ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ: ಪ್ರಮೋದ್ ಮುತಾಲಿಕ್ ಪ್ರತಿಭಟನೆ
ಹುಬ್ಬಳ್ಳಿ ನವೆಂಬರ್10 : ಹಲವು ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ.
ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದಂತೆ ನಮಗೂ ಟಿಪ್ಪು ಜಯಂತಿ ಮಾಡಲು ಅವಕಾಶ ನೀಡಿ ಎಂದು ಎಂಐಎಂಐಎಂ ಮುಖಂಡ ವಿಜಯ್ ಗುಂಟ್ರಾಲ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಕೆಲವು ಷರತ್ತುಗಳನ್ನು ವಿಧಿಸಿ ಟಿಪ್ಪು ಜಯಂತಿ ಆಚರಣೆಗೆ ಪಾಲಿಕೆ ಅವಕಾಶ ನೀಡಿತ್ತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ; ಪಾಲಿಕೆ ವಿರುದ್ಧ ಮುತಾಲಿಕ್ ಆಕ್ರೋಶ
ಈ ಹಿನ್ನೆಲೆಯಲ್ಲಿ ಇಂದು(ನವೆಂಬರ್ 10) ಎಂಐಎಂಐಎಂ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸರಳವಾಗಿ ಟಿಪ್ಪು ಜಯಂತಿಯನ್ನು ಆಚರಿಸಿದರು. ಎಐಎಮ್ಐಎಮ್ ಪಕ್ಷದ ಜಿಲ್ಲಾ ಸಂಚಾಲಕ ವಿಜಯ್ ಗುಂಟ್ರಾಳ ಟಿಪ್ಪು ಫೋಟೋಗೆ ಪುಷ್ಪಾರ್ಚನೆ ಮಾಡಿದರು. ಟಿಪ್ಪು ಅಮರ್ ರಹೇ ಎಂದು ಘೋಷಣೆ ಕೂಗಿ ಫಾತಿಯಾ ಖಾಣಿ ಮಂತ್ರ ಫಠಿಸಿ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ.
ಷರತ್ತು ವಿಧಿಸಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದ ಪಾಲಿಕೆ
ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಕೋರಿ ಎಂಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಪಾಲಿಕೆಗೆ ಮನವಿ ಮಾಡಿದ್ದರು. ಮನವಿ ಪರಿಶೀಲಿಸಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಹಲವು ಷರತ್ತುಗಳನ್ನು ವಿಧಿಸಿ ಪಾಲಿಕೆ ಅನುಮತಿ ಕೊಟ್ಟಿತ್ತು. ಹತ್ತು ಸಾವಿರ ರೂಪಾಯಿ ಶುಲ್ಕ ಭರಿಸಿ, 20 ಅಡಿ ಉದ್ದ 30 ಅಡಿ ಅಗಲ ಪೆಂಡಾಲ್ ಬಳಿಸಿ ಟಿಪ್ಪು ಜಯಂತಿ ಆಚರಿಸುವಂತೆ ಪಾಲಿಕೆ ಸೂಚನೆ ನೀಡಿತ್ತು. ಇದರ ಹೊರತಾಗಿ ಬೇರೆ ಯಾವುದೇ ಬಾವುಟ, ಧ್ವಜ, ಭಾವಚಿತ್ರ ಪ್ರದರ್ಶಿಸುವಂತಿಲ್ಲ. ಅಲ್ಲದೇ ಈದ್ಗಾ ಮೈದಾನದಲ್ಲಿರುವ ಆಸ್ತಿಗೆ ಯಾವುದೇ ಹಾನಿ ಧಕ್ಕೆ ತರಬಾರದು ಎಂದು ಪಾಲಿಕೆ ಖಡಕ್ ಸೂಚನೆ ನೀಡಿತ್ತು. ಇನ್ನು ಈದ್ಗಾ ಮೈದಾನದಲ್ಲಿ ಅರ್ಧಭಾಗದಲ್ಲಿ ಮಾತ್ರ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಲಾಗಿತ್ತು.
ಟಿಪ್ಪು ಜಯಂತಿ ಖಂಡಿಸಿ ಮುತಾಲಿಕ್ ಪ್ರತಿಭಟನೆ
ಬಹಳ ದಿನಗಳಿಂದ ತಣ್ಣಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಈಗ ಮತ್ತೆ ಸಂಚಲನ ಮೂಡಿಸಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಯಂತೆ ಟಿಪ್ಪು ಜಯಂತಿ ಆಚರಣೆ ನಡೆಸಲು ಅವಕಾಶ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಪಾಲಿಕೆ ಅವಕಾಶ ನೀಡಿರುವುದನ್ನು ಖಂಡಿಸಿ ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಕೂಡಲೇ ಪ್ರಮೋದ್ ಮುತಾಲಿಕ್ ಅವರನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ನಲ್ಲಿ ಪಿಐಎಲ್
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದು ತಪ್ಪು. ಪಾಲಿಕೆ ದ್ವಂದ್ವ ನಿಲುವು ತಾಳಿದೆ. ಬಿಜೆಪಿಯವರೇ ಟಿಪ್ಪು ಜಯಂತಿ ರದ್ದು ಮಾಡಿದ್ದರು. ಈಗ ಈದ್ಗಾ ಮೈದಾನದಲ್ಲಿ ಅವರೇ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿ ಟಿಪ್ಪು ಜಯಂತಿ ಹೆಸರಲ್ಲಿ ಬಿಜೆಪಿ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಟಿಪ್ಪು ಜಯಂತಿ ಆಚರಣೆಯನ್ನು ನಾವು ಸಹಿಸಲ್ಲ. ಬೇರೆ ಮಹಾಪುರುಷರ ಜೊತೆ ಟಿಪ್ಪು ಹೋಲಿಕೆ ಸರಿಯಲ್ಲ. ಟಿಪ್ಪು ಒಬ್ಬ ಮತಾಂಧ, ದೇಶ ದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ ಎಂದು ಪಾಲಿಕೆ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಈದ್ಗಾ ಮೈದಾನದಲ್ಲಿ ವಿವಿಧ ಆಚರಣೆಗೆ ಅವಕಾಶ
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಿಸಿಪಿ ಬ್ಯಾಕೋರ್ಡ್ ನೇತೃತ್ವದಲ್ಲಿ ಭದ್ರತೆ ನೀಡಲಾಗಿದ್ದು, ಮೈದಾನದ ಹೊರಗೆ ಮತ್ತು ಒಳಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಐದು ಜನ ಪಿಎಸ್ಐ, ಓರ್ವ ಡಿಸಿಪಿ ಹಾಗೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಈದ್ಗಾ ಮೈದಾನದಲ್ಲಿ ಭದ್ರತೆಗೆ ನೇಮಿಸಲಾಗಿದೆ.
ಇನ್ನು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಒನಕೆ ಓಬವ್ವ ಹಾಗೂ ಹೋಳಿ ಆಚರಣೆಗೂ ಮನವಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ನಿನ್ನೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಈರೇಶ್ ಅಂಚಟಗೇರಿ ಸುದೀರ್ಘವಾಗಿ ಚರ್ಚಿಸಿ ಟಿಪ್ಪು ಜಯಂತಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ನೀಡಿದ್ದರು.