ವಾಣಿಜ್ಯ ನಗರಿ ಹುಬ್ಬಳ್ಳಿಗೂ ಕಾಲಿಟ್ಟ ಕೊರೊನಾ ಸೋಂಕು!
ಹುಬ್ಬಳ್ಳಿ/ಧಾರವಾಡ, ಮಾರ್ಚ್ 22: ತೀವ್ರ ತಲ್ಲಣ ಸೃಷ್ಟಿಸಿರುವ ಕೊರೊನ ವೈರಸ್ ಸೋಂಕು ವಾಣಿಜ್ಯ ನಗರಿ ಹುಬ್ಬಳ್ಳಿಗೂ ಕಾಲಿಟ್ಟದೆ.
ಆಸ್ಟ್ರೇಲಿಯಾಕ್ಕೆ ಹೋಗಿ ಬಂದಿದ್ದ ಧಾರವಾಡ ಧಾರವಾಡ ಮೂಲದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು, ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ಹುಬ್ಬಳ್ಳಿಯಲ್ಲಿ 91 ಜನರ ಮೇಲೆ ನಿಗಾ ವಹಿಸಲಾಗಿದೆ.
ಕೊರೊನಾ ಕರಿಛಾಯೆ; ಹುಬ್ಬಳ್ಳಿ ಮಾರ್ಕೆಟ್ ಬಣ ಬಣ
ವಿದೇಶ ಪ್ರವಾಸದಿಂದ ಆಗಮಿಸಿದ್ದ ಈ ವ್ಯಕ್ತಿಯು ಮಾರ್ಚ್ 12 ರಂದು ಧಾರವಾಡ ನಗರಕ್ಕೆ ಆಗಮಿಸಿದ್ದರು. ಶಂಕಿತ ಕೋವಿಡ್ 19 ರ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ, ಮಾರ್ಚ್ 20 ರಂದು ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಕಂಟೈನಮೆಂಟ್ ಪ್ರದೇಶ ಘೋಷಣೆ
ಸೋಂಕು ದೃಢಪಟ್ಟಿರುವ ವ್ಯಕ್ತಿಯು ಧಾರವಾಡ ನಗರದ ಹೊಸಯಲ್ಲಾಪುರ ಪ್ರದೇಶಕ್ಕೆ ಸೇರಿದ್ದಾರೆ. ಹೊಸಯಲ್ಲಾಪುರ ಪ್ರದೇಶವನ್ನು ಕಂಟೈನಮೆಂಟ್ ಎಂದು ಘೋಷಿಸಲಾಗಿದ್ದು, ಅಲ್ಲಿಂದ ಸುತ್ತಮುತ್ತಲಿನ 3 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ.
ಮಾಹಿತಿ ಸಂಗ್ರಹ
ಈ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ( Contact Tracing) ಸಂಗ್ರಹಿಸಲಾಗುತ್ತಿದೆ.
ಜನ ಭಯಭೀತರಾಗಬಾರದು
ಜಿಲ್ಲೆಯಾದ್ಯಂತ ಈಗಾಗಲೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನತೆ ಭಯಕ್ಕೆ ಒಳಗಾಗಬಾರದು, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕರು ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರುವುದರ ಮೂಲಕ ವೈರಾಣು ತಡೆಯಲು ತಮ್ಮ ಸಹಕಾರ ನೀಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 22 ಜನರಿಗೆ ಸೋಂಕು
ಕರ್ನಾಟಕದಲ್ಲಿ ಒಟ್ಟು 22 ಜನರಿಗೆ ಸೋಂಕು ತಗಲಿರುವುದು ದೃಢವಾಗಿದೆ. ಹುಬ್ಬಳ್ಳಿಯಲ್ಲಿ 91 ಜನರ ಮೇಲೆ ನಿಗಾ ವಹಿಸಲಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು. ನಗರದಿಂದ ಹಳ್ಳಿಗಳಿಗೆ ತೆರಳದಂತೆ ಜನರಿಗೆ ಸಿಎಂ ಯಡಿಯೂರಪ್ಪ ಸಲಹೆ ನೀಡಿದ್ದಾರೆ.