ಬದುಕಿ ಅಚ್ಚರಿ ಹುಟ್ಟಿಸಿದ್ದ ಹುಬ್ಬಳ್ಳಿಯ ಹುಡುಗ ಸತ್ತೇ ಹೋದ!
ಸಾಯುವ ಹಂತದಲ್ಲಿದ್ದ ಬಾಲಕನೊಬ್ಬ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಎದ್ದು ಕುಳಿತು ಪುನಃ ಆಸ್ಪತ್ರೆ ಸೇರಿದ್ದ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಕುಮಾರ್ ಮರಡಿ ಮೃತಪಟ್ಟಿದ್ದಾನೆ
ಹುಬ್ಬಳ್ಳಿ, ಮಾರ್ಚ್ 7: ಈ ಘಟನೆ ಹದಿನೈದು ದಿನ ಹಿಂದೆ ನಡೆದಿದ್ದು. ಅದನ್ನು ಹೇಳಿದರೆ ಇಂದಿನ ಸನ್ನಿವೇಶ ಬೇಗ ಅರ್ಥವಾಗುತ್ತೆ. ಧಾರವಾಡದ ಮನಗುಂಡಿ ಗ್ರಾಮದ ಕುಮಾರ್ ಮರಡಿ ಇನ್ನೇನು ಸತ್ತೇ ಹೋದ ಅಂದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆದೊಯ್ಯುತ್ತಿದ್ದರು. ದಾರಿ ಮಧ್ಯೆ ದಿಢೀರ್ ಎಚ್ಚೆತ್ತ ಅವನನ್ನು ಮರಳಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆಗೇನೋ ಸಾವಿನಿಂದ ಗೆದ್ದವನು ಇದೀಗ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾನೆ. ಗಾರೆ ಕೆಲಸ ಮಾಡುವಾಗ ಕುಮಾರ್ ಗೆ ಬೀದಿ ನಾಯಿ ಕಚ್ಚಿತ್ತು. ಅದು ನಂಜಾಗಿ, ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಆತ ಬದುಕಲಾರ. ಆಸ್ಪತ್ರೆಯಲ್ಲೇ ಇದ್ದರೆ ಮರಣೋತ್ತರ ಪರೀಕ್ಷೆ ಮಾಡಿಸಬೇಕಾಗುತ್ತದೆ ಎಂದು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಕುಟುಂಬದವರು ನಿರ್ಧರಿಸಿದರು.[ಸತ್ತವನು ಎದ್ದುಕೂತಿದ್ದಲ್ಲ! ಸಾಯುವ ಮುನ್ನವೇ ಸ್ಮಶಾನಕ್ಕೆ ಹೊರಟಿದ್ದ!]
ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಹಳ್ಳ-ಗುಂಡಿ ಇದ್ದ ರಸ್ತೆಯಲ್ಲಿ ವಾಹನ ಕುಲುಕಾಟಕ್ಕೆ ಕುಮಾರ್ ಎದ್ದು ಕುಳಿತಿದ್ದ. ಎದ್ದವನೇ ವಾಂತಿ ಮಾಡಿಕೊಂಡು, ದೀರ್ಘ ಉಸಿರಾಟ ಕೂಡ ಆರಂಭಿಸಿದ್ದ. ಹೀಗೆ ಚೇತರಿಕೆ ಕಂಡ ಕೂಡಲೇ ಧಾರವಾಡ ನಗರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ, ಆ ನಂತರ ಗೋಕುಲ ರಸ್ತೆಯ ಸುಚರಾಯ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿತ್ತು.
ಆತನ ಸ್ಥಿತಿ ಗಂಭೀರವಾಗಿದೆ ಎಂದು ಈ ಹಿಂದೆಯೇ ವೈದ್ಯರು ತಿಳಿಸಿದ್ದರು. ಇದೀಗ ಕುಮಾರ್ ಮೃತಪಟ್ಟಿದ್ದಾನೆ. ಬದುಕಿ ಅಚ್ಚರಿಗೆ ದೂಡಿದ್ದ ಹುಡುಗನ ಬದುಕು ಮುಗಿದುಹೋಗಿದೆ.