ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ‘ಅನುಭವ ಮಂಟಪ’- ಎಸ್.ಆರ್ ಹಿರೇಮಠ
ಧಾರವಾಡ, ಆಗಸ್ಟ್ 30 : ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೋಲಿಸಿದಂತೆ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲು ರಾಷ್ಟ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಇದಕ್ಕಾಗಿ ಸಮಿತಿ ಕಾರ್ಯಾರಂಭವೂ ಮಾಡಿದೆ. 2024ರಲ್ಲಿ ಜರಗುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸೋಲಿಸಲಾಗುವುದು. ಈ ಉದ್ದೇಶಕ್ಕಾಗಿ 'ಅಖಿಲ ಭಾರತ ಅನುಭವ ಮಂಟಪ ರಚನೆ' ಮಾಡಲಾಗಿದೆ ಎಂದರು.
ದೇಶದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಮಣಿಪುರ ಸೇರಿ ಇತರೆಡೆ ಗಲಾಟೆಗಳು ನಡೆದರೂ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಟಿಜನ್ಸ್ ಫಾರ್ ಡೆಮಾಕ್ರಸಿಯ (ಸಿಎಫ್ಡಿ) ಸುವರ್ಣ ಮಹೋತ್ಸವ ಅಂಗವಾಗಿ ಈ 'ಅಖಿಲ ಭಾರತ ಅನುಭವ ಮಂಟಪ-2023' ಸೆ. 23, 24ರಂದು ಎರಡು ದಿನಗಳ ವಿಶೇಷ ಕಾರ್ಯಕ್ರಮ ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಉದ್ಘಾಟಿಸಲಿದ್ದು, ಜೆಎನ್ಯುನ ನಿವೃತ್ತ ಪ್ರಾಧ್ಯಾಪಕ ಪ್ರೊ.ಆನಂದ ಕುಮಾರ್, ಲಖನೌನ ಎಸ್.ಆರ್. ದಾರಾಪುರಿ, ಪುನಾದ ದತ್ತ ದೇಸಾಯಿ, ರೈತ ಮುಖಂಡ ಅಶೋಕ ದವಳೆ ಪಾಲ್ಗೊಳ್ಳಲಿದ್ದಾರೆ ಎಂದರು.

ಸಾಮಾನ್ಯ ಸಭೆ ನಾಮಕಾವಾಸ್ತೆ: ಪಾಲಿಕೆ ವಿಪಕ್ಷ ನಾಯಕಿ ಸುವರ್ಣ
ಹುಬ್ಬಳ್ಳಿ: ನಾಳೆ ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೇವಲ ಒಂದೇ ವಿಷಯ ಪಟ್ಟಿಯನ್ನು ಆಯ್ಕೆ ಮಾಡಿರುವುದು ಸರಿಯಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಕೂಡಾ ಅವುಗಳನ್ನು ಸೇರಿಸದೇ ಇರುವುದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಬೇಜವ್ದಾರಿಯಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ ಮುಕ್ತಿ ವಾಹನಗಳಿಗೆ ಚಾಲಕರನ್ನು ನೇಮಿಸಿ 10,000 ರೂ ವೇತನ ಬಟವಡೆ ಅನುಮೋದನೆಗೆ ಮಂಡಿಸಿರುವ ವಿಷಯ ತೀರ ಕ್ಷುಲಕವಾದದ್ದು, ಈ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗದೇ ಮೇಯರ್ ಹಂತದಲ್ಲಿಯೇ ನಿರ್ಧಾರ ತಗೆದುಕೊಳ್ಳುವಂತಹದ. ಮುಕ್ತಿ ವಾಹನಕ್ಕೆ 1,000 ಸಾವಿರ ಶುಲ್ಕ ವಿಧಿಸುವುದು ಸರಿಯಲ್ಲ. ಇದನ್ನು ವಿರೋಧಿಸುತ್ತೇವೆ ಎಂದರು.
ಕುಡಿಯುವ ನೀರು, ಪಾರ್ಕಿಂಗ್ ಟೆಂಡರ್, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಉಣಕಲ್ ಕೆರೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಹಸ್ತಾಂತರ, ಗಣೇಶ ಪೇಟ್ ಮಟನ್ ಮಾರ್ಕೆಟ್ ಮಳಿಗೆಗಳ ಹಂಚಿಕೆ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದರೂ ಕೂಡಾ ಸಾಮಾನ್ಯ ಸಭೆಯ ಸಮಸ್ಯೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಆಕ್ಷೇಪಿಸಿದರು. ಮೇಯರ್ ಅವರಿಗೆ ಆಡಳಿತ ಅನುಭವ ಕೊರತೆಯ ಇದ್ದು, ಆ ಪಕ್ಷದ ಹಿರಿಯ ಪಾಲಿಕೆ ಸದಸ್ಯರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.












Click it and Unblock the Notifications