ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ, ಸೆಪ್ಟೆಂಬರ್, 22: ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಅಂತಲೇ ಹೆಸರುವಾಸಿಯಾಗಿರುವ ಕಿಮ್ಸ್ ಮತ್ತೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಮುನ್ನೆಲೆಗೆ ಬಂದಿದೆ. ಇದೀಗ ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಕಿಮ್ಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ.
ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಕಿಮ್ಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮುಂಡಗೋಡ ತಾಲೂಕಿನ ಕಾತೂರಿನ 40 ವರ್ಷದ ಫಕ್ಕೀರಪ್ಪ ಎಂಬುವವರ ಮೇಲೆ ಜುಲೈ 31ರಂದು ಕರಡಿ ದಾಳಿ ಮಾಡಿತ್ತು. ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ಅವರಿಗೆ ಸೆಪ್ಟೆಂಬರ್ 12ರಂದು ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಥಾನಿ ಹೇಳಿದರು.
ಮತ್ತೊಮ್ಮೆ ಕಿಮ್ಸ್ನಿಂದ ಮಹತ್ವದ ಕಾರ್ಯ
ಹೀಗೆ ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಹೊಂದಿರುವ ಕಿಮ್ಸ್ ಆಸ್ಪತ್ರೆಯ ವೈದ್ಯರು ಇದೀಗ ಯಶಸ್ವಿ ಚಿಕಿತ್ಸೆ ಮೂಲಕ ಫಕ್ಕೀರಪ್ಪ ಎನ್ನುವವರ ಜೀವವನ್ನು ಉಳಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಬೆಂಗಳೂರಿನಂತಹ ದೂರದ ಸ್ಥಳಗಳಿಗೆ ಹೋಗುವ ಅನಿವಾರ್ಯತೆ ಈ ಹಿಂದಿತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು. ಹಣ ಭರಿಸಲಾಗದೆ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲೂ ಆಗದೆ ಸಾಕಷ್ಟು ಬಡ ಜನರು ಸಾವಿಗೀಡಾದ ಉದಾಹರಣೆಗಳು ಇವೆ.

ಕಿಮ್ಸ್ಗೆ ದಾಖಲಾಗುವಂತೆ ಫಕೀರಪ್ಪಗೆ ಸೂಚನೆ
ಫಕೀರಪ್ಪ ಅವರು ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆದಿದ್ದರು. ನಂತರ ವೈದ್ಯರು ಕಿಮ್ಸ್ಗೆ ದಾಖಲಾಗುವಂತೆ ಸೂಚಿಸಿದ್ದರು. ಮುಖ ಮತ್ತು ಕಣ್ಣಿನ ಭಾಗದ ಮೂಳೆಯನ್ನು ಕರಡಿ ಕಿತ್ತುಕೊಂಡು ಹೋಗಿತ್ತು. ಅಲ್ಲದೇ ಕೈಗಳಿಗೆ ಗಾಯವನ್ನು ಮಾಡಿತ್ತು. ರೆಟಿನಾ ಭಾಗ ಹಾಳಾಗಿರಲಿಲ್ಲ. 3ಡಿ ಕಸ್ಟಮೈಜ್ಡ್ ಟೈಟಾನಿಯಂ ಇಂಪ್ಲಾಂಟ್ ಅಳವಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಣ್ಣ ಆಪರೇಶನ್ ಮಾಡಿದರೆ ಮೊದಲಿನ ಹಾಗೆ ಕಣ್ಣುಗಳು ಕಾಣಿಸಲಿವೆ ಎಂದು ವೃದ್ಯರು ತಿಳಿಸಿದ್ದಾರೆ. ಡಾ. ಮಂಜುನಾಥ್ ವಿಜಾಪುರ, ಡಾ.ವಸಂತ ಕಟ್ಟೀಮನಿ, ಡಾ. ವಿವೇಕಾನಂದ ಜೀವಣಗಿ, ಡಾ.ಧರ್ಮೇಶ ಹಾಗೂ ಡಾ.ಸ್ಪೂರ್ತಿ ತಂಡದವರು ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ಮತ್ತೆ ಕಿಮ್ಸ್ ಹೆಗ್ಗಳಿಕೆಯನ್ನು ಹೆಚ್ಚು ಮಾಡಿದ್ದಾರೆ.
ವೈದ್ಯರ ಅದ್ಭುತ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ
ಬಡ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಪ್ರಶಂಸೆಗೆ ಪಾತ್ರವಾಗಿದೆ. ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡಿಸಿಕೊಂಡು ಇಲ್ಲಿನ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ಮಾಡಿದ್ದಾರೆ. ವ್ಯಕ್ತಿಯ ಮುಖ ಮತ್ತು ಕಣ್ಣಿನ ಮೇಲೆ ಆದಂತಹ ತೀವ್ರವಾದ ಗಾಯವನ್ನು ಗುಣಪಡಿಸುವುದು ಸವಾಲಾಗಿತ್ತು. ಶಸ್ತ್ರಚಿಕಿತ್ಸೆಯು ಜೀವಕ್ಕೆ ಅಪಾಯಕಾರಿ ಮತ್ತು ಸವಾಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ಯಾವುದೇ ಖಾಸಗಿ ಆಸ್ಪತ್ರೆಗೆ ಸರ್ಕಾರಿ ಆಸ್ಪತ್ರೆ ಕಡಿಮೆ ಇಲ್ಲ ಎಂಬುದನ್ನು ಕಿಮ್ಸ್ ವೈದ್ಯರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇನ್ನು ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.












Click it and Unblock the Notifications