ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ ದಂಪತಿ
ಹುಬ್ಬಳ್ಳಿ, ಆಗಸ್ಟ್ 19: ಸಂಬಂಧಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರು ಹುಡುಕುತ್ತಿದ್ದ ದಂಪತಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದಿದೆ.
ರವೀಂದ್ರ ಮಲವಾಡೆ (65) ಹಾಗೂ ಸುಧಾ ಮಲವಾಡೆ (60) ದಂಪತಿ ಹುಬ್ಬಳ್ಳಿಯ ಉಂಕಾಲ ಕೆರೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗಸ್ಟ್ 16ರಂದು ಶಿಗ್ಗಾವಿ ನಗರದಲ್ಲಿ ಸಂಬಂಧಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಂಪತಿಯನ್ನು ಪೊಲೀಸರು ಹುಡುಕುತ್ತಿದ್ದರು ಎನ್ನಲಾಗಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ದಂಪತಿ ಆಗಾಗ್ಗೆ ಸ್ಥಳವನ್ನು ಬದಲಾಯಿಸುತ್ತಲೇ ಇದ್ದರು. ಆದರೆ ಇನ್ನು ಹೆಚ್ಚು ದಿನ ಹೀಗೆ ತಪ್ಪಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಭಾನುವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಪೊಲೀಸರು ಈ ದಂಪತಿಯ ಮೊಬೈಲ್ ಫೋನ್ ಲೊಕೇಷನ್ ಟ್ರ್ಯಾಕ್ ಮಾಡಿ ಬಂದಾಗ ಇವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡುಬಂದಿದೆ. ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

ಆದರೆ ಅವರಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ. ತನ್ನ ತಂದೆ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ವಿಷಯ ತಿಳಿಯುತ್ತಿದ್ದಂತೆ ಅವರ ಮಗಳು ದಿವ್ಯಾ ಕೂಡ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆಕೆಯನ್ನೂ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಆಗಸ್ಟ್ 17ರಂದು ಶಿಗ್ಗಾವಿಯ ಹಳೇಪೇಟೆಯಲ್ಲಿ ಶಾಂತಾಭಾಯಿ ಮಲವಾಡೆ ಎಂಬುವರ ಕೊಲೆ ನಡೆದಿತ್ತು. ಮನೆಯಲ್ಲಿ ಆಭರಣ ದೋಚಿ ಇವರನ್ನು ಉಸಿರುಗಟ್ಟಿ ಸಾಯಿಸಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ರವೀಂದ್ರ ಹಾಗೂ ಸುಧಾ ಅವರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.












Click it and Unblock the Notifications