ಕಾಂಗ್ರೆಸ್ ಸರ್ಕಾರಕ್ಕೆ ಧೈರ್ಯವಿದ್ದರೆ ಭ್ರಷ್ಟಾಚಾರ ಪ್ರಕರಣ ಸಿಬಿಐಗೆ ಒಪ್ಪಿಸಲಿ: ಜೋಶಿ
ಹುಬ್ಬಳ್ಳಿ, ಅಕ್ಟೋಬರ್ 23: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರವಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ಹಗುರವಾಗಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ , ಪ್ರಕರಣವನ್ನು ತಕ್ಷಣ ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲೆಸೆದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಸಿಬಿ, ಸರ್ಕಾರದ ಕೈಗೊಂಬೆ. ಎಸಿಬಿಯಿಂದ ಸತ್ಯ ಹೊರಬರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನ ಹಲ್ಲು ಕಿತ್ತ ಹಾವು ಮಾಡಿದ್ದಾರೆ. ಮುಖ್ಯಮಂತ್ರಿಗಳ ನೈತಿಕತೆಯ ಮೇಲೆ ಸವಾಲಿದೆ.

ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ರಾಜಿನಾಮೆ ನೀಡಲಿ. ಸಚಿವ ವಿನಯ್ ಕುಲಕರ್ಣಿ ಕೈಲಾಗದವರು, ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ ವಿನಯ್ ನಡೆ. ವಿನಯ್ ಕುಲಕರ್ಣಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಾಕತಿದ್ದರೆ ನನ್ನ ಎದುರು ಚುನಾವಣೆ ಎದುರಿಸಲಿ ಎಂದು ಹುಚ್ಚು ಹುಚ್ಚುವಾಗಿ ಮಾತನಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು ಮರೆತಿದ್ದಾರೆ ಅನ್ನಿಸುತ್ತೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಲು ಸಚಿವ ವಿನಯ್ ಕುಲಕರ್ಣಿ ಅವರೇ ಕಾರಣ. ಅಲ್ಪಸಂಖ್ಯಾತ ಓಲೈಕೆಗಾಗಿ ಹಿಂದುಗಳ ವಿರೋಧವಾಗಿ ನಿಲ್ಲುತ್ತಿದ್ದಾರೆ. ವಿನಯ್ ಕುಲಕರ್ಣಿಗೆ ನಿಜವಾಗಿ ನಿಮಗೆ ತಾಕತ್ತಿದ್ದರೆ ನಮ್ಮ ಮಹಾನಗರ ಪಾಲಿಕೆಗೆ ಬರುವ 137 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.
ರಾಹುಲ್ ಗಾಂಧಿ ತರಹ ಮಾತನಾಡಬೇಡಿ, ಯಾರೋ ಬರೆದು ಕೊಟ್ಟಿದ್ದನ್ನು ಓದಬೇಡಿ, ಸ್ವಂತ ಬುದ್ಧಿ ಉಪಯೋಗಿಸಿ ಮಾತನಾಡಿ. ಸಚಿವ ದೇಶಪಾಂಡೆ ಜೋಶಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ, ಮೊದಲು ದೇಶಪಾಂಡೆ ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಮೊದಲು ಜನರಿಗೆ ತಿಳಿಸಲಿ. ರಾಜ್ಯ ಸರ್ಕಾರ ಧಾರವಾಡದಲ್ಲಿ ಸಾಧನಾ ಸಮಾವೇಶ ಮಾಡಲು ಹೋರಟಿದೆ. ಇದು ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂದರು.












Click it and Unblock the Notifications