Congress guarantees: ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ರಾಜ್ಯದ ಜನರಿಗೆ ಮೋಸ ಮಾಡಿದೆ: ಕೆ.ಎಸ್.ಈಶ್ವರಪ್ಪ ಆರೋಪ
ಹುಬ್ಬಳ್ಳಿ, ಜೂನ್, 26: ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗಿನಿಂದ ವಿಪಕ್ಷ ನಾಯಕರು ಒಂದಲ್ಲ ಒಂದು ರೀತಿಯ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಅದೇ ರೀತಿ ಇಂದು ಕೂಡ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.
ಈ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್ನಲ್ಲಿ ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಕಾಂಗ್ರೆಸ್ನವರು ಸುಳ್ಳು ಹೇಳಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಲ್ಲದೆ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದಾರೆ. ಒಬ್ಬರಿಗೂ ಒಂದು ರೂಪಾಯಿಯೂ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.

ಮತ್ತೊಂದೆಡೆ ಕೇಂದ್ರ ಸರ್ಕಾರ ಕೊಡುವ 5 ಕೆಜಿ ಉಚಿತ ಅಕ್ಕಿಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರು ಬಡ ಜನರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪ ಮಾಡಿದರು.
ಇನ್ನು ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಿದ್ದಿದೆ. ಕಾಂಗ್ರೆಸ್ನವರನ್ನು ಕರೆದುಕೊಂಡು ಬಂದಿದ್ದಕ್ಕೆ ನಮಗೆ ಈ ಗತಿ ಬಂದಿದೆ. ಆಪರೇಶನ್ ಕಮಲ ನಮಗೆ ಮುಳುವಾಯಿತು ಎಂದು ಈಶ್ವರಪ್ಪ ಗರಂ ಆದರು.
ಭಾಗ್ಯಗಳ ಹೆಸರಲ್ಲಿ ಜನರಿಗೆ ಮೋಸ
ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ಜನರಿಗೆ ತೊಂದರೆ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಇಂಡಸ್ಟ್ರಿಗಳನ್ನು ಓಡಿಸುತ್ತಿದ್ದಾರೆ. ವ್ಯವಹಾರ ಮಾಡಲು ಬಿಡುತ್ತಿಲ್ಲ. ಕೈಗಾರಿಕೆಗಳ ಮೇಲೆ ಯಾಕೆ ಭಾರ ಹಾಕಿದ್ದೀರಿ? ಜನರಿಗೆ ಭಾಗ್ಯಗಳ ಹೆಸರಲ್ಲಿ ಮೋಸ ಮಾಡಿ ಕಂಡೀಷನ್ ಹಾಕುತ್ತಿದ್ದಾರೆ. ಅಲ್ಲದೆ ಅಕ್ಕಿ ಕೊಡುವ ವಿಚಾರದಲ್ಲೂ ಕೇಂದ್ರದ ಮೇಲೆ ಯಾಕೆ ಗೂಬೆ ಕೂಡಿಸುತ್ತಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ಗೆ ಅಚ್ಛೆ ದಿನ್ ಬರುತ್ತದೆ ಅಂತಾ ಹೇಳಿಲ್ಲ. ಇಡೀ ದೇಶಕ್ಕೆ ಅಚ್ಛೇ ದಿನ್ ಬರುತ್ತದೆ ಅಂತಾ ಹೇಳಿದ್ವಿ. ದೇಶದಲ್ಲಿ ಆಹಾರ ಭದ್ರತೆ ಇದೆ, ಹಣದುಬ್ಬರ ಕಡಿಮೆಯಾಗಿದೆ. ಕೊವಿಡ್, ರಷ್ಯಾ- ಉಕ್ರೇನ್ ಯುದ್ಧದ ನಡುವೆಯೂ ದೇಶ ಆರ್ಥಿಕವಾಗಿ ಸುಸ್ಥಿರವಾಗಿದೆ. ಹಾಗೆಯೇ ಇಡೀ ದೇಶದಲ್ಲಿ ಮೋದಿಯವರ ಬಗ್ಗೆ ಗೌರವವಿದೆ. ಸಿದ್ಧರಾಮಯ್ಯ ಸುಳ್ಳು ಭಾಷಣ ಮಾಡುವುದರಿಂದ ಏನೂ ಆಗಲ್ಲ ಎಂದರು.












Click it and Unblock the Notifications