ಪಂಚ ರಾಜ್ಯ ಚುನಾವಣೆಗೆ ಕಾಂಗ್ರೆಸ್ ಸರ್ಕಾರ 1,000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ: ಪ್ರಲ್ಹಾದ್ ಜೋಶಿ ಗಂಭೀರ ಆರೋಪ
ಹುಬ್ಬಳ್ಳಿ, ಅಕ್ಟೋಬರ್, 15: ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 80 ಕೋಟಿಗೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಪಂಚರಾಜ್ಯಗಳ ಚುನಾವಣೆಗೆ ರಾಜ್ಯ ಸರ್ಕಾರ ಅನೈತಿಕ ಮಾರ್ಗದಿಂದ ಹಣ ಸಂಗ್ರಹಕ್ಕೆ ಮುಂದಾಗಿದೆ. ನನಗಿರುವ ಮಾಹಿತಿ ಪ್ರಕಾರ 1000 ಕೋಟಿ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ. ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ, ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ. ಸಂತೋಷ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಮುಖಂಡರ ದುಡ್ಡು ಎಂದು. ಮೊದಲನೇ ದುಡ್ಡು ಕಾಂಗ್ರೆಸ್ನ ಭ್ರಷ್ಟಾಚಾರ ಹಣ ಅನ್ನೋದು ಜನಜನಿತ ಎಂದರು.

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಇದು ಇಲ್ಲಿವರೆಗೂ ಆಗಿರೋದು. ಮುಂದೆ ಏನೇನು ಆಗುತ್ತೋ ನೋಡಬೇಕು. ಇದು ಕಮಿಷನ್ ಹಣ ಅನ್ನುವ ರೀತಿಯಲ್ಲಿ ಆರೋಪ ಇದೆ. ಇದರ ಸಮಗ್ರ ತನಿಖೆ ಆಗಬೇಕು. ಸಿಬಿಐ, ಈಡಿ ಸಮಗ್ರ ತನಿಖೆ ನಡೆಸಬೇಕು. ಕಾಂಗ್ರೆಸ್ ಕರಾಳ ಮುಖ ಹೊರ ಬಂದಿದೆ. ಸತ್ಯ ಹರಿಶ್ಚಂದ್ರ ಅನ್ನೋ ರೀತಿ ಫೋಸ್ ಕೊಟ್ಟಿದ್ದರು. ಕಾಂಗ್ರೆಸ್ ಕೈವಾಡ ಇರೋದು ಸ್ಪಷ್ಟವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಲ್ಲ ಅದು, ಕಾಂಗ್ರೆಸ್ ಕಮಿಷನ್ ಸರ್ಕಾರ. ಜನರ ಬಗ್ಗೆ ಅರಿವಿಲ್ಲ, ಕಾಳಜಿ ಇಲ್ಲ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದವರು ಇದರಲ್ಲಿ ಇದ್ದಾರೆ. ಈ ಐಟಿ ದಾಳಿ ಹಿಂದೆ ಮನಿ ಲಾಂಡ್ರಿಂಗ್ ನಡದಿರುವ ಅನುಮಾನ ಇದೆ. ಕಾಂಗ್ರೆಸ್ ಮುಖಂಡರೇ ಇದರಲ್ಲಿ ಇರೋದು ಎಲ್ಲರಿಗೂ ಗೊತ್ತು. ಕಾನೂನಿನ ವಿರುದ್ದ ಇರುವುದು ಕಾಂಗ್ರೆಸ್ ಪಾರ್ಟಿ ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕತ್ತಲೆಯನ್ನು ಕನ್ಫರ್ಮ್ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರ ವಿದ್ಯುತ್ ವಿಚಾರವಾಗಿ ಹಲವು ಕ್ರಮ ಕೈಗೊಂಡಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಸೋಲಾರ್, ರಿನವೇಬಲ್ ಪವರ್ ಹೆಚ್ಚಾಗಿದೆ. ಕಾಂಗ್ರೆಸ್ನ ಒಂದು ಹೆಸರು ಭ್ರಷ್ಟಾಚಾರ, ಇನ್ನೊಂದು ಹೆಸರು ಸುಳ್ಳು. ನಾವು ಕೊಟ್ಟ ಭರವಸೆಗಿಂತ ಹೆಚ್ಚಿನ ಕಲ್ಲಿದ್ದಲು ನಾವು ಪೂರೈಸುತ್ತಿದ್ದೇವೆ ಎಂದರು.
ಕಳೆದ 7 ದಿನಗಳಲ್ಲಿ 56,000 ಟನ್ ಕಲ್ಲಿದ್ದಲು ಪೂರೈಕೆ ಆಗಿದೆ. ರಾಜ್ಯ ಸರ್ಕಾರ ಕೇಂದ್ರ ಗಣಿ ಇಲಾಖೆಗೆ 683 ಕೋಟಿ ಕೊಡಬೇಕು. ಯಾವುದೂ ಯೋಚನೆ ಇಲ್ಲದೆ ಕರೆಂಟ್ ಉಚಿತ ಅಂತಾ ಹೇಳಿದರು. ಇದೀಗ ಕಾಂಗ್ರೆಸ್ ಸರ್ಕಾರ ವಿದ್ಯುತ್ ಕಟ್ ಮಾಡುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲು ಹಿಂದೇಟು ಹಾಕುತ್ತಿದೆ. ಬೋಗಸ್ ಆಶ್ವಾಸನೆ ಕೊಟ್ಟು ಜನರನ್ನು ಕತ್ತಲೆ ಭಾಗ್ಯಕ್ಕೆ ತಳ್ಳಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸರ್ವಾಧಿಕಾರ ಧೋರಣೆ ಖಂಡಿಸುತ್ತೇನೆ ಎಂದು ಗುಡುಗಿದರು.
ಹಿಂದೂಗಳ ಭಯದ ವಾತಾವರಣ ಸೃಷ್ಟಿಯಾಗಿದೆ. ಹಳೇ ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಮೇಲೆ ಕೇಸ್ ಹಾಕ್ತೀರಿ. ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ತಾಕತ್ತು ಇದ್ದರೆ ಭಗವಾನ್ ಅವರನ್ನು ಅರೆಸ್ಟ್ ಮಾಡಿ. ಒಂದು ಸಮಾಜದ ವಿರುದ್ದವಾಗಿ ಕೆಟ್ಟದಾಗಿ ಮಾತಾಡಿದ್ದಾರೆ. ಸೂಲಿಬೆಲೆ ನಿಮ್ಮ ದುಷ್ಕ್ರತ್ಯವನ್ನು ಜನರ ಮುಂದೆ ಹೇಳಿದ್ದಾರೆ. ಅವರ ಮೇಲೆ ಹಾಕಿರುವ ಕೇಸ್ ತೆಗೆಯಬೇಕು. ಇದನ್ನು ನಾನು ಖಂಡಿಸುತ್ತೇನೆ. ಹಿಂದೂ ಸಮಾಜ ಮೇಲೆ ಭಯ ಹುಟ್ಟಿಸುವ ಕೆಲಸ ಕಾಂಗ್ರೆಸ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.












Click it and Unblock the Notifications