Breaking; ಹುಬ್ಬಳ್ಳಿ ಗಲಭೆ; ಮೌಲ್ವಿ ವಾಸಿಂ ಪಠಾಣ್ ವಶಕ್ಕೆ
ಹುಬ್ಬಳ್ಳಿ, ಏಪ್ರಿಲ್ 21; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆಯಲಾಗಿದೆ. ಗಲಭೆಗೆ ಮೌಲ್ವಿಯೇ ಮಾಸ್ಟರ್ ಮೈಂಡ್ ಎಂಬ ಶಂಕೆ ಇದೆ.
ಗುರುವಾರ ಬೆಳಗ್ಗೆ ಮೌಲ್ವಿ ವಾಸಿಂ ಪಠಾಣ್ ಅಜ್ಞಾತ ಸ್ಥಳದಿಂದ 4 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದರು. ಈ ವಿಡಿಯೋ ಬಿಡುಗಡೆಗೊಂಡ ಸುಮಾರು ಮೂರು ಗಂಟೆಯೊಳಗೆ ಪೊಲೀಸರು ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆದಿದ್ದಾರೆ.
ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ಬಳಿಕ ಮೌಲ್ವಿ ವಾಸಿಂ ಪಠಾಣ್ ಬಂಧಿಸುವ ಬಗ್ಗೆ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.
ಮಂಗಳವಾರದಿಂದಲೇ ಮೌಲ್ವಿ ವಾಸಿಂ ಪಠಾಣ್ಗೆ ಶರಣಾಗಲು ಪೊಲೀಸರು ಸೂಚನೆ ನೀಡಿದ್ದರು. ಆದರೆ ಶರಣಾಗದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಇಂದು ವಿಡಿಯೋ ಬಿಡುಗಡೆ ಮಾಡಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಭಿಷೇಕ್ ಹಿರೇಮಠ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಾಟ್ಸಪ್ನಲ್ಲಿ ಎಡಿಟ್ ಮಾಡಿದ ಪ್ರಚೋದನಾಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು.
ಅಭಿಷೇಕ್ ಹಿರೇಮಠ ಬಂಧಿಸುವಂತೆ ಆಗ್ರಹಿಸಲು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಸೇರಿದ್ದ ನೂರಾರು ಒಂದು ಕೋಮಿನ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಸ್ಪತ್ರೆ, ಆಂಜನೇಯ ದೇವಾಲಯದ ಮೇಲೆಯೂ ಕಲ್ಲು ತೂರಾಟ ಮಾಡಿದ್ದರು.
ಪೊಲೀಸರು ಸ್ಟೇಟಸ್ ಹಾಕಿದ್ದ ಆರೋಪಿ ಅಭಿಷೇಕ್ ಹಿರೇಮಠ ಬಂಧಿಸಿದ್ದರು. ಕೋರ್ಟ್ ಆರೋಪಿಯನ್ನು ಏಪ್ರಿಲ್ 30ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಅಭಿಷೇಕ್ ಹಿರೇಮಠ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಶುಕ್ರವಾರದಿಂದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.












Click it and Unblock the Notifications