ಉತ್ತರ ಕರ್ನಾಟಕದ 3ನೇ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ
ಹುಬ್ಬಳ್ಳಿ, ಜನವರಿ 14; ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಉತ್ತರ ಕರ್ನಾಟಕದ ಮೂರನೇ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದೆ. ಬೆಳಗಾವಿ ಮತ್ತು ಕಲಬುರಗಿ ಬಳಿಕ ಹುಬ್ಬಳ್ಳಿಯಲ್ಲಿ ತರಬೇತಿ ಶಾಲೆ ಆರಂಭವಾಗಲಿದೆ.
ಕರ್ನಾಟಕದ ಹಳೆಯ ವಿಮಾನ ನಿಲ್ದಾನಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು ಒಂದಾಗಿದೆ. ರಸ್ತೆ ವೇ ವಿಸ್ತರಣೆ ಮಾಡಿ, ಹೊಸ ಟರ್ಮಿನಲ್ ಕಟ್ಟಡ ನಿರ್ಮಿಸಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರ್ಪಡೆ ಮಾಡಲಾಗಿದೆ.
ಈಗ ವೈಮಾನಿಕ ತರಬೇತಿ ಶಾಲೆಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲು ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಪೈಲೆಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ.

ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಬಹಳ ಬೇಡಿಕೆ ಇತ್ತು. ಕಳೆದ ವರ್ಷ ರಾಜ್ಯದಲ್ಲಿ 5 ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಹ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು.
ಮೊದಲು ಬೆಂಗಳೂರಿನ ಜಕ್ಕೂರಿನಲ್ಲಿ ಮಾತ್ರ ವೈಮಾನಿಕ ತರಬೇತಿ ಶಾಲೆ ಇತ್ತು. ಈಗ ಕಲಬುರಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಇದೆ. ಇದರಿಂದಾಗಿ ರಾಜ್ಯದ ಯುಕವರು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.
ಹುಬ್ಬಳ್ಳಿ ನಗರಕ್ಕೆ ವೈಮಾನಿಕ ತರಬೇತಿ ಶಾಲೆ ಮಂಜೂರಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಪೈಲೆಟ್ ತರಬೇತಿಗಾಗಿ ಯುವಕ/ ಯುವತಿಯರು ಬೆಂಗಳೂರು, ಮುಂಬೈ, ಹೈದರಾಬಾದ್ಗೆ ಹೋಗುವುದು ತಪ್ಪಲಿದೆ ಎಂದು ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಎರಡನೇ ಹಂತದ ನಗರಗಳ ಅಭಿವೃದ್ಧಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಆರಂಭಕ್ಕೆ ಒಪ್ಪಿಗೆ ಕೊಡಲಾಗಿದೆ. ಆರು ತಿಂಗಳಿನಲ್ಲಿ ಇದಕ್ಕಾಗಿ ಟೆಂಡರ್ ಕರೆಯಲಾಗುತ್ತದೆ. ಮುಂದಿನ ವರ್ಷದ ಆರಂಭಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭವಾಗಲಿದೆ.
ಒಟ್ಟು ಎರಡು ಕಂಪನಿಗಳಿಗೆ ಟೆಂಡರ್ ನೀಡಲಾಗುತ್ತದೆ. ಎರಡೂ ಕಂಪನಿಗಳು ಸಹ ವೈಮಾನಿಕ ತರಬೇತಿ ಶಾಲೆಯಲ್ಲಿನ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಆರಂಭದಲ್ಲಿಯೇ ಶಾಲೆ ಆರಂಭವಾಗಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಠಾಕ್ರೆ ಈ ಕುರಿತು ಮಾತನಾಡಿದ್ದು, "ವೈಮಾನಿಕ ತರಬೇತಿ ಶಾಲೆ ಅರಂಭ ಮಾಡಲು ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ವಿಮಾನ ನಿಲ್ದಾಣದಲ್ಲಿದೆ. ನಿರ್ಮಾಣ, ನಿರ್ವಹಣ ಮತ್ತು ಹಸ್ತಾಂತರ ಮಾದರಿಯಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ" ಎಂದು ಹೇಳಿದ್ದಾರೆ.
ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಟೆಂಡರ್ ಕರೆದರೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಕಂಪನಿಯೇ 10 ರಿಂದ 15 ವರ್ಷ ಶಾಲೆ ನಿರ್ವಹಣೆ ಮಾಡಬೇಕು. ಬಳಿಕ ಅದನ್ನು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಗೆ ಹಸ್ತಾಂತರ ಮಾಡಬಹುದಾಗಿದೆ.
ಹುಬ್ಬಳ್ಳಿ ವಾಣಿಜ್ಯೋದ್ಯಮಿಗಳ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮುಂತಾದ ಸಂಘಗಳು ಹುಬ್ಬಳ್ಳಿಯಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸಿವೆ ಮತ್ತು ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಅಭಿನಂದನೆ ಸಲ್ಲಿಸಿವೆ.
ಜಕ್ಕೂರಿನಲ್ಲಿ ಶಾಲೆ ಆರಂಭ; ಬೆಂಗಳೂರಿನ ಜಕ್ಕೂರಿನಲ್ಲಿ ವೈಮಾನಿಕ ತರಬೇತಿ ಶಾಲೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಶಾಲೆಯನ್ನು ಮುಚ್ಚುವ ಹುನ್ನಾರ ನಡೆದಿತ್ತು ಎಂಬ ಆರೋಪವೂ ಇದೆ. ಈಗ ಶಾಲೆ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರನ್ ವೇ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಕೆಲವು ದಿನಗಳ ಹಿಂದೆ ಜಕ್ಕೂರಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ಶಾಲೆಯಲ್ಲಿ ತರಬೇತಿ ಪಡೆಯಲು ಈಗಾಗಲೇ 34 ಅಭ್ಯರ್ಥಿಗಳು ದಾಖಲಾಗಿದ್ದಾರೆ.












Click it and Unblock the Notifications