸದ್ಯದ ಪ್ರಶ್ನೆಯಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ನವರು ದೇಶವನ್ನು ಹಾಳು ಮಾಡಿದ್ದಾರೆ
ಕಾಂಗ್ರೆಸ್ನವರು ವೋಟ್ಬ್ಯಾಂಕ್ ರಾಜಕಾರಣ ಮಾಡಿಕೊಂಡು ದೇಶವನ್ನು ಹಾಳು ಮಾಡಿದ್ದಾರೆ. ಅದೇ ಪದ್ದತಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಹೋಗುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಬಹಳ ಹಗುರವಾಗಿ ಮಾತನಾಡುತ್ತಾರೆ ಅಂದರೇ, ಅವರು ನಮ್ಮ ದೇಶವನ್ನು ಕೂಡ ಬಹಳ ಹಗುರವಾಗಿ ತಗೆದುಕೊಂಡಿದ್ದಾರೆ ಅನ್ನುವುದು ಗೊತ್ತಾಗುತ್ತಿದೆ. ಇಷ್ಟು ದಿನ ಬಿಟ್ಟು ಇವತ್ತು ಯಾಕೆ ಕುಕ್ಕರ್ ಬಾಂಬ್ ಬ್ಲಾಸ್ಟ್ಗೆ ಸಂಬಂಧಿಸಿದಂತೆ ಹೇಳಿಕೆ ಕೊಟ್ಟರು? ಎಂದು ಪ್ರಶ್ನಿಸಿದರು. ಅಂದು ನಾಲ್ಕು ಜನ ಮರಣ ಹೊಂದಿದ್ದರೆ ಅದು ಗಂಭೀರವಾಗಿ ಪರಿಗಣನೆ ಮಾಡುತ್ತಿದ್ದರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ
ಕಾಂಗ್ರೆಸ್ ಇದ್ದಾಗ ದೇಶ ಮುನ್ನಡೆಯಲ್ಲಿ ಇದ್ದಿಲ್ಲ. ಆದರೆ ಮಾಜಿ ಪ್ರಧಾನಮಂತ್ರಿ ದಿ. ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಪ್ರಗತಿ ಹೊಂದುತ್ತಿದೆ. ಕಾಂಗ್ರೆಸ್ನವರು ರಾಜಕಾರಣ ಬಿಟ್ಟು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹರಿಹಾಯ್ದರು.












Click it and Unblock the Notifications