Breaking; ಹುಬ್ಬಳ್ಳಿ ಗಲಭೆ, ಎಐಎಂಐಎಂ ಮುಖಂಡನ ಬಂಧನ
ಹುಬ್ಬಳ್ಳಿ, ಏಪ್ರಿಲ್ 24; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 16ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೌಲ್ವಿ ವಾಸಿಂ ಪಠಾಣ್ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಎಐಎಂಐಎಂ ಪಕ್ಷದ ಮುಖಂಡ ನಜೀರ್ ಅಹ್ಮದ್ ಹೊನ್ಯಾಳರನ್ನು ವಿಚಾರಣೆ ಬಳಿಕ ವಶಕ್ಕೆ ಪಡೆಯಲಾಗಿದೆ. ಶನಿವಾರ ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.
ನಜೀರ್ ಅಹ್ಮದ್ ಹೊನ್ಯಾಳ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಜೊತೆ ಗುರುತಿಸಿಕೊಂಡಿರುವ 8-10 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಗಲಭೆ ಬಳಿಕ ಮಾತನಾಡಿದ್ದ ಎಐಎಂಐಎಂನ ನಜೀರ್ ಹೊನ್ಯಾಳ, 'ಗಲಭೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಹೆಸರು ಕೆಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದಾರೆ" ಎಂದು ಹೇಳಿಕೆ ನೀಡಿದ್ದರು.
ನಜೀರ್ ಅಹ್ಮದ್ ಹೊನ್ಯಾಳ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 71ನೇ ವಾರ್ಡ್ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ನಜೀರ್ ಎರಡು ವರ್ಷಗಳ ಹಿಂದೆ ಎಐಎಂಐಎಂ ಪಕ್ಷ ಸೇರಿದ್ದರು.
ಹುಬ್ಬಳ್ಳಿ ಗಲಭೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ನಜೀರ್ ಅಹ್ಮದ್ ಹೊನ್ಯಾಳ ಜೊತೆ ಪಕ್ಷದ ಇನ್ನೊಬ್ಬ ಮುಖಂಡ ಮೊಹಮ್ಮದ್ ಆಸೀಫ್ ಸಹ ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ಬಳಿಕ ನಜೀರ್ ಅಹ್ಮದ್ ಹೊನ್ಯಾಳ ಬಂಧಿಸಿ, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದರು.
ಗಲಭೆ ಪ್ರಕರಣದ ಸಂಬಂಧ ಬಂಧಿತನಾಗಿರುವ ಮೌಲ್ವಿ ವಾಸಿಂ ಪಠಾಣ್ನನ್ನು ಶುಕ್ರವಾರ ಹುಬ್ಬಳ್ಳಿಯ 4ನೇ ಜೆಎಂಎಫ್ಸಿ ನ್ಯಾಯಾಲಯ 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಮೌಲ್ವಿಯೇ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.












Click it and Unblock the Notifications