ಹುಬ್ಬಳ್ಳಿಯಲ್ಲಿ ಬೆಂಗಳೂರು ವ್ಯಕ್ತಿಯ ಕಿಡ್ನ್ಯಾಪ್, ದರೋಡೆ
ಹುಬ್ಬಳ್ಳಿ, ಅಕ್ಟೋಬರ್, 25: ಬೆಂಗಳೂರು ಹೆಬ್ಬಾಳ ನಿವಾಸಿಯೊಬ್ಬರನ್ನು ಹುಬ್ಬಳ್ಳಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಆಟೋದಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹೆಬ್ಬಾಳ ನಿವಾಸಿ ವಿನೋದ ಅರವಿಂದ ಫುಲೆ ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ರಾತ್ರಿ 10:35ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಆಟೋದಲ್ಲಿ ಬೆದರಿಸಿ ಹತ್ತಿಸಿಕೊಂಡಿದ್ದಾರೆ. ನಂತರ ವಿನೋದ್ ಅವರನ್ನು ಗದಗ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರಿಗೆ ಚಾಕು ತೋರಿಸಿ ಹೆದರಿಸಿ ಅವರ ಬಳಿಯಿದ್ದ 10 ಗ್ರಾಂ.ಬಂಗಾರದ ಸರ, ಐಸಿಐಸಿಐ ಬ್ಯಾಂಕ್ ನ ಎಟಿಎಂ ಕಿತ್ತುಕೊಂಡು ಎಟಿಎಂ ಪಿನ್ ಪಡೆದುಕೊಂಡಿದ್ದಾರೆ.
ಆಟೋ ಹಿಂಬಾಲಿಸುತ್ತಿದ್ದ ಬೈಕನಲ್ಲಿ ಬಂದವನಿಗೆ ಎಟಿಎಂ ಮತ್ತು ಪಿನ್ ಹೇಳಿದ್ದಾರೆ. ತಕ್ಷಣವೇ ಆತ 10 ಸಾವಿರ ರೂ. ನಂತರ 4 ಬಾರಿ 40 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಘಟನೆ ಕುರಿತು ದರೋಡೆಗೊಳಗಾದ ವಿನೋದ ಸ್ಥಳೀಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವ್ಯಕ್ತಿಯ ಕೊಲೆ:
ಧಾರವಾಡ ಕೆಲಗೇರಿ ಕೆರೆಯ ಹಿಂಬಾಗದಲ್ಲಿ ಬಯಲು ಜಾಗೆಯಲ್ಲಿ ದುಷ್ಕರ್ಮಿಗಳು ಸಿಮೆಂಟ್ ಇಟ್ಟಂಗಿ ಹಾಗೂ ಗಾಜಿನ ಬಾಟ್ಲಿಯಿಂದ ಕುತ್ತಿಗೆಗೆ, ಮುಖಕ್ಕೆ ಹೊಡೆದು ಅಪರಿಚಿತ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ.
ಕೊಲೆ ಮಾಡಿ ಸಾಕ್ಷಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ಸುಮಾರು 30 ಫೂಟ್ ಅಂತರದಲ್ಲಿರುವ ಜಾಲಿ ಗಿಡದ ಪಕ್ಕದ ಕೊಚ್ಚೆಯಲ್ಲಿ ಹಾಕಿ ಹೋದ ಬಗ್ಗೆ ನೆಹರುನಗರ ನಿವಾಸಿ ಮೆಹಬೂಬಖಾನ ಪಠಾಣ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ : 97,100 ದಂಡ
ಸಂಚಾರ ನಿಯಮ ಉಲ್ಲಂಘನೆ ಮಾಡಿದ 660 ಕೇಸ ದಾಖಲಿಸಿ 97,100 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.