ಕೇಂದ್ರ ಅಧ್ಯಯನ ತಂಡದಿಂದ ಹುಬ್ಬಳ್ಳಿಯಲ್ಲಿ ಮಳೆಹಾನಿ ವೀಕ್ಷಣೆ; 10 ದಿನದಲ್ಲಿ ವರದಿ ಸಲ್ಲಿಕೆ
ಹುಬ್ಬಳ್ಳಿ, ಸೆಪ್ಟೆಂಬರ್, 08: ಅತಿವೃಷ್ಠಿ ಹಾನಿಯ ಅಧ್ಯಯನಕ್ಕಾಗಿ ಕೇಂದ್ರ ಅಧಿಕಾರಿಗಳ ತಂಡವು ಇಂದು ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದು, ಹಾನಿಗೀಡಾದ ಬೆಳೆಗಳು, ಮನೆ, ಶಾಲೆ, ರಸ್ತೆ, ಸೇತುವೆಗಳನ್ನು ಪರಿಶೀಲಿಸಿತು. ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ವರದಿಯನ್ನು 10 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಅಶೋಕ್ ಕುಮಾರ್ ತಿಳಿಸಿದರು.
ಕಿರೇಸೂರಿನಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಗೀಡಾಗಿರುವ ಜಮೀನುಗಳಲ್ಲಿ ಬೆಳೆಗಳನ್ನು ವೀಕ್ಷಿಸಿದರು. ಅತಿವೃಷ್ಟಿಯಿಂದ ಧಾರವಾಡ ಜಿಲ್ಲೆಯಲ್ಲಿ ಆಗಿರುವ ಹಾನಿಯನ್ನು ಅಧ್ಯಯನ ಮಾಡಲಾಗುತ್ತಿದೆ. ಜಿಲ್ಲಾಡಳಿತವು ಕಳೆದ ಎರಡು ಮೂರು ದಿನಗಳಲ್ಲಿ ಉಂಟಾಗಿರುವ ನಷ್ಟದ ಮಾಹಿತಿಯನ್ನು ಒದಗಿಸಲಿದೆ. ಎಲ್ಲಾ ಮಾಹಿತಿಯನ್ನು ಮೌಲ್ಯಮಾಪನ ಮಾಡಿ ಹತ್ತು ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ತಂಡವು ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ರೈತರಿಗೆ ಮಾರಕವಾಗಿರುವ ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ; ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿಯನ್ನು ಒದಗಿಸಲಾಗಿದೆ. ಜೂನ್ 1ರಿಂದ ಆಗಸ್ಟ್ ಅಂತ್ಯದವರೆಗೆ ಸುಮಾರು 97 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ಜಲಾವೃತ ಆಗಿವೆ ಎಂದರು.
ಮಳೆಹಾನಿ ಸಮೀಕ್ಷೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?
ಸೆಪ್ಟಂಬರ್ 1ರಿಂದ ಇಲ್ಲಿಯವರೆಗೂ ಸುಮಾರು 18 ರಿಂದ 20 ಸಾವಿರ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಜೂನ್ನಿಂದ ಈಚೆಗೆ 1172 ಮನೆಗಳು ಹಾನಿಗೊಳಗಾಗಿವೆ. ಕಳೆದ 2ರಿಂದ 3 ದಿನಗಳ ಅವಧಿಯಲ್ಲಿ ಸುಮಾರು 44 ಮನೆಗಳು ಹಾನಿಯಾದ ಬಗ್ಗೆ ವರದಿ ಆಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು 410 ಶಾಲೆಗಳು, 160 ಅಂಗನವಾಡಿಗಳ ಕಟ್ಟಡಗಳು ಹಾನಿಗೀಡಾಗಿದ್ದು, ಇನ್ನೂ ಹಾನಿಯ ಸಮೀಕ್ಷೆ ಕಾರ್ಯ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಅವರು ತಿಳಿಸಿದರು.
ವರುಣನ ಆರ್ಭಟಕ್ಕೆ ನಲುಗಿದ ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ಜನರು
ಮಳೆಹಾನಿ ವೀಕ್ಷಿಸಿದ ಅಧಿಕಾರಿಗಳು
ಈ ಸಂದರ್ಭದಲ್ಲಿ ಕೇಂದ್ರ ಅಧ್ಯಯನ ತಂಡದ ಸದಸ್ಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ವಿ.ವಿ.ಶಾಸ್ತ್ರಿ , ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್. ಶ್ರೀನಿವಾಸ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪರಿಹಾರ ಪುನರ್ ಪರಿಶೀಲನೆಗೆ ಒತ್ತಾಯ
ಕಿರೇಸೂರು ಗ್ರಾಮದಲ್ಲಿ ಬೆಣ್ಣೆಹಳ್ಳ, ಅಗಸನ ಹಳ್ಳ ಹಾಗೂ ಯರನಾಳ ಹಳ್ಳದ ಪ್ರವಾಹದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಚನ್ನಬಸಪ್ಪ ಹುಲಿಕಟ್ಟಿ, ಪ್ರವೀಣ ಕಮಡೊಳ್ಳಿ ಮತ್ತಿತರ ರೈತರಿಗೆ ಸೇರಿದ ಹತ್ತಿ, ಮೆಕ್ಕೆಜೋಳ, ಹೆಸರುಕಾಳು, ಉದ್ದು, ಉಳ್ಳಾಗಡ್ಡಿ ಬೆಳೆಗಳನ್ನು ವೀಕ್ಷಿಸಿದರು. ಹಲವು ದಶಕಗಳ ಹಿಂದೆ ನಿಗದಿಪಡಿಸಿರುವ ಎನ್ಡಿಆರ್ಎಫ್ ಪರಿಹಾರದ ಮೊತ್ತವನ್ನು ಪುನರ್ ಪರಿಶೀಲಿಸಿ, ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸ್ಥಳೀಯ ರೈತರು ತಂಡದ ಎದುರು ಅಳಲು ತೋಡಿಕೊಂಡರು.
ಹಾನಿಗೊಳಗಾದ ಶಾಲಾ ಕಟ್ಟಡಗಳು
ಕೇಂದ್ರ ಅಧ್ಯಯನ ತಂಡದ ಸದಸ್ಯರು ಹೆಬಸೂರಿನಲ್ಲಿ ಹಾನಿಗೀಡಾದ ಶಾಲಾ ಕಟ್ಟಡ, ಕಾಲವಾಡ ಹಾಗೂ ಯಮನೂರಿಲ್ಲಿ ಉದ್ದು ಹಾಗೂ ಹೆಸರಿನ ಬಾಧಿತ ಪ್ರದೇಶಗಳು, ಕಣ್ಣೂರಿನಲ್ಲಿ ಹಾನಿಗೊಳಗಾದ ಸೇತುವೆ, ಭೋಗಾನೂರಿನಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರ, ಹಾನಿಗೀಡಾದ ಮನೆಗಳು, ಅಣ್ಣಿಗೇರಿ ತಾಲ್ಲೂಕಿನ ಬಸಾಪೂರದಲ್ಲಿ ಹಾನಿಗೊಳಗಾದ ರಸ್ತೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ್ ಇಟ್ನಾಳ, ಉಪವಿಭಾಗಾಧಿಕಾರಿ ಅಶೋಕ್ ತೇಲಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ಐ.ಬಿ., ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ, ನವಲಗುಂದ ತಹಶೀಲ್ದಾರ್ ಅನಿಲ್ ಬಡಿಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.