ಹುಬ್ಬಳ್ಳಿ ಕೋರ್ಟ್ ನಲ್ಲಿ ಜನತೆಯ ದಂಗು ಬಡಿಸಿದ ವೈರ್
ಹುಬ್ಬಳ್ಳಿ, ಆಗಸ್ಟ್ 06 : ನಗರದ ಹೃದಯ ಭಾಗವಾಗಿರುವ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಇರುವ ನ್ಯಾಯಾಲಯದಲ್ಲಿ ವೈರ್ನಿಂದ ಸುತ್ತಿದತಂಹ ವಸ್ತುವೊಂದು ಶನಿವಾರ ಕಂಡು ಬಂದು, ನಾಗರಿಕರಲ್ಲಿ ಆತಂಕ ಮೂಡಿಸಿತ್ತು.
ನ್ಯಾಯಾಲಯದ ಆವರಣದಲ್ಲಿ ಬಿದ್ದ ವಸ್ತುವನ್ನು ಹತ್ತಿರದಿಂದ ನೋಡಿದ ಜನತೆ ಅದರಲ್ಲಿ ವೈರ್ ಇರುವುದು ಪತ್ತೆಯಾಗಿದೆ. ಇದರಿಂದ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಕೂಲಂಕುಷವಾಗಿ ಪರಿಶೀಲಿಸಿದಾಗ ಅದು ಮೋಟರ್ ಬೈಕ್ ಗೆ ಬಳಸುವ ಎಲೆಕ್ಟ್ರಾನಿಕ್ ವಸ್ತು ಎಂದು ಖಚಿತಪಡಿಸಿಕೊಂಡರು.
ಇತ್ತೀಚೆಗಷ್ಟೇ ಮೈಸೂರಿನ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಇಂದು ವೈರ್ ನಂತಹ ವಸ್ತುವೊಂದನ್ನು ಕಂಡು ಸಹಜವಾಗಿ ಗಾಬರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಇದು ಯಾರೋ ಮಾಡಿರುವ ಕಿತಾಪತಿ ಇರಬಹುದು ಎಂದೂ ಸಂಶಯ ವ್ಯಕ್ತಪಡಿಸಿದರು.
ಮತ್ತೊಂದು ಸರಗಳ್ಳತನ : ಸರಗಳ್ಳರ ರಾಜಧಾನಿಯೆಂದೇ ಕುಖ್ಯಾತಿ ಪಡೆಯುತ್ತಿರುವ ನಗರದಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಸರಗಳ್ಳತನ ಮಾಡಲಾಗಿದೆ. ಸ್ಥಳೀಯ ನವನಗರ ಭಾಗದಲ್ಲಿನ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಮಂಗಳಾ ಪಾಟೀಲ ಎಂಬ ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ರಾತ್ರಿ 8ರ ಹೊತ್ತಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಂಗಳಾ ಅವರ ಕೊರಳಿಗೆ ಕೈ ಹಾಕಿ ಒಂದೂವರೆ ಲಕ್ಷ ರು. ಕಿಮ್ಮತ್ತಿನ 53 ಗ್ರಾಂ ತೂಕದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆ ಐದು ಖಾಸಗಿ ಬಸ್ ಜಪ್ತಿ : ನಗರದ ಆರ್ಟಿಓ ಪುರುಷೋತ್ತಮರ ನೇತೃತ್ವದಲ್ಲಿ ಶನಿವಾರ ಬಸ್ ಗಳಲ್ಲಿ ಅನಧಿಕೃತ ವಸ್ತುಗಳನ್ನು ಸಾಗಿಸುವುದನ್ನು ಪತ್ತೆ ಹಚ್ಚಿ, ಒಂದು ಸರಕಾರಿ ಬಸ್ ಸೇರಿದಂತೆ ಒಟ್ಟು ಐದು ಬಸ್ ಗಳನ್ನು ಜಪ್ತಿ ಮಾಡಲಾಗಿದೆ.
ನಗರದ ಗಬ್ಬೂರ್ ಬೈಪಾಸ್, ಕಿತ್ತೂರು ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ ಭಾಗದಲ್ಲಿ ಈ ದಾಳಿ ನಡೆದಿದ್ದು ಪ್ರತಿಯೊಂದು ಬಸ್ ಗಳನ್ನು ಪರಿಶೀಲಿಸಲಾಯಿತು.